Monday, March 5, 2012

ಕೋಟೆಯೊಳು ಸುತ್ತಿದಾಗ

ಇಲ್ಲೇ ಓಡಾಡಿರಬಹುದು ರಾಣಿಯೊಬ್ಬಳು, ಸದ್ದಿಲ್ಲದಂತೆ ಅತ್ತಿರಬಹುದು
ಸೇವಕಿಯೋರ್ವಳು ಗಂಧ ತೀಡಿರಬಹುದು, ರಾಣಿಯ ಬಗ್ಗೆ ಮರುಕಪಟ್ಟಿರಬಹುದು
ಯಾರದೋ ಕಣ್ಣಿನ ತಂಪ ನೆಳಲಲ್ಲಿ ಬೆಳೆದು ಕಟ್ಟುಪಾಡಿಗಳಿಲ್ಲದೆ
ಹಾರಿದ ಹಕ್ಕಿಯ ತಂದು ಚಿನ್ನದ ಪಂಜರದಲ್ಲಿರಿಸಹರಲ್ಲಾ
ಕಳೆದ ಕಾಲ ಕನಸೇ, ಮತ್ತೆಂದೂ ತಿರುಗಿ ಬಾರದಲ್ಲ ?
ಬದುಕು ಇಷ್ಟವಿಲ್ಲದನ್ನು ಮಾಡುವ ಬಲವಂತದ ಊಟವೇ 
ಇದೇ ಬಾವಿಗೆ, ಆ ಪಂಜರದಿಂದ ಹೊರಬಿದ್ದು ಹಾರಿರಬಹುದೇ ಯುವತಿ
ಹಾರುವಾಗ ಕಲ್ಲಿಗೆ ಬಡಿದ ಶಬ್ದಕ್ಕೆ ಕಿಂಚಿತ್ತಾದರೂ ಅಂಜಿರಬಹುದೇ ರಾಜನ ಹೃದಯ
ಅಂತ:ಪುರದ ತುಂಬಾ ರಾಣಿಯರ ಜಾತ್ರೆ, ಓರ್ವರಾದರೂ ಕೇಳಿರಬಹುದೇ ಅವರ ಮನದ ಯಾತನೆ
ಕೋಟೆ-ಕೊತ್ತಲಗಳೂ ಮಣ್ಣಾಗುತ್ತಿವೆ, ಯಾವ ವ್ಯಾಮೋಹವಿತ್ತೋ ಆ ಸಾಮ್ರಾಟನಲ್ಲಿ ತನ್ನ ಬಗ್ಗೆಯೇ
ತಾ ಇಲ್ಲವಾದರೆ ಅವರೂ ಸಾಯಗೊಡಬೇಕೆಂಬ ಕ್ರೂರತನ ಏಕೋ
ಬದುಕುವ ಆಸೆ ಅವರಿಗಿಲ್ಲವಾಗಿತ್ತೇ, ಅಥವ ಹೊತ್ತು ತಂದು ಅಗ್ನಿಗೆ ಆಹಾರವೀಯುತ್ತಿದರೇ
ಒಂದೇ ಒಂದು ಸುಳಿವು ನೀಡಿರಿ ಓ ಗೋಡೆಗಳೆ? ಏನೇನು ನಡೆದಿತ್ತು ಇಲ್ಲಿ
ಮೂಕ ಸಾಕ್ಷಿಗಳಾಗಿ ಏಕೆ ನಿಂತಿದ್ದೀರಿ? ರಾಜಂದಿರೆಲ್ಲಾ ಮಣ್ಣಲ್ಲಿ ಮಣ್ಣಾಗಿ ಹೋದರು
ಇನ್ನಾದರೂ ಮಾತನಾಡಿ, ದೌರ್ಜನ್ಯವ ಹೇಳಲು ಇಷ್ಟವಿರದಿದ್ದಲ್ಲಿ ವೈಭವವನ್ನಾದರೂ ಹೇಳಿ
ಇಲ್ಲಿ ಆನೆ-ಕುದುರೆಗಳ ಹೆಜ್ಜೆ ಗುರುತಿಹುದಲ್ಲ, ಅವಾದರೂ ಸಂತಸದಲ್ಲಿದ್ದವೇ
ನೂರಾರು ನರ್ತಕಿಯರು-ವಿದೂಷಕರಿದ್ದರಲ್ಲ, ಅವರು ನಿಮ್ಮ ರಂಜಿಸಿದರೇ
ಅಥವಾ ಅವರ ಕಣ್ಣಲಿ ತುಂಬಿದ್ದ ವಿಷಾದದ ಛಾಯೆಯ ನೀವು ಕಂಡಿರಾ
ಕಾಲ ಚಕ್ರ ಒಮ್ಮೆ ಹಿಂತಿರುಗು, ನಡೆದಿದ್ದು ಏನೆಂದು ಒಂದು ತುಣುಕು ತೋರಿಸು.




No comments:

Post a Comment