Monday, July 2, 2018

satyajit ray

ಯಾವ ಇಸವಿ ನೆನಪಿಲ್ಲ, ತುಷಾರದಲ್ಲಿ ಕಾರ್ವಸ್ ಎಂಬ ಜಾಣ ಕಾಗೆಯೊಂದರ ಕಥೆ ಓದಿದ್ದೆ. ಒಳ್ಳೆಯ ಮನಸ್ಸಿನ, ಭಾವುಕ ವಿಜ್ಞಾನಿಯೊಬ್ಬ ಕಾಗೆಯ ಜೊತೆಗೆ ಸ್ನೇಹ ಬೆಳೆಸಿ, ಅದನ್ನು ತರಬೇತಿಗೊಳಿಸಿ ಜಾಣನನ್ನಾಗಿಸುವ ಫ್ಯಾಂಟಸಿ ಕಥೆಯದು. ಮೊದಲ ಓದಿಗೆ ಅನಿಸಿದ್ದು, ಇದು ಖಂಡಿತಾ ಇಂಗ್ಲಿಷ್ ಕಥೆ, ಅದನ್ನು ಯಾರೋ ಅನುವಾದಿಸಿದ್ದಾರೆ ಎಂದು. ಆಮೇಲೆ ಅದೆಷ್ಟು ಸಲ ಓದಿದ್ದೇನೋ ತಿಳಿದಿಲ್ಲ, ಆ ಕಥೆ ತಲೆಯಲ್ಲಿ ಅಚ್ಚೊತ್ತಿದಂತೆ ಕುಳಿತುಬಿಟ್ಟಿತ್ತು, ಸಾಲದೆಂಬಂತೆ ಮನೆ ಹಿತ್ತಿಲಿಗೆ ಬರುವ ಕಾಗೆಗಳನ್ನೆಲ್ಲ ಗಮನವಿಟ್ಟು ನೋಡೋದು, ಯಾರಿಗೊತ್ತು ನನಗೂ ಒಂದು ಕಾರ್ವಸ್ ಸಿಗಬಹುದು, ಅದೂ ನನ್ನ ಜತೆ ಮಾಥ್ಸ್, ನಂಬರ್ಸ್ ಎಲ್ಲಾ ಕಲೀಬಹುದು ಎಂಬ ಕನಸುಗಳು ಬೇರೆ. ಆ ತುಷಾರವನ್ನು ನನ್ನ ನೋಟ್ ಬುಕ್ಕಿನೊಳಗೆ ಅಡಗಿಸಿ ಕದ್ದು ತಿನ್ನುವ ಬೆಲ್ಲದಂತೆ ಪದೇ ಪದೇ ಓದಿ ಖುಷಿಪಡುತ್ತಿದ್ದೆ. (ತರುವ ಪ್ರತೀ ಮಾಸಪತ್ರಿಕೆಗಳನ್ನು ತಿಂಗಳು ಹಾಗೂ ವರ್ಷಗಳ ಪ್ರಕಾರ ನೀಟಾಗಿ ಜೋಡಿಸಿ ಇಡುತ್ತಿದ್ದರು ನನ್ನ ತಂದೆ) ಸ್ವಲ್ಪ ಬುದ್ಧಿ ಬಂದ ಮೇಲೆ, ಆ ಕಥೆಯ ಬರಹಗಾರನ ಬರೆದ ಬೇರೆ ಕಥೆಗಳನ್ನೂ ಓದಬೇಕೆಂಬ ಹುಚ್ಚು ಬಲಿಯಲಾರಂಭಿಸಿತು. ಆ ಕಥೆಗಾರನ ಬಗ್ಗೆ ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಕೇಳಿದ, ನೋಡಿದ ನೆನಪು. ಆತ ಸತ್ಯಜಿತ್ ರೇ. ಒಬ್ಬ ಒಳ್ಳೆ ಚಿತ್ರ ನಿರ್ದೇಶಕ ಎಂಬ ಮಾಹಿತಿ ಬಿಟ್ಟರೆ ಬೇರೆ ಏನೂ ತಿಳಿಯಲಿಲ್ಲ. ಯಥಾಪ್ರಕಾರ ಉಡುಪಿಯಲ್ಲಿ ಇದ್ದ ಕಾಮತ್ ಲೈಬ್ರರಿ, ಸಾರ್ವಜನಿಕ ಗ್ರಂಥಾಲಯಗಳನ್ನು ತಲೆ ಕೆಳಗೆ ಮಾಡಿದರೂ ಯಾವುದೇ ಪುಸ್ತಕವೂ ನನಗೆ ಸಿಗಲಿಲ್ಲ. ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಧಾರವಾಡ, ಸಾಹಿತ್ಯ ಸಮ್ಮೇಳನಗಳು, ಬೆಂಗಳೂರಿನ ಎಲ್ಲಾ ಪುಸ್ತಕ ಮಳಿಗೆಗಳು ಹೀಗೆ ಹೋದ ಕಡೆಯೆಲ್ಲಾ ಜಾಲಾಡಿದೆ, ಇಂಗ್ಲೀಷಿನಲ್ಲಿ ಬೇರೆ ಬೇರೆ ಪುಸ್ತಕಗಳು ದೊರೆತವೇ ಹೊರತು, ಅನುವಾದಿತ ಕಥಾ ಸಂಕಲನ ಸಿಗಲಿಲ್ಲ. ಆ ವ್ಯಕ್ತಿಯ ಬಗ್ಗೆ, ಪಥೇರ್ ಪಾಂಚಾಲಿಯ ಬಗ್ಗೆ ಇನ್ನಷ್ಟು ತಿಳಿಯಿತು, ಎಂತಹ ಅದ್ಭುತ ವ್ಯಕ್ತಿ ಎಂಬುದು ಅರಿವಾದಂತೆ ಕನ್ನಡಕ್ಕೆ ಅನುವಾದವಾದ ಅವರ ಎಲ್ಲ ಕಥೆಗಳನ್ನೂ ಓದಬೇಕೆಂಬ ಚಡಪಡಿಕೆ ಶುರುವಾಯಿತು. ಇವೆಲ್ಲದರ ಮಧ್ಯೆ ನಾನು ಅಡಗಿಸಿಟ್ಟ ಪ್ರತಿ ಕಳೆದು ಹೋಗಿ ಅನುವಾದಕರ ಹೆಸರೂ ತಿಳಿಯದೆ ಒದ್ದಾಡುವಂತಾಯಿತು. ಇಂಟರ್ನೆಟ್, youtube ಬಂದ ಮೇಲೆ ಅವರ ಇಂಡಿಗೋ ಕಥೆಯನ್ನು ಇಂಗ್ಲೀಷಿನಲ್ಲಿ ಓದಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಇದರ ಮಧ್ಯೆ ಸಾಹಿತ್ಯ ಸಮ್ಮೇಳನವೊಂದರಲ್ಲಿ ಸತ್ಯಜಿತ್ ರೇ ಕಥೆಗಳು ಎಂಬ ಪುಸ್ತಕ ಕಣ್ಣಿಗೆ ಬಿದ್ದಾಗ ಕುಣಿಯುವುದೊಂದೇ ಬಾಕಿ. ಈ ಪುಸ್ತಕ ಕೈಗೆ ಬಂದ ನಂತರ ಕಡಿಮೆಯೆಂದರೆ ೨೦ ಸಲವಾದರೂ ಓದಿರಬೇಕು. ಪ್ರತೀ ಸಲವೂ ಅದೇ ಬೆರಗು, ಕೌತುಕವನ್ನು ಹುಟ್ಟಿಸುತ್ತದೆ. ಎಂತೆಂತ ಕಥೆಗಳಪ್ಪ! ಈ ಮನುಷ್ಯನಿಗೆ ಈ ಥರದ ಯೋಚನೆಯಾದರೂ ಹೇಗೆ ಹುಟ್ಟಿತ್ತು ?
ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ, ಅನುವಾದಕ ಹೇಳುವಂತೆ ಕಲ್ಪನೆ, ವಾಸ್ತವ, ಫ್ಯಾಂಟಸಿ, ವೈಜ್ಞಾನಿಕ ಸತ್ಯ, ಮನುಷ್ಯ ಸ್ವಭಾವದ ನಿಗೂಢತೆ ಹೀಗೆ ಅನೇಕ ಸಂಗತಿಗಳನ್ನು ಉಚಿತ ಪ್ರಮಾಣದಲ್ಲಿ ಬಳಸಿ ರಚಿತವಾದ ಕಥೆಗಳಿವು.
ಖಗಂನಲ್ಲಿ ಹಾವಾಗುವ ಮನುಷ್ಯ, ಸಿನಿಮಾದಲ್ಲಿ ಅಭಿನಯಿಸುವ ಪಟೊಲ್ ಬಾಬು (youtube ಅಲ್ಲಿ ಕಾಮಿಕ್ ಬುಕ್ ಇದೆ), ತುಳಸಿಬಾಬುವಿನ ಬಿಲ್ ಎಂಬ ಹಕ್ಕಿ, ಅಶಮಂಜ ಬಾಬುವಿನ ನಗುವ ಬ್ರೌನಿ, ತದ್ರೂಪಿಯ ರತನ್ ಬಾಬು - ಮಣಿಲಾಲ್, ಪದೇ ಪದೇ ಕಾಡುವ ನೀಲಿ ತೋಟದ ಇರುಳು (ಇಂಡಿಗೋ), ದ್ವಂದ ಯುದ್ಧ, ಮೊದಲೇ ಹೇಳಿದ ಜಾಣ ಕಾರ್ವಸ್, ಅದ್ಭುತ ಟೆಲಸ್, ಸಹಾರಾ ರಹಸ್ಯದ ಡೆಮಿಟ್ರಿಯಸ್ ಎಂಬ ಜೀವವಿಜ್ಞಾನಿ, ಕಂಡೂ ಕಾಣದ ಏಕ ಶೃಂಗಿ ಎಲ್ಲರೂ ಈ ಪುಸ್ತಕದ ಪಯಣದ ಸಹಪಯಣಿಗರು. ಪ್ರತೀ ಕಥೆಯನ್ನೂ ನಿಧಾನವಾಗಿ ಹನಿಹನಿಯಾಗಿ ಚಪ್ಪರಿಸಿಕೊಂಡು ಓದಬಹುದು. ಕಣ್ಣು ಮುಚ್ಚಿದರೆ ಅತಿಮಾನುಷ ಲೋಕಕ್ಕೆ ತೆರಳಿದ ಅನುಭವ. ವಾಸ್ತವ ಮತ್ತು ಫ್ಯಾಂಟಸಿ ನಡುವಿನ ಗೆರೆಯನ್ನು ಅಲ್ಲಲ್ಲಿ ಸತ್ಯಜಿತ್ ರೇ ಅಳಿಸಿಬಿಡುತ್ತಾರೆ. ಪ್ರಾಣಿ, ಪಕ್ಷಿಗಳು ಮತ್ತು ಪರಿಸರದ ಅವರ ಅಪಾರ ಜ್ಞಾನ ಪದೇ ಪದೇ ಈ ಕಥೆಗಳಲ್ಲಿ ಕಂಡುಬರುತ್ತದೆ. ಆಸಕ್ತಿದಾಯಕ ವಿಚಾರಗಳನ್ನು ತಿಳಿಸುತ್ತದೆ. ಮಾನಸ ಸರೋವರದಲ್ಲಾಚೆಯೆಲ್ಲೋ ಇರಬಹುದಾದ ಡುಂಗ್-ಲುಂಗ್-ಡೋ ಕೈಬೀಸಿ ಕರೆಯುತ್ತದೆ! ಪುಸ್ತಕ ಕೆಳಗಿಟ್ಟ ಮೇಲೆ ಒಂದು ಚಿಕ್ಕ ನಿಟ್ಟುಸಿರು,' ಅಯ್ಯೋ, ಕಥೆಗಳು ಮುಗಿದೇ ಹೋದವಲ್ಲ? '
ತದ್ರೂಪಿ ಕಥೆಯನ್ನು ನಾನು ಓದಿ ರೆಕಾರ್ಡ್ ಮಾಡಿಕೊಂಡು ನನ್ನ ಮಗನಿಗೆ ಕೇಳಿಸಿದ್ದೇನೆ. ದೊಡ್ಡವರಿಗಷ್ಟೇ ಅಲ್ಲದೆ ಮಕ್ಕಳಿಗೆ ಕಾಣಿಕೆಯಾಗಿ ನೀಡಬಹುದಾದ ಒಂದೊಳ್ಳೆ ಪುಸ್ತಕ.
ಪ್ರಿಸಂ ಬುಕ್ಸ್ ಇದನ್ನು ಪ್ರಕಟಿಸಿದ್ದು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿರುವವರು ಎನ್ ಶ್ರೀನಿವಾಸ್ ಉಡುಪ.

1 comment:

  1. ಸತ್ಯಜಿತ್ ರೇ ಅವರ ಕಥೆಗಳನ್ನು ನಾನೂ ಓದಿದ್ದೇನೆ. ನಿಜಕ್ಕೂ ಅವರ ಕಥೆಗಳನ್ನು ವರ್ಣಿಸಲು ನನ್ನಲ್ಲಿ ಪದಗಳೇ ಇಲ್ಲ. ಮನುಷ್ಯನ ಕಲ್ಪನಾಶಕ್ತಿಯ ಪರಮಾವಧಿಯನ್ನು ಅವರಲ್ಲಿ ನಾನು ಕಂಡಿದ್ದೇನೆ. ಎಷ್ಟು ಸಲ ಓದಿದರೂ ಸ್ವಲ್ಪವೂ ಬೇಸರವೆನ್ನಿಸದ ಕಥೆಗಳವು.

    ReplyDelete