Monday, July 2, 2018

Walking with wolves

1 year ago,

ವಿಶ್ವವಾಣಿ ವಿರಾಮದಲ್ಲಿ ಪ್ರಕಟವಾದದ್ದು , thanks to Raghu Apara.
ಇದುವರೆಗೂ ತೋಳಗಳನ್ನ ಬೇಟೆಯಾಡಿಯೇ ಗೊತ್ತಿದ್ದ ಅಂಬರೀಷ ಇವತ್ತು ಒಂದು ವಾರದ ಹಿಂದೆಯಷ್ಟೇ ಸತ್ತ ಯುವ ತೋಳಗಳ ಎಲುಬುಗಳನ್ನು ಪರೀಕ್ಷಿಸುತ್ತಿದ್ದ ಗುಂಪಿನಿಂದ ಬೇರೆಯಾಗಿ ನಿಂತು ಯೋಚಿಸುತ್ತಿದ್ದಾನೆ. ಸುಮಾರು ಹದಿನೆಂಟು ತಿಂಗಳುಗಳಿಂದ ಹಿಂಬಾಲಿಸುತ್ತಿದ್ದ ಮರಿಗಳು ಇಂದು ಕೇವಲ ಎಲುಬುಗಳಾಗಿವೆ ಅನ್ನುವುದು ಅವನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಅವನ ಎದೆಯಾಳದಲ್ಲಿ ಏನು ನಡೆದಿರಬಹುದು? ಬಂಡೆಕಲ್ಲಿನ ರೂಪದಲ್ಲಿ ಕೂತ ದೇವರಿಗೆ ಕಾಯಿ ಒಡೆದು ನಮಸ್ಕರಿಸುತ್ತಾನೆ, ಯಾವುದೋ ದೇವಳದ ಕಲ್ಲಿನ ನಂದಿಯ ಕಾಲಿಗೆ ತಲೆಯಿಡುತ್ತಾನೆ. ಅವೆಲ್ಲವೂ ಮನದ ಕಲ್ಲನ್ನು ಕರಗಿಸುವ ಯತ್ನವೇ ಅಥವಾ ಪೂರ್ವ ಕರ್ಮಗಳಿಗೆ ಪ್ರಾಯಶ್ಚಿತವೇ?ತನಗೆ ತೊಂದರೆ ಬಂದೆಂತು ದ್ವೇಷ ಸಾಧಿಸುವ, ವಿನೋದಕ್ಕೆಂದು ಬೇಟೆಯಾಡುವ ಮನುಷ್ಯ ಜೀವಿಯ ಮನಕ್ಕೂ ಅಂಬರೀಷನ ಮನಕ್ಕೆ ಹೊಳೆದಿರಬಹುದಾದ ಭಾವ ತಟ್ಟಬಹುದೇ? ಈ ದೃಶ್ಯ ವನ್ಯಜೀವಿ ರಕ್ಷಣೆ ಹಾಗೂ ಉತ್ತಮ ಛಾಯಾಗ್ರಹಣಕ್ಕಾಗಿ ಪ್ರಶಸ್ತಿ ಪಡೆದಿರುವ  ಸಾಕ್ಷ್ಯ ಚಿತ್ರದ್ದು.
ಭಾರತ ದಕ್ಷಿಣ ಭಾಗಗಳಲ್ಲಿರುವ ತೋಳಗಳ ಮೇಲೆ ಸುಮಾರು ಮೂರು ವರ್ಷಗಳ ಕಾಲ ಕೃಪಾಕರ-ಸೇನಾನಿ ಜೋಡಿ ಮತ್ತು ಜೋಸೆಫ್ ರಾಜ ನಡೆಸಿರುವ ಸಂಶೋಧನೆಯ ಫಲವೇ 'ವಾಕಿಂಗ್ ವಿಥ್ ವೂಲ್ವ್ಸ್ ' ಸಾಕ್ಷ್ಯ ಚಿತ್ರ. ಕಾಲಗರ್ಭಕ್ಕೆ ಸೇರಿ ಹೋಗುತ್ತಿರುವ ಅಲೆಮಾರಿ ಕುರಿಗಾಹಿಗಳು ಹಾಗೂ ಮಡುಚು ಕಿವಿಯ ತೋಳರಾಯನ ಸಂಸಾರದ ಕಥೆಯನ್ನು ಕಲಾತ್ಮಕ ಹಾಗೂ ಕುತೂಹಲಕಾರಿಯಾಗಿ ಚಿತ್ರರೂಪಕ್ಕೆ ತಂದ ಹೆಗ್ಗಳಿಕೆ ಈ ತಂಡದ್ದು. ಕುರುಚಲು ಗಿಡಗಳ ಬಯಲಿನ  ನಡುವೆ ಮಣ್ಣಿನ ಮಧ್ಯದಿಂದ ಪ್ರತ್ಯಕ್ಷವಾಗುವ ಚಿತ್ರದ ಹೀರೊ ಮಡುಚು ಕಿವಿ ಹಾಗೂ ಅವನ ಮಕ್ಕಳ ಒಡನಾಟ, ಬೇಟೆಯ ವಿಧಾನಗಳು, ಅಸಾಧ್ಯ ಬುದ್ಧಿಶಕ್ತಿ ಅತೀ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಮಡಚು ಕಿವಿಯ ಮಗ ಮತ್ತು ಬೇಲಿಯೊಳಗೆ ಭದ್ರವಾಗಿರಿಸಿರುವ ಚಿಕ್ಕ ಮರಿಗಳು ಹಾಗೂ ಹುಷಾರಿಲ್ಲದ ಕುರಿಗಳ ಮುಖಾಮುಖಿಯಂತೂ ರೋಮಾಂಚನ ಹುಟ್ಟಿಸುತ್ತದೆ. ಅದನ್ನು ಅತ್ಯದ್ಭುತವಾಗಿ ತಂಡ ಚಿತ್ರೀಕರಿಸಿದೆ.
ಕುರಿಗಾಹಿಗಳ ತಂಡದ ಮುಖಂಡ ರಾಮಪ್ಪನ ತೋಳರಾಯನ ಬಗೆಗಿನ ಪ್ರೊಟೆಕ್ಟಿವ್ ನೆಸ್ ಹಿಂದಿರುವ ಒಂದು ಸುಂದರ (ಖಂಡಿತಾ ಮೂಢವಲ್ಲದ) ನಂಬಿಕೆ ಮನಸ್ಸು ತಟ್ಟುತ್ತದೆ. ಅದೇ ವೇಳೆ, ಮನುಷ್ಯರಿಟ್ಟ ವಿಷ ತಿಂದು ಸಾಯುವ ಮಡುಚು ಕಿವಿಯ ಯುವ ಮಕ್ಕಳ ಎಲುವುಗಳು ಕಣ್ಣಿಗೆ ಕಟ್ಟುತ್ತವೆ.

ಅದಾಗಲೇ ಕಾಡು ನಾಯಿಗಳ 'ದಿ ಪ್ಯಾಕ್' ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಪ್ರಸಿದ್ಧಿ ಪಡೆದ ವೈಟ್ಲಿ ಅವಾರ್ಡ್ ಪಡೆದ ಕೃಪಾಕರ-ಸೇನಾನಿ ಜೋಡಿಯ, ಸಹಬಾಳ್ವೆಯ ಬಗ್ಗೆ ಮಾತನಾಡುವ ೫೧ ನಿಮಿಷಗಳ ಈ ಚಿತ್ರ ಒಂದು ಸುಂದರ ಕಾವ್ಯ. ತಪ್ಪದೆ ನೋಡಿ.

No comments:

Post a Comment