Tuesday, April 23, 2019

ಬೆಳಗು


ಅರಿಯದು ಅಳವು ತಿಳಿಯದು ಮನವು
-ಬೇಂದ್ರೆ

ಡ್ರೈವರ್ ಬಿಟ್ಟರೆ ಈ ನೈಟು ಬಸ್ಸಿನಲ್ಲಿ ತಾನೊಬ್ಬಳೇ ಎಚ್ಚರವಿರುವುದು ಅನಿಸಿ ಪಕ್ಕಕ್ಕೆ ತಿರುಗಿ ನೋಡಿದರೆ ಪಕ್ಕದ ಸೀಟಿನಲ್ಲಿದ್ದ ಮಧ್ಯವಯಸ್ಕ ಮಹಿಳೆ ನಿದ್ದೆಯಲ್ಲಿ ಕಳೆದುಹೋಗಿದ್ದರು. ಬ್ಯಾಗಿನ ಹಿಂದಿನ ಜಿಪ್ಪಿನಿಂದ ಸೆಲ್ ತೆಗೆದು ನೋಡಿದರೆ ೧೨.೪೦. ಅದಾಗ್ಲೇ ೩ ಘಂಟೆ ಮೇಲಾಗಿದೆ ಬೆಂಗಳೂರು ಬಿಟ್ಟು, ಎಲ್ಲಿರಬಹುದು ಇವಾಗ ಎಂದುಕೊಂಡು ಹೊರಗಿಣುಕಿದರೆ ಏನೂ ಕಾಣಲಿಲ್ಲ. ಕಣ್ಣು ಮುಚ್ಚಿ ಸೀಟಿಗೆ ತಲೆಯಾನಿಸಿದರೆ ಪ್ರೀತಿಭರಿತ ಕಣ್ಣುಗಳಿಂದ ನೋಡುತ್ತಾ, ದೊಡ್ಡ ಕೆಂಪು ಕುಂಕುಮವಿಟ್ಟ ಮಾರ್ದವ ಮುಖದ ಚಂದಿರನಂತಹ ಚಿಕ್ಕಿ ಕಣ್ಣೆದೆರು ಬಂದು ನಕ್ಕಂತಾಯಿತು. ಕಥೆ ಹೇಳುತ್ತಾ, ಮೊಸರನ್ನ ತಿನ್ನಿಸುತ್ತ, ಜಡೆಗಳಿಗೆ ರಿಬ್ಬನ್ ಸುತ್ತುತ್ತಾ, ಜ್ವರ ಬಂದಾಗ ಅಮ್ಮನೊಟ್ಟಿಗೆ ತಾನೂ ಕೂತು, ಹಣೆ ಸವರುತ್ತಾ ..ಓಹ್ ಚಿಕ್ಕಿ ಎಂದು ನನಗೇ ತಿಳಿಯದೇ ಪಿಸುಗುಟ್ಟಿದೆ. 
ಆಫೀಸಿನಲ್ಲಿ ಸಂಜೆ ಆರರ ಸಮಯದಲ್ಲಿ ಯಾವುದೋ ಶೋಗಾಗಿ ಬರೆಯುತ್ತಾ ಕೂತವಳು ಆರನೇ ಸಲ ಅಮ್ಮನ ಕರೆ ಬಂದಾಗ ಬೇಸರದಿಂದಲೇ ಎತ್ತಿ, ಏನಮ್ಮಾ, ಕೆಲಸ ಅಂದಷ್ಟೇ ಹೇಳಿದ್ದು! ಆ ಕಡೆಯಿಂದ ಅಮ್ಮ ಕಿರುಚುತ್ತಿದ್ದಳು, ನಡುಗುತ್ತಿದ್ದ ಅವಳ ದನಿಯಲ್ಲಿ ಸಿಟ್ಟೂ, ಅಳೂ ಎರಡೂ ಇದ್ದವು.  “ಒಂದು ವಾರದಿಂದ ಹಾಸಿಗೆ ಹಿಡಿದ್ದಿದ್ದಾಳೆ ನಿನ್ನ ಚಿಕ್ಕಿ, ತನ್ನ ಮಕ್ಕಳಿಗಿಂತ ಜಾಸ್ತಿಯೇ ಮಾಡಿದಳಲ್ಲ ನಿನಗೆ?,  ಅದೂ ಹೆತ್ತಮ್ಮ ನನಗಿಂತ ಜಾಸ್ತಿ!!  ಅಷ್ಟಕ್ಕೂ ಒಂದು ವೇಳೆ ಅವಳಿಂದಲೇ ಏನಾದರೂ ತಪ್ಪಾಗಿದ್ದರೆ ನೀ ಯಾರು ಕೇಳೋಕೆ, ನೀನು ಸಾಕಿದ್ಯಾ? ಮಾಧೂನ ಅವಳಲ್ಲದೇ ಯಾರು ನೋಡಿಕೊಳ್ಳುತ್ತಿದ್ದರು ಹೇಳೆ? ನಿನ್ನೆ ಮೊನ್ನೆ ಹುಟ್ಟಿದವರೆಲ್ಲಾ ನಮಗೆ ಬುದ್ಧಿ ಕಳಿಸೋಕೆ ಬರ್ತೀರಲ್ಲಾ, ಎಷ್ಟು ಹೇಳಿದರೂ ಒಂಚೂರೂ ಅರ್ಥ ಮಾಡಿಕೊಳ್ಳಲ್ಲ” ಎಂದು ಒಂದೇ ಉಸಿರಲ್ಲಿ ಅಬ್ಬರಿಸಿ ಕಾಲ್ ಕಟ್ ಮಾಡಿದ್ದಳು. ಪರಿಸ್ಥಿತಿ ಇಷ್ಟು ಗಂಭೀರವಾಗಿರಬಹುದೆಂಬ ಅರಿವಾಗಿರಲಿಲ್ಲ. ಕಳೆದೆರಡು ದಿನಗಳಿಂದ ಶೂಟಿಂಗ್ ಸ್ಪಾಟಿಗೆ ಹೋಗೋದು, ರಾತ್ರಿ ತಡವಾಗಿ ಮನೆಗೆ ಬಂದು ಮಲಗೋದೇ ಆಗಿತ್ತು. ಯಾವ ಕರೆ, ಮೇಸೇಜ್ ನೋಡಿರಲಿಲ್ಲ. ಇವತ್ತು  ನೋಡಿದರೆ ಅಪ್ಪ, ಮಹೇಶ, ಪುರು ಮೂವರ ಮೊಬೈಲುಗಳಿಂದ ರಾಶಿಗಟ್ಟಲೆ ಕರೆಗಳು ಬಂದಿವೆ. ... ಗಾಭರಿಯಿಂದ ಕೈಕಾಲು ನಡುಗಲು ಆರಂಭವಾಗಿತ್ತು. ಅಪ್ಪನಿಗೆ ಕರೆ ಮಾಡಿದರೆ, “ಒಂದ್ಸಲ ಬಂದು ಹೋಗು ಮಂದಾ, ಚಿಕ್ಕಿ ನಿನ್ನನ್ನೇ ನೆನೆಸಿಕೊಳ್ಳುತ್ತಿದ್ದಾಳೆ” ಎಂದರು. ಇದ್ದಕ್ಕಿದ್ದಂತೆ ತಲೆಯಲ್ಲಿ ವಿಚಿತ್ರ ಸೆಳೆತ, ಅಲೆಗಳ ಅಬ್ಬರ ಮತ್ತು ಕಿವಿಯಲ್ಲಿ ಸಮುದ್ರದ ಘೋಷ...ಒಂಥರಾ ನಿರ್ವೇದದ ಸ್ಥಿತಿ. ಕಳೆದುಕೊಳ್ಳೋದು ಅನ್ನೋದು ಹೀಗಿರುತ್ತಾ ಎಂದು ಮೊದಲ ಬಾರಿಗೆ ಅನಿಸಿತು. ಅದು ಹೇಗೆ ಮನೆಗೆ ಬಂದು, ಕೈ ಸಿಕ್ಕಿದ್ದನ್ನು ತುರುಕಿ, ಬಸ್ಸಿನ ಆಫೀಸಿಗೆ ಕರೆ ಮಾಡಿ, ಸೀಟು ಬುಕ್ ಮಾಡಿ, ಮನೆಯಲ್ಲಿ ಇದ್ದಿದ್ದನ್ನು ತಿಂದ ಶಾಸ್ತ್ರ ಮಾಡಿ ಬಸ್ಸು ಹತ್ತಿ ಕೂತೆನೋ ನೆನಪಿಲ್ಲ. 
ಕಿಟಕಿಯಿಂದ ಹೊರಗೆ ಓಡುತ್ತಿರುವ ದೃಶ್ಯಗಳಂತೆ ಮನಸ್ಸಲ್ಲೂ ನೆನಪುಗಳು ಓಡುತ್ತಿದ್ದವು.

ಬಾಲ್ಯದಲ್ಲಿ, ಅಮ್ಮನಾದರೂ ಒಂದೆರಡು ಸಲ ಬೈದಿದ್ದು, ಕೈಯೆತ್ತಿದ್ದು ನೆನಪಿದೆ, ಚಿಕ್ಕಿ ಗದರಿದ್ದೂ ನೆನಪಿಲ್ಲ. ಇಡೀ ಕುಟುಂಬಕ್ಕೆ ಒಬ್ಬಳೇ ಹುಡುಗಿಯೆಂದು, ಮಹೇಶ, ಪುರು, ಬಾಲು ಯಾರಿಗೂ ಸಿಗದಷ್ಟು ಪ್ರೀತಿ ತನಗೇ ಸಿಕ್ಕಿತ್ತು. ಮನೆಯಿಂದ ಮಾರು ದೂರ ನಡೆದು, ಗದ್ದೆ, ಅಡಕೆ ತೋಟ ದಾಟಿ ಹೋಗಬೇಕಿತ್ತು ಶಾಲೆಗೆ ಬಸ್ಸು ಹತ್ತಲು. ಅಷ್ಟೂ ದೂರ ದಿನಕ್ಕೆರಡು ಸಲ ನನ್ನ ಕಿರುಬೆರಳನ್ನು ತನ್ನ ಕಿರುಬೆರಳಲ್ಲಿ ಹಿಡಿದು ದಾರಿಯುದ್ದಕ್ಕೂ ಹರಟಿಕೊಂಡು, ನಗು ನಗುತ್ತಲೇ ಬರುತ್ತಿದ್ದಳಲ್ಲ ಚಿಕ್ಕಿ? ಗದ್ದೆ ಕೆಲಸದ ಆಳುಗಳ ಬೆಳಗ್ಗಿನ ಚಾ, ತಿಂಡಿಯಲ್ಲದೇ ನಾಲ್ಕೂ ಮಕ್ಕಳನ್ನು ಶಾಲೆಗೆ ರೆಡಿ ಮಾಡುವ ಕೆಲಸಗಳನ್ನು ಅಮ್ಮ, ಚಿಕ್ಕಿ ಇಬ್ಬರೂ ಮಾಡಬೇಕಿತ್ತು. ಆದರೆ ಚಿಕ್ಕಿಯೇ ಜಾಸ್ತಿ ಮಾಡುತ್ತಿದ್ದಿದ್ದು. ಅದರ ಮಧ್ಯದಲ್ಲೂ ತನ್ನ ಜಡೆ ಹಾಕಲು ಅದು ಹೇಗೆ ಸಮಯ ತೆಗೆಯುತ್ತಿದ್ದಳೋ? ಅವಳು ಹೇಗೆ ಬಾಚಿದರೂ “ಚಿಕ್ಕಿ, ಬಿಗಿ ಆಗ್ತಿಲ್ಲ, ಒಳ್ಳೆ ಕಪ್ಪೆ ಥರ ಬಾಚ್ತಿ, ಇವತ್ತು ಎಣ್ಣೆನೇ ಹೋಗಿಲ್ಲ, ನಾನು ಹೋಗಲ್ಲ ಶಾಲೆಗೆ” ಎಂದೆಲ್ಲಾ ಜೀವ ತಿಂದರೂ ಅವಳು ಸಿಟ್ಟು ಮಾಡಿಕೊಳ್ಳದೇ, ಸಮಾಧಾನಿಸಿ, ಮುದ್ದುಗರೆದು, ಸಂಜೆಗೆ ಸುಟ್ಟ ಗೇರುಬೀಜವೊ, ಬೆಣ್ಣೆಯೋ, ಸಿಹಿಗುಂಬಳ ಹೂವಿನ ಪೋಡಿಯೋ, ಎಳನೀರಿನತಿಳಿ ಗಂಜಿಯೋ ಕೊಡುತ್ತೇನೆ ಎಂದು ಆಮಿಷವೊಡ್ಡಿ ಕಳಿಸುತ್ತಿದ್ದಳು. ಶಾಲೆಗೆ ರಜೆಯಿದ್ದಾಗಲಂತೂ ಅವಳ ಶಯ್ಯಾಗೃಹದಲ್ಲೇ ತನ್ನ ವಾಸ.

ಒಂಚೂರು ಪುರುಸೊತ್ತು ಸಿಕ್ಕಾಗಲೋ ಅಥವಾ ಬತ್ತಿ ಹೊಸೆಯುತ್ತಾ, ಹೂವು ಕಟ್ಟುತ್ತಾ, ಅವಳು ಹೇಳುತ್ತಿದ್ದ ಕಥೆಗಳಿಂದಲೇ ಅಲ್ಲವೇ, ನನಗೆ ಓದೋ ಅಭ್ಯಾಸ ಶುರುವಾಗಿದ್ದು? ಡಿಂಗ, ಚಂದಮಾಮ, ಬಾಲಮಿತ್ರ, ತುಷಾರ, ತರಂಗ, ಕಸ್ತೂರಿ ಇದೆಲ್ಲವನ್ನೂ ಪಕ್ಕದ ತೋಟದ ಬಾಬಣ್ಣ ಮೇಷ್ಟ್ರಿಗೆ ಹೇಳಿ ತರಿಸಿಡುತ್ತಿದ್ದಳು. ಅವಳ ಹತ್ತಿರ ಇದ್ದಿದ್ದ
ರಷ್ಯಾ ದೇಶದ ಕಥೆಗಳು, ಮಾಷಾಳ ಹಾಸಿಗೆ, ಟಾಲ್ಸ್ಟಾಯ್ ಕಥೆಗಳು ಎಲ್ಲವನ್ನೂ ಅದೆಷ್ಟು ಸಲ ಕೂತು ನನಗಾಗಿ ಓದುತ್ತಿದ್ದಳು. ಅದೆಲ್ಲಿಂದ ತಂದು ಪೇರಿಸಿಟ್ಟಿದ್ದಳೋ ಗೊತ್ತಿಲ್ಲ,  ಬೆಳೆಯುತ್ತಾ ಹೋದಂತೆಲ್ಲಾ ಮುಚ್ಚಿಟ್ಟಿದ್ದ ಅದೆಷ್ಟು ಕಾದಂಬರಿಗಳು, ಕಥಾ ಸಂಕಲನಗಳು, ಕಾವ್ಯ ಸಂಪುಟಗಳು ಎಲ್ಲವೂ ಹೊರಬರುತ್ತಾ ಹೋದವು. ಈ ವಯಸ್ಸಿಗೆ ಇದೇ ಓದಬೇಕು ಎಂದು ಮೊದಲೇ ನಿರ್ಧಾರ ಮಾಡಿಟ್ಟವಳಂತೆ ನಾಲ್ಕೂ ಮಕ್ಕಳಿಗೂ ಓದಿನ ಹುಚ್ಚು ಹತ್ತಿಸಹೊರಟಳು. ಆದರೂ ತನ್ನಂತೆ ಯಾರೂ ಆಗಲಿಲ್ಲ. ಅವಳ ಮೆಲುದನಿಯಲ್ಲಿ ಕೇಳಿದ ಮೈಸೂರು ಮಲ್ಲಿಗೆ ಮತ್ತೆಂದೂ ಅಷ್ಟು ಸಿಹಿಯೆನಿಸಲಿಲ್ಲ. ಡಿಗ್ರಿ ಮಾಡಿ ತಾನಿವತ್ತು ಚಾನೆಲ್ ಒಂದರಲ್ಲಿ ಧಾರಾವಾಹಿಗಳಿಗೆ ಕಥೆ ಬರೆದು ನನ್ನ ಕಾಲ ಮೇಲೆ ನಿಂತಿದ್ದೀನಿ ಎಂದರೆ ಅವಳು ಕಲಿಸಿದ ಓದಿನಿಂದಲೇ ಅಲ್ಲವೇ?

ಬೆಳೆಯುತ್ತ ಬುದ್ಧಿ ಪಕ್ವವಾದಂತೆಲ್ಲಾ, ಡಿಗ್ರಿ ಮಾಡಿದ್ದವಳು ನಾಲ್ಕನೇ ಪಾಸ್ ಆದ ಮಾಧೂ ಚಿಕ್ಕಪ್ಪನನ್ನ ಹೇಗೆ ಮದುವೆಯಾದಳು ಎಂದು ಅದೆಷ್ಟು ಸಲ ಅಂದುಕೊಂಡಿದ್ದೇನೋ... ಕೇಳಿದಾಗೆಲ್ಲಾ “ಅವರಷ್ಟು ಒಳ್ಳೆಯವರು ಯಾರೂ ಸಿಗಲಿಲ್ಲ ಮಂದಾ” ಎಂದು ಕಣ್ಣಲ್ಲಿ ಹೊಳಪು ತುಳುಕಿಸುತ್ತಾ ಹೇಳುತ್ತಿದ್ದಳು. ಗದ್ದೆ, ತೋಟದ ಉಸ್ತುವಾರಿ, ಬೆಳೆ ಮಾರಾಟ, ಔಷಧಿ ಹೊಡೆಸೋದು, ಮುಡಿ ಅಕ್ಕಿ ಕಟ್ಟೋದು, ಆಳುಗಳಿಗೆ ಸಂಬಳ, ಅವರಿಂದ ಕೆಲಸ ತೆಗೆಸೋದು, ಹಬ್ಬ ಬಂದಾಗ ಇಡೀ ಮನೆಗೆ ಬಟ್ಟೆ ತರೋದು ಹೀಗೆ ಎಲ್ಲಾ ಕೆಲಸ ಮಾಡುತ್ತಿದ್ದ ತೀರಾ ತೀಕ್ಷ್ಣಮತಿ ಸೂಪರ್ ಮ್ಯಾನ್ ಅಪ್ಪನನ್ನು ನೋಡಿ ಸದಾ ಮಕ್ಕಳಂತೆ ನಿಷ್ಕಲ್ಮಶ ನಗು ಬೀರುವ, ಸುಮ್ಮಗೆ ಕೂತು ಹಾಡುವ, ಪುಟ್ಟ ಮಕ್ಕಳೊಡನೆ ಆಡುವ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಕೂರುವ ಚಿಕ್ಕಪ್ಪನನ್ನು ನೋಡಿದರೆ ಆಶ್ಚರ್ಯವಾಗುತ್ತಿತ್ತು. ಕಿತ್ತಳೆ ತೊಳೆ ಬಿಡಿಸುವುದಲ್ಲದೆ ಒಳಗಿನ ತಿಳಿ ಸಿಪ್ಪೆಯನ್ನೂ ಬಿಡಿಸಿ ತಿನ್ನುವ ಅಭ್ಯಾಸವನ್ನು ಹಾಕಿಕೊಟ್ಟಿದ್ದು ಚಿಕ್ಕಪ್ಪನೇ, ಇಂದಿಗೂ ತೊಳೆ ಬಿಡಿಸುವಾಗೆಲ್ಲಾ ಅವರದ್ದೇ ನೆನಪು. ಬಾಬಣ್ಣ ಮಾಷ್ಟ್ರು, ಹತ್ತಿರದಲ್ಲೆಲ್ಲಾದರೂ ಆಟವೋ, ಜಾತ್ರೆಯೋ ಇದ್ದರೆ ಮಾಧೂ ಚಿಕ್ಕಪ್ಪನನ್ನು ಕರ್ಕೊಂಡು ಹೋಗುತ್ತಿದ್ದರು. ಹಾಗೆ ಹೋದಾಗೆಲ್ಲಾ ನಾಲ್ಕೂ ಮಕ್ಕಳಿಗೂ, ಚಿಕ್ಕಿಗೂ ಕಡ್ಡಾಯವಾಗಿ ನಿಂಬೆ - ಕಿತ್ತಳೆ ಪೆಪ್ಪರ್ ಮಿಂಟು, ಕಡ್ಲೆ ಮಿಠಾಯಿ ಮತ್ತೆ ಶೇಂಗಾ ತಪ್ಪದೆ ತರುತ್ತಿದ್ದರು. ಅವರ ಸುತ್ತಾ ಕೂತ ತಿಂದ ನೆನಪು ನೂರೂ ಜನ್ಮಕ್ಕೂ ಮಾಸುವುದಿಲ್ಲ. ಅಪ್ಪ-ಅಮ್ಮ ಜೊತೆ ಕೂತು ಹರಟಿದ್ದೇ ನೋಡಿದ ನೆನಪಿಲ್ಲ, ಆದರೆ ಚಿಕ್ಕಿ ಮತ್ತು ಚಿಕ್ಕಪ್ಪ ಹಾಗಲ್ಲ, ಸದಾ ಜೊತೆಗಿರುತ್ತಿದ್ದರು, ಬೆಣ್ಣೆ ಕಡೆಯುವಾಗ, ಹೂ ಕಟ್ಟುವಾಗ, ಹಾಲು ಕರೆಯುವಾಗ, ಕೆರೆ ದಂಡೆಗೆ ಬಟ್ಟೆ ಒಗೆಯಲು ಹೋದಾಗ, ಹಪ್ಪಳ, ಉಪ್ಪಿನಕಾಯಿ ಹಾಕುವಾಗ...ಅವರೂ ಇದ್ದೇ ಇರುತ್ತಿದ್ದರು ಅವಳ ಸುತ್ತ. ಅವಳಿಗಾಗಿ ಎಲ್ಲಿಲ್ಲೆಯೋ ಹುಡುಕಿ ಸುಗಂಧಿ ಹೂ ತರುತ್ತಿದ್ದರು. ಆ ಹೂವು ಮುಡಿಯುವಾಗ ಅವಳ ಮುಖ ನೋಡಲು ಕಾದು ಕುಳಿತಿರುತ್ತಿದ್ದೆ. ಅವಳ ಮುಖದ ಸಂತೃಪ್ತ ನಗು ತನ್ನಲ್ಲೂ ಸಮಾಧಾನದ ಅಲೆಯೊಂದನ್ನು ಹೊತ್ತು ತರುತ್ತಿತ್ತಲ್ಲ? ಆದರೆ ೨೪ ಘಂಟೆ ವಟಗುಟ್ಟುತ್ತಲೇ ಇರುವ ಅಜ್ಜಿಗಂತೂ ತನ್ನ ಎರಡನೇ ಮಗ, ಅವನ ಹೆಂಡತಿ, ಮಕ್ಕಳು ಯಾರನ್ನೂ ಕಂಡರಾಗುತ್ತಿರಲಿಲ್ಲ. ಕಾಲೇಜು ಮೆಟ್ಟಿಲು ಹತ್ತಿದಾಗಲೂ ಅಮ್ಮನಿಗಿಂತ ಮೊದಲು ಅವಳೇ ಆಪ್ತ ಗೆಳತಿ, ನಾವಿಬ್ಬರು ಚರ್ಚಿಸದ ವಿಷಯಗಳಿಲ್ಲ. 

ಸರಿದಿದ್ದ ಕರ್ಟನಿನಿಂದ ಮುಖದ ಮೇಲೆ ಬೆಳಕು ಬಿದ್ದಂತಾಗಿ ಕಣ್ಣು ತೆರೆಯುವಷ್ಟರಲ್ಲಿ ಸಕಲೇಶಪುರ ಬಸ್ ಸ್ಟಾಂಡಿನಲ್ಲಿ ನಿಂತಿತು ಬಸ್ಸು. ಇಳಿದು ಒಂದರೆಗಳಿಗೆ ಹೊರಗಿನ ತಣ್ಣನೆ ಗಾಳಿ ಹೀರಿ, ಅಂಗಡಿಗೆ ಹೋಗಿ ಎರಡು ಬಾಳೆ ಹಣ್ಣುಗಳನ್ನು ತಂದು ಮತ್ತೆ ಬಂದು ಸೀಟಲ್ಲಿ ಕೂರುವಾಗ ಪಕ್ಕದ ಸೀಟಿನ ಮಹಿಳೆ ಮುಜುಗರದಿಂದ ’ಒಂಚೂರು ಟಾಯ್ಲೆಟ್ ಹೋಗಬೇಕಮ್ಮ, ಬರ್ತೀಯಾ? ನಂಗೆ ವಾಪಾಸು ಬಂದು ಹತ್ತೋಕೆ ಗೊತ್ತಾಗಲ್ಲ’  ಎಂದರು. ಕರಕೊಂಡು ಹೋಗಿ ಬಂದು ಕೂತುಕೊಳ್ಳಿಸುವಾಗ ಕೈ ಹಿಡಿದು ನೇವರಿಸಿ ’ದೇವರು ಒಳ್ಳೇದು ಮಾಡ್ಲಮ್ಮಾ’ಎಂದರು.
 
ಆ ನೇವರಿಕೆಗೆ ಮತ್ತೆ ಚಿಕ್ಕಿಯ ನೆನಪು, ಅದೆಲ್ಲಿ ಶುರುವಾಯಿತು ಎಲ್ಲವೂ ಎಂಬ ಯೋಚನೆ... 
ಮೂರು ವರ್ಷದ ಹಿಂದೆ ದೀಪಾವಳಿಗೆ ನಾಲ್ಕು ದಿನ ಇರುವಾಗಲ್ಲಲ್ಲವೇ? 
ಪ್ರತೀ ವರ್ಷ ಎಲ್ಲಾ ಆಳುಮಕ್ಕಳಿಗೂ ಹೊಸಬಟ್ಟೆಯೊಡನೆ ಚಕ್ಕುಲಿ, ಉಂಡೆ, ಬೆಲ್ಲ ಹಾಕಿದ ಅವಲಕ್ಕಿ ಕೈ ತುಂಬಾ ಕೊಡುವುದಲ್ಲದೆ ಸಾಂಬಾರು, ಹುಳಿ, ಕೊದ್ದೆಲ್, ಸಾರು, ಪಾಯಸದ ಊಟ ಹಾಕುವುದು ಮನೆಯ ಸಂಪ್ರದಾಯ. ಯಾವಾಗಲೂ ಅಡುಗೆಗೆ ಸಹಾಯ ಮಾಡಲು ಬರುವ ರಾಧಕ್ಕ ಆ ಸಲ ಬೆಂಗಳೂರಿನಲ್ಲಿ ಬಾಣಂತಿ ಸೊಸೆಯೊಂದಿಗೆ ಇರಲು ಹೋಗಿದ್ದರು. ಮೆನೋಪಾಸ್ ಹಂತದಲ್ಲಿರುವ ಅಮ್ಮ, ಚಿಕ್ಕಿ ಇಬ್ಬರಿಗೂ ಅವರದ್ದೇ ರಾಶಿ ತೊಂದರೆಗಳಿದ್ದವು. ’ಈ ಸಲ ಹೊಸಬಟ್ಟೆ ಮತ್ತೆ ಒಂದಿಷ್ಟು ದುಡ್ಡು ಕೊಡೋಣ ಎಲ್ಲರಿಗೂ’ ಅಂದಿದ್ದೇ ಚಿಕ್ಕಿಯ ಮಹಾಪರಾಧ. ಸದಾ ಅದು ಮಾಡು ಇದು ಮಾಡು ಎಂದು ಮಾಡಿಸಿಕೊಂಡು ಕೂತು ತಿನ್ನುವ ಅಜ್ಜಿಗೆ ಪಿತ್ತ ನೆತ್ತಿಗೇರಿತ್ತು. ಅಲ್ಲಿಂದ ಮಾತು ಮಾತು ಬೆಳೆದು ಅಜ್ಜಿ, ಚಿಕ್ಕಿಯ ಎಂದೂ ಬಾರದ ಮನೆಯವರನ್ನೆಲ್ಲಾ, ಅವರ ಬಡತನವನ್ನೆಲ್ಲ ಎತ್ತಿ ಆಡಿದ್ದಲ್ಲದೆ, ದೇವರಿಗೆ ಕೈ ಮುಗಿದು ಗೊತ್ತಿಲ್ಲ, ಅದಕ್ಕೇ ಮದುವೆಯಾಗಿ ಕಾಲಿಟ್ಟ ನಾಲ್ಕು ವರ್ಷಕ್ಕೇ ತನ್ನ ಮಗ ಹಾಳಾದ ಎಂದೆಲ್ಲಾ ದೂರಿದರು. ಬೊಬ್ಬೆ ಕೇಳಿದ ಮಾಧೂ ಚಿಕ್ಕಪ್ಪ ಹೆದರಿ ಮೂಲೆ ಹಿಡಿದು ಪಿಳಿಪಿಳಿ ಕಣ್ಣು ಬಿಡುತ್ತಿದ್ದರು. ಅಮ್ಮ ಏನು ಮಾತನಾಡಿದರೂ ಪ್ರಯೋಜನವಾಗಲಿಲ್ಲ. ತೋಟದಿಂದ ಬಾಳೆ ಎಲೆ, ಗೊನೆ ಹಿಡಿದು ಅಪ್ಪ ಬರುವಷ್ಟರಲ್ಲಿ ಮನೆ ರಣರಂಗವಾಗಿತ್ತು. ಎಂದೂ ಸಿಟ್ಟಿಗೇಳದ ಚಿಕ್ಕಿ ಅಂದು ರೌದ್ರವಾತಾರ ತಾಳಿದ್ದಳು. ಅವಳಿಗೂ ಬಹುಶಃ ಹಾರ್ಮೋನ್ಸ್ ಹೆಚ್ಚು ಕಡಿಮೆಯಾಗಿರಬೇಕು. ಅಪ್ಪ ಬಂದಾಗ, “ ಭಾವ, ನಾನು ಏನಾದರೂ ಈ ಮನೆಗೆ ಕಡಿಮೆ ಮಾಡಿದ್ರೆ, ನಿಮ್ಮ ತಮ್ಮನನ್ನು ಚೆನ್ನಾಗಿ ನೋಡಿಕೊಂಡಿಲ್ಲ, ನನ್ನ ತಪ್ಪಿಗೆ ನಾನು ಬೆಲೆ ತೆರುತ್ತಿಲ್ಲ  ಅಂತ ನಿಮಗೂ ಅಕ್ಕನಿಗೂ ಅನಿಸಿದ್ರೆ ನಾನೀ ಮನೆ ಬಿಟ್ಟು ಹೋಗುತ್ತೇನೆ” ಎಂದು ಅದೆಷ್ಟು ಸ್ಪಷ್ಟವಾಗಿ ಹೇಳಿದಳಲ್ಲ. ಎಂದೂ ಹೆಚ್ಚು ಭಾವನೆಗಳನ್ನು ತೋರಿಸದ ಅಪ್ಪ ಕೂಡಾ, ಮೊದಲ ಬಾರಿಗೆ, ಚಿಕ್ಕಿ ತಲೆ ಸವರಿ “ ಸುನಂದಾ, ನಿನ್ನದೇನೂ ತಪ್ಪಿಲ್ಲಮ್ಮ...ನಮ್ಮಿಬ್ಬರಿಗೂ ನೀನು ಬೇಕು, ನೋಡು ಲಕ್ಷ್ಮಿಯೂ ನಿನ್ನ ಬಿಟ್ಟಿರಲ್ಲ, ಇನ್ನೊಂದು ಸಲ ಹೋಗೋ ಮಾತಾಡಬೇಡ, ಮಂದಾರಳನ್ನು ಬಿಟ್ಟು ಹೋಗ್ತಿಯಾ?” ಎಂದು ಕೇಳಿದರು. ಅಜ್ಜಿಯ ಕಡೆಗೊಮ್ಮೆ ತೀವ್ರವಾಗಿ ನೋಡಿ “ಅಮ್ಮ, ಕಿಟ್ಟಿ ಮನೆಗೆ ಬಿಟ್ಟು ಬರ್ಲಾ? ಇಲ್ಲೇ ಬಾಯಿ ಮುಚ್ಚಿಕೊಂಡು ಇರ್ತೀಯಾ?” ಅಂದಿದ್ದಷ್ಟೇ, ಅಜ್ಜಿಯ ಬಾಯಿಗೆ ಬೀಗ ಬಿತ್ತು.  ಆ ಸಲ ದೀಪಾವಳಿಗೆ ಕೆಲಸದವರಿಗೆಲ್ಲಾ ಹೊಸಬಟ್ಟೆ ಮತ್ತು ದುಡ್ಡು ಕೊಟ್ಟಿದ್ದಾಯ್ತು. ಅಮ್ಮ, ಚಿಕ್ಕಿ ಇಬ್ಬರೂ ನಮ್ಮೊಂದಿಗೆ ಮೊದಲನೇ ಸಲ ಮತಾಪು ಹಚ್ಚಿದ್ದು. 

ಇದ್ದಕ್ಕಿದ್ದ ಹಾಗೆ ಅದ್ಯಾವ ಭೂತ ಹೊಕ್ಕಿತೋ ನನ್ನ ಮೈಯಲ್ಲಿ? ನನಗೆ ಸೇರಿದ ನನ್ನ ಚಿಕ್ಕಿ ಮಾಡಿದ ತಪ್ಪು ಯಾವುದು, ಅದನ್ನ್ಯಾಕೆ ನನಗೆ ಹೇಳಬಾರದು ಎಂದು ತಿಳಿಯುವ ಸಾಹಸ ಯಾಕಾದರೂ ಮಾಡಿದೆನೋ... ಅಮ್ಮನನ್ನು ಅದೆಷ್ಟು ಕಾಡಿಸಿದರೂ ಅಚಲ ಬಂಡೆಯಂತೆ ನಿಂತುಬಿಟ್ಟಳು, ಬಾಯೇ ಬಿಡಲಿಲ್ಲ. ಅಪ್ಪನನ್ನು ಕೇಳೋ ಧೈರ್ಯವಿಲ್ಲ್ಲ. ಆಳುಕಾಳುಗಳ ಹತ್ತಿರ ಕೇಳಲಾಗುವುದಿಲ್ಲ. ಕೆಟ್ಟ ಗಳಿಗೆಯಲ್ಲಿ ಯಾಕಾದರೂ ಬೆಟ್ಟು ಗದ್ದೆಯ ಪಾತಜ್ಜಿಯ ಬಳಿ ಹೋದೆನೋ...
ಪಾತಜ್ಜಿ ಹೇಳಿದ್ದಿಷ್ಟು, ಮದುವೆ ಮಂಟಪಕ್ಕೆ ಚಿಕ್ಕಿ ಬರುವಾಗಲೇ ೫ ತಿಂಗಳ ಗರ್ಭಿಣಿಯಾಗಿದ್ದಳು. ಆವಾಗಲೇ ಅಜ್ಜಿ ಮದುವೆ ಬೇಡವೆಂದು ಗಲಾಟೆ ಮಾಡಿದರೂ ಮಾಧೂ ಚಿಕ್ಕಪ್ಪ ಇವಳಲ್ಲದಿದ್ದರೆ ನಾನು ಬೇರೆ ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದಿದ್ದರು. ಚಿಕ್ಕಿ ಮನೆಗೆ ಬಂದ ನಾಲ್ಕು ತಿಂಗಳಿಗೆಲ್ಲಾ ಮಹೇಶ ಹುಟ್ಟಿದ್ದ. ಊರಿಡೀ ಸುದ್ದಿಯಾಗಿದ್ದರೂ, ಚಿಕ್ಕಿ ಮನೆಯವರಾರೂ ತಲೆ ಹಾಕದಿದ್ದರೂ ಚಿಕ್ಕಪ್ಪ, ಅಪ್ಪ, ಅಮ್ಮ ಚಿಕ್ಕಿಯ ಕೈ ಬಿಟ್ಟಿರಲಿಲ್ಲ. ನಿಮ್ಮ ಮನೆಯವರೆಲ್ಲಾ ದೇವರಂತೆ ಎಂದಿದ್ದರು ಪಾತಜ್ಜಿ. ಅದಾಗಿ ಮೂರೂವರೆ ವರ್ಷದಲ್ಲೇ ಜ್ವರ ಬಂದಿದ್ದು ಇಳಿಯದೇ ಸನ್ನಿಪಾತವಾಗಿ ಚಿಕ್ಕಪ್ಪ ಹಾಗಾಗಿದ್ದರು. 
ನನ್ನ ಚಿಕ್ಕಿ ಮೋಸ ಮಾಡಿದಳು ನನಗೆ ಅನ್ನುವ ಪಿಶಾಚಿ ನನ್ನ ಹೆಗಲೇರಿತ್ತು. ಹುಚ್ಚು ಹಿಡಿದಂತೆ ಮಾಡಿದ್ದೆ. ಅವಳನ್ನು ನೋಡುವುದೂ, ಮುಟ್ಟುವುದೂ ಅಸಹ್ಯ ಅನಿಸಿತ್ತು. ಪಾಪದ ಚಿಕ್ಕಪ್ಪ ಅವಳನ್ನೆಷ್ಟು ಪ್ರೀತಿಸುತ್ತಾರೆ.. ಅದಕ್ಕೆ ಅಜ್ಜಿ ಹಾಗಾಡುವುದು ಅವಳನ್ನು ಕಂಡರೆ...ಈ ಅಪ್ಪ ಅಮ್ಮನಿಗೆ ಬುದ್ಧಿ ಇಲ್ಲ. ಕೆಲಸ ಮಾಡಿ ಅವರ ಅನುಕಂಪ ಗಳಿಸಿದ್ದಾಳೆ ಎಂದೆಲ್ಲಾ ಅನಿಸಿತ್ತು. ಆ ಮನೆಯಲ್ಲಿ ಅವಳನ್ನು ನೋಡುವುದು, ಮಾತನಾಡುವುದು ಕೊನೆಗೆ ಮಹೇಶನನ್ನು ನೋಡುವುದೆ ಹಿಂಸೆ ಎನಿಸತೊಡಗಿತ್ತು. ದಿನೇ ದಿನೇ ಕಂದರ ದೊಡ್ಡದಾಗತೊಡಗಿತ್ತು. ಅಮ್ಮ, ಚಿಕ್ಕಿಗೆ ನನಗೇನಾಗಿತ್ತು ಎಂಬುದರ ಅರಿವೇ ಇರಲಿಲ್ಲ. ಅವಳು ಹತ್ತಿರ ಬಂದಾಗೆಲ್ಲಾ ನೋಯಿಸಿ ವಿಚಿತ್ರ ಖುಷಿಪಡುತ್ತಿದ್ದೆ. ಅವಳ ನಗು ಮೆಲ್ಲನೆ ಮಾಯವಾಗತೊಡಗಿತ್ತು. 
ಅದೇ ಸಮಯದಲ್ಲಿ ಊರಿಗೆ ಬಂದ ಬಾಬಣ್ಣ ಮಾಷ್ಟ್ರ ಮಗ ಪ್ರವೀಣನ ಮೂಲಕ ಚಾನೆಲ್ ಒಂದರಲ್ಲಿ ಕೆಲಸ ಹಿಡಿದು ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಆನಂತರದ ಯಾವ ದೀಪಾವಳಿ, ಯುಗಾದಿ, ಚೌತಿ ಯಾವುದಕ್ಕೂ ಊರಿಗೆ ಹೋಗಲೇ ಇಲ್ಲ. ಅಮ್ಮ, ಅಪ್ಪ, ಚಿಕ್ಕಿ ಮೂವರ ಮೇಲೆ ದ್ವೇಷ ತೀರಿಸುವಂತೆ ಹುಚ್ಚು ಹಿಡಿದಂತೆ ಕೆಲಸದಲ್ಲಿ ಮುಳುಗೇಳುತ್ತಿದ್ದೆ. ಅಪ್ಪ, ಅಮ್ಮನೊಂದಿಗೆ ಮಾತುಕಥೆ ಎಷ್ಟೋ ಬೇಕೋ ಅಷ್ಟು. ಚಿಕ್ಕಿಯೊಂದಿಗೆ ಮಾತಾಡು ಎಂದಾಗೆಲ್ಲಾ ಕೆಲಸವಿದೆ, ನೆಟ್ವರ್ಕ್ ಇಲ್ಲ, ಚಾರ್ಜ್ ಇಲ್ಲಾ ಎಂಬ ನೆಪಗಳು. ಯಾವಾಗ್ಯಾವಾಗ ಅಪ್ಪ, ಮಹೇಶ ಬರಲಿಚ್ಚಿಸಿದರೊ ನಾನು ಮುಂಬೈಗೆ, ಪೂನಾಕ್ಕೆ ಹೋಗೋಕ್ಕಿದೆ ಕೆಲಸದ ಮೇಲೆ ಎಂದು ಸುಳ್ಳು ಕಥೆ ಕಟ್ಟಿದೆ. ಅಮ್ಮನಿಗೆ ಸಂಶಯ ಹುಟ್ಟಿ ಒಂದಲ್ಲ ಸಾವಿರ ಸಲ ಕೇಳಿದ್ದಳು, ಯಾಕೆ ಚಿಕ್ಕಿಯ ಹತ್ತಿರ ಮಾತಾಡ್ತಿಲ್ಲ ಅಂತ. ಅವಳು ಮಾತು ಮುಂದುವರಿಸೋ ಮೊದಲು ಅಯ್ಯೋ, ಹೋಗಮ್ಮ ನಿಂದಿದ್ದೇ, ನಂಗೆ ಟೈಮ್ ಇಲ್ಲ ಎಂದು ಕಾಲ್ ಕಟ್ ಮಾಡುತ್ತಿದ್ದೆಲ್ಲಾಅದರವಳು ಕರೆ ಮಾಡಿದಾಗೆಲ್ಲಾ ಚಿಕ್ಕಿಗೆ ಹುಷಾರಿಲ್ಲ, ದಿನೇ ದಿನೇ ಸವೆಯುತ್ತಾ ಹೋಗುತ್ತಿದ್ದಾಳೆ ಅಂತಾನೇ ಹೇಳುತ್ತಿದ್ದಳು. ಅದನ್ನ ಕೇಳದವಳ ಹಾಗೆ ಸುಮ್ಮನಿದ್ದು ಬಿಡುತ್ತಿದ್ದೆ. 
ಒಂದಾ!ಎರಡಾ? ಛೆ! ಎಷ್ಟು ಕಹಿಯಾಗಿ ಹೋದೆನಲ್ಲಾ ನಾನು. ಮಹೇಶನ ಬಗ್ಗೆಯಂತೂ ಏನೆಲ್ಲಾ ಯೋಚಿಸಿದೆ? ಅದು ಹೇಗೆ ಇಷ್ಟೆಲ್ಲಾ ಓದಿ ತಿಳಿದುಕೊಂಡೂ ಇಷ್ಟು ಕೇವಲವಾಗಿ ವರ್ತಿಸಿದೆ? ಅವಳ ಋಣದ ಜೀವನವಿದು, ಅವಳನ್ನೇ ಕಿತ್ತು ಬಿಸಾಡಿದೆನಲ್ಲ? ನನ್ನಷ್ಟು ವಿದ್ಯೆ, ಓದಿರದಿದ್ದರೂ ಅಪ್ಪ, ಅಮ್ಮ, ಚಿಕ್ಕಪ್ಪರಿಗೆ ಇದ್ದಷ್ಟು ಬುದ್ಧಿ ನಂಗಿಲ್ಲದೆ ಹೋಯಿತಲ್ಲ? ಇಲ್ಲ, ನನ್ನ ಚಿಕ್ಕಿ ಸರಿಯಾಗ್ತಾಳೆ, ಅವಳನ್ನು ಇನ್ನೆಂದೂ ನೋಯಿಸುವುದಿಲ್ಲ ಎಂದುಕೊಂಡೆ. ನನಗಾಗಿ ಅವಳನ್ನು ಉಳಿಸು ಎಂದು ದೇವರಲ್ಲಿ ಬೇಡಿಕೊಂಡೆ. 
ಈ ಯೋಚನೆಗಳಲ್ಲೇ ಊರು ಮುಟ್ಟಿದಾಗ, ಅರೆಬರೆ ಕತ್ತಲಲ್ಲಿ ಹೈವೇ ಹತ್ತಿರ ಕಾಯುತ್ತಾ ನಿಂತಿದ್ದರು ಪುರು, ಬಾಲು ಇಬ್ಬರೂ. ಇಬ್ಬರೂ ನನಗಿಂತ ಉದ್ದವಾಗಿದ್ದರು. ನೋಡಿದ ಕೂಡಲೇ ಖುಷಿಯಲ್ಲಿ ನಕ್ಕವರು “ಚಿಕ್ಕಿ ಹೇಗಿದ್ದಾಳೆ?”ಎಂದ ತಕ್ಷಣ ಸಪ್ಪಗಾದರು. ಸ್ವಲ್ಪ ಹೊತ್ತಿನ ಬಳಿಕ ಪುರು, “ಅಮ್ಮ ತುಂಬಾ ವೀಕ್ ಆಗಿದ್ದಾರೆ” ಎಂದು ಮೆತ್ತಗುಸುರಿದ. ಮನೆಯಂಗಳ ತುಳಿಯುತ್ತಿದ್ದಂತೆ ವಿಚಿತ್ರ ಭಾವುಕತೆ ಸುತ್ತುವರಿಯಿತು. 
ಅಪ್ಪ, ಅಮ್ಮನೂ ಸಾಕಷ್ಟು ಇಳಿದು ಹೋಗಿದ್ದರು. ಕೈಕಾಲು ತೊಳೆದು ಚಿಕ್ಕಿಯ ಕೋಣೆಯೊಳಗೆ ಕಾಲಿಟ್ಟರೆ ಮಂಚದ ಮೇಲೆ ಕೃಶಕಾಯದ ಜೀವವೊಂದು ಮಲಗಿತ್ತು. ಅಲ್ಲೇ ಕೆಳಗಡೆ ಚಾಪೆಯಲ್ಲಿ ಚಿಕ್ಕಪ್ಪ ಮಲಗಿದ್ದರು. ಒಂದೆರೆಗಳಿಗೆ ಅದು ಚಿಕ್ಕಿಯೆಂದು ನಂಬಲಾಗಲೇ ಇಲ್ಲ, ಅಷ್ಟು ಬದಲಾಗಿದ್ದಳು. ರಪ್ಪೆಂದು ಬಾರಿಸಿದಂತಾಯ್ತು ಕಹಿ ವಾಸ್ತವ. ಈ ಗುಬ್ಬಿಯಂತಹ ಜೀವದ ಮೇಲೆ ಇಷ್ಟು ದೊಡ್ಡ, ಧೀರ್ಘ ಸಮರ ಸಾರಿದ್ದೆನೇ? ಕಣ್ಣೀರು ಕಟ್ಟೆಯೊಡೆಯಿತು, ಅವಳ ಹತ್ತಿರ ಕೂತು ನಾನವಳ ತಲೆ ಸವರಿದೆ. ಮೆಲ್ಲಗೆ ಕಣ್ಣು ಬಿಟ್ಟವಳು, ಗುರುತು ಹಿಡಿದು ನಕ್ಕಳು. ಹಗುರಕ್ಕೆ ಕೈಯೆತ್ತಿ ಅವಳ ಕಿರುಬೆರಳಿಂದ ನನ್ನ ಕಿರು ಬೆರಳು ಹಿಡಿದಳು. ಹೊರಗೀಗ ಬೆಳ್ಳನೆ ಬೆಳಕಾಗಿತ್ತು. 

No comments:

Post a Comment