Monday, April 22, 2019

ಅಮ್ಮಾ, ನಾನು ದೇವರಾಣೆ ಕದ್ದಿಲ್ಲಮ್ಮ

ಸುಧಾ ಯುಗಾದಿ ವಿಶೇಷಾಂಕದಲ್ಲಿ ಮೆಚ್ಚುಗೆ ಪಡೆದು, ಸುಧಾದಲ್ಲಿ ಪ್ರಕಟವಾದ ನನ್ನ ಪ್ರಬಂಧ. ನನ್ನ ಮೂಡಿಗೆರೆಯ ನೆನಪುಗಳು

ಮೂಡಿಗೆರೆಯೆಂಬ ಪುಟ್ಟ ಊರಿಗೆ ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಅಮ್ಮ, ಶಿಕ್ಷಕಿಯಾಗಿ ನೇಮಕವಾದಾಗ ನಾನು ಎರಡು ವರ್ಷದವಳು. ಒಂದಿಷ್ಟು ದಿನಗಳು ಜಾನಪ್ಪ ಗೌಡರ ಮನೆಯಲ್ಲಿ ಉಳಿದು ನಂತರ ಶಾಲೆಯೆದುರೇ ಇದ್ದ ಪುಟ್ಟ ಮನೆಗೆ ಶಿಫ್ಟ್ ಆದರು ಅಮ್ಮ. ಮುಂಡುಗೋಡಿನಿಂದ ಬಂದ ನಾಗಿ ಎನ್ನುವ ಹೆಣ್ಣುಮಗಳು ಅದೆಷ್ಟೋ ಸಮಂii ನನ್ನ ನೋಡಿಕೊಳ್ಳುತ್ತಿದ್ದಳು. ಅಣ್ಣ ಶಿರಸಿಯಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಒಂದು ಪುಟ್ಟ ಮನೆ ಮಾಡಿಕೊಂಡಿದ್ದರು. ನನಗೂ, ನನಗಿಂತ ನಾಲ್ಕು ವರ್ಷ ದೊಡ್ಡವಳಿದ್ದ ಅಕ್ಕನಿಗೂ, ಅಮ್ಮನಿಗೂ ಅಣ್ಣ ಸಿಗುತ್ತಿದ್ದದ್ದು ವಾರದ ಕೊನೆಗಷ್ಟೇ. ಶನಿವಾರ ರಾತ್ರೆಯಾಗುವುದನ್ನೇ ಕಾಯುತ್ತಿದ್ದೆವು, ಅವಾಗಿನ ಸರಕಾರಿ ಕೆಂಪು ಡಬ್ಬಿಯಲ್ಲಿ ಅಣ್ಣ ಬರುವಾಗ ರಾತ್ರಿಯಾಗುತ್ತಿತ್ತು. ಭಾನುವಾರ ರಾತ್ರಿ ಮತ್ತೆ ಹೊರಟು ಹೋಗುತ್ತಿದ್ದರು. ರಜೆಯಲ್ಲಿ ನಾವೆಲ್ಲಾ ಶಿರಸಿಗೆ ಹೋಗಿ ಇರುತ್ತಿದ್ದೆವು.
ಆವಾಗಂತೂ ಫ್ರಿಡ್ಜ್, ಮಿಕ್ಸಿ, ವಾಷಿಂಗ್ ಮೆಷಿನ್, ಗ್ರೈಂಡರ್ ಏನೂ ಇಲ್ಲದ ಕಾಲ. ಅಮ್ಮ ಮನೆಗೆಲಸವನ್ನೆಲ್ಲಾ ಒಬ್ಬರೇ ಮಾಡಿಕೊಂಡು, ದಿನವೂ ಟೀಚಿಂಗ್ ನೋಟ್ಸ್ ಬರೆದು, ಮರುದಿನದ ಪಾಠದ ತಯಾರಿ ಮಾಡಿಕೊಂಡು, ಹೊರಗಡೆ ಹೋಗಿ ಮನೆ ಸಾಮಾನು, ತರಕಾರಿಗಳನ್ನು ಹೊತ್ತು ತಂದು, ನಮ್ಮನ್ನು, ಅದರಲ್ಲೂ ಮಹಾನ್ ತಂಟೆಕೋರಿಯಾದ ನನ್ನನ್ನು ಅದು ಹೇಗೆ ಸಂಭಾಳಿಸುತ್ತಿದ್ದರೋ ಇಂದಿಗೂ ಅರ್ಥವಾಗಿಲ್ಲ. ಅಷ್ಟೇ ಅಲ್ಲದೆ ಶಾಲೆಯಲ್ಲಿಯಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಲ್ಲ ನಮ್ಮನೆಯಲ್ಲೇ ತಯಾರಿ! ಅಮ್ಮನ ಶಿಷ್ಯೆಯಂದಿರೆಲ್ಲಾ ಮನೆ ತುಂಬಿಕೊಳ್ಳುತ್ತಿದರು. ಅಗ ನನ್ನ ಹಿಡಿಯುವವರೇ ಇರುತ್ತಿರಲಿಲ್ಲ. ಆ ಕಾರ್ಯಕ್ರಮಗಳಿಗೆಲ್ಲಾ ತರುತ್ತಿದ್ದ ಮೇಕಪ್ ಕಿಟ್ ಅಂತೂ ನನಗೊಂದು ವಿಸ್ಮಯ. ಅದರಲ್ಲಿದ್ದ ಎಲ್ಲವನ್ನೂ ಮುಟ್ಟಿ ಮುಟ್ಟಿ ನೋಡಿ, ಎಲ್ಲವನ್ನೂ ಮುಖಕ್ಕೆ ಬಳಿಸಿಕೊಂಡು ಸಂತಸಪಡುತ್ತಿದ್ದೆ.
ನನಗೆ ಹಣೆಗೆ ಹಚ್ಚುವ ಬಿಂದಿಯ ಹುಚ್ಚು, ಅದಕ್ಕಾಗ ಹಣೆಬೊಟ್ಟು ಎನ್ನುತ್ತಿದ್ದೆವು. ಬಣ್ಣ, ಬಣ್ಣದ, ವಿವಿಧ ಸೈಜು, ಶೇಪಿನ ಬಿಂದಿಗಳೆಂದರೆ ಜೀವ ಬಿಡುತ್ತಿದ್ದೆ. ಅಮ್ಮನ ಶಿಷ್ಯೆಯರು ನೀರು ಕುಡಿಯಲೆಂದು ಅವಾಗವಾಗ ಮನೆಗೆ ಬರುತ್ತಿದ್ದರು, ಹೆಚ್ಚಿನವರು ಚಿಕ್ಕವಳಾದ ನನ್ನನ್ನು ನೋಡಿ, ಮುಟ್ಟಿ, ಮುದ್ದಿಸಿ ಮಾತನಾಡಲೆಂದೇ ಬರುವವರು. ಅವರಲ್ಲಿ ಯಾರೇ ಆದರೂ ’ಬಾ, ಹಣೆಬೊಟ್ಟು ಕೊಡ್ತೀನಿ’ ಅಂದರೂ ಅವರ ಮನೆಗೆ ಹೊರಟು ಬಿಡುತ್ತಿದ್ದೆ. ಅವರ ಮನೆಯಲ್ಲಿ ಕೊಟ್ಟ ತಿಂಡಿಯನ್ನೆಲ್ಲಾ ತಿಂದು, ಅವರ ಮನೆ ಪೂರ್ತಿ ಸರ್ವೇ ಮಾಡಿ ಅಮ್ಮನಿಗೆ ಹೇಳಬೇಡಿ ಎಂದು ಅವರಿಗೆ ವಾರ್ನಿಂಗ್ ಕೊಟ್ಟು, ಚಿತ್ರ ವಿಚಿತ್ರ ಡಿಸೈನಿನ ಹಣೆಬೊಟ್ಟು ಹಿಡಿದುಕೊಂಡು ಮನೆಗೆ ಬರುತ್ತಿತ್ತು ನನ್ನ ಸವಾರಿ. ಕೆಲವೊಮ್ಮೆ ಅಮ್ಮ ಹುಡುಕಿ ಹುಡುಕಿ ಕಂಗಾಲಾಗುತ್ತಿದ್ದರು.
ಪ್ರತಿ ರಾತ್ರಿ ಮಲಗುವ ಮೊದಲು, ಅಡುಗೆ ಮನೆಯ ಎಲ್ಲಾ ಕೆಲಸ ಮುಗಿಸಿ ಅಮ್ಮ ಬಂದ ಮೇಲೆ ಮೂರೂ ಜನ ಚಂದಿರನನ್ನು ನೋಡುತ್ತಾ ಬಾಗಿಲ ಮೆಟ್ಟಿಲ ಮೇಲೆ ಕೂರುತ್ತಿದ್ದೆವು. ಆಗ ಮೊಸರಿಗೆ ಸಕ್ಕರೆ ಹಾಕಿ ಕಲೆಸಿ ಇಬ್ಬರಿಗೂ ಕಥೆ ಹೇಳುತ್ತಾ ತಿನ್ನಿಸುತ್ತಿದ್ದರು. ಒಂದೊಂದು ದಿನ ಒಂದೊಂದು ಕಥೆ. ಬೆಣ್ಣೆ ಕದ್ದ ಕೃಷ್ಣನ ಬಾಯಿಯಲ್ಲಿ ಬ್ರಹ್ಮಾಂಡ ನೋಡಿ ಬೆರಗಾಗಿರುವ ಯಶೋಧೆ, ಗೋಪಾಲಕರ ಸುಂದರ ಚಿತ್ರವಿದ್ದ ಒಂದು ಕ್ಯಾಲೆಂಡರ್ ನಮ್ಮ ಮನೆಯಲ್ಲಿತ್ತು. ಅದರ ಕಥೆ ಹೇಳಮ್ಮ ಎಂದು ಪೀಡಿಸಿದಾಗ ಆ ಚೆಂದದ ಕಥೆಯನ್ನು ಹೇಳಿದ್ದರು ಅಮ್ಮ. ಮತ್ತೆ ’ಅಮ್ಮ, ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಎಂಬ ಅತೀ ಚೆಂದದ ಹಾಡನ್ನು ಮೆಲುದನಿಯಲ್ಲಿ ಹಾಡುತ್ತಿದ್ದರು. ಅದೊಂದು ಸುಂದರ, ಅಚ್ಚಳಿಯದ ನೆನಪು.
ಒಂದು ದಿನ ಬಣ್ಣದ ಪೆನ್ಸಿಲುಗಳನ್ನು ತರಲೆಂದು ಅಕ್ಕನೊಂದಿಗೆ ಹೋಗಿದ್ದೆ, ಅಕ್ಕ ತೆಗೆದುಕೊಳ್ಳುತ್ತಿದ್ದಳು. ನಾನು ಪಕ್ಕದ್ದಲ್ಲಿದ್ದ ಚೈತನ್ಯ ಸ್ಟೋರ್ಸಿನಲ್ಲಿ ನನಗಿಂತ ನಾಲ್ಕು ಪಟ್ಟು ಎತ್ತರವಿದ್ದ ಶೋಕೇಸಿನ ಮೇಲಿದ್ದ ಗಾಜಿನ ಜಾಡಿಯಲ್ಲಿ ಪೇರಿಸಿಟ್ಟ ಅಲ್ಕೋಹಾಲು ಎಂದು ನಾವು ಕರೆಯುತ್ತಿದ್ದ ಹಾಲು ಖೋವಾ, ಕೈಲಿ ದಾರ ಹಿಡಿದು ತಿರುಗಿಸೋ ಹತ್ತು ಪೈಸೆ ನಾಣ್ಯದ ಶೇಪಿನ ಗುಲಾಬಿ ಬಣ್ಣದ ಪೆಪ್ಪರಮಿಂಟು, ಚೆಂದದ ಪುಟ್ಟ ಪುಟ್ಟ ಡಬ್ಬಿಗಳಲ್ಲಿರುವ ಜೀರಿಗೆ ಮಿಠಾಯಿ, ಕಡ್ಲೆಮಿಠಾಯಿಗಳನ್ನು ನೋಡುತ್ತಾ, ಅಕ್ಕನ ಪೆನ್ಸಿಲ್ಲು ತೊಗೊಂಡು ಆದ ಮೇಲೆ ಉಳಿದ ಹಣದಲ್ಲಿ ಏನು ತೆಗೆದುಕೊಳ್ಳುವುದು ಎಂದು ಲೆಕ್ಕಾಚಾರ ಹಾಕುತ್ತಿದ್ದೆ. ನನ್ನ ಅಣ್ಣನಿಗಿಂತ ಸಾಕಷ್ಟು ಎತ್ತರ, ದಪ್ಪವಿರುವ ಯಾರೋ ಮಾಮ ಬಂದು ನಿಂತು ಅಂಗಡಿಯಾತನೊಂದಿಗೆ ಏನನ್ನೋ ಕೇಳಿದರು. ಅವರ ಸ್ವರವೂ ತುಂಬಾ ಚೆನ್ನಾಗಿತ್ತು. ಯಾಕೋ ನಾನು ತಲೆಯೆತ್ತಿ ನೋಡಿದೆ, ಮೊದಲೇ ಕುಳ್ಳಿ! ಗಡ್ಡ, ಮೂಗು ಮತ್ತೆ ಕನ್ನಡಕದ ಫ್ರೇಮು ಕಂಡಿತು. ಮತ್ತೆ ಅಕ್ಕನ ಬಳಿ ಹೋದಾಗ ಅವಳು ಮೆಲ್ಲನೆ ಉಸುರಿದಳು, ಅವರು ಪೂರ್ಣಚಂದ್ರ ತೇಜಸ್ವಿ ಕಣೇ, ತುಂಬಾ ದೊಡ್ಡ ಮನುಷ್ಯರು ಅಂತ! ನಾನು ತಲೆ ತಿರುಗಿಸಿ ನೋಡುವಷ್ಟರಲ್ಲಿ ಅವರು ಹೊರಟಾಗಿತ್ತು.
ಆಡಿ ಬರಲು, ನಿದ್ದೆ ಮಾಡಲು ಮತ್ತು ತಿಂಡಿ ತಿಂದು ಬರಲು ಬಾಲವಾಡಿಗೆ ಹೋಗುತ್ತಿದ್ದೆ, ಯಾರೊಂದಿಗೂ ಮಾತು-ಕಥೆಯಿಲ್ಲ. ಹೋಗುವುದು, ಗುಮ್ಮನ ಹಾಗೆ ಕೂರುವುದು, ಡಬ್ಬದಿಂದ ತಿಂಡಿ ತಿನ್ನುವುದು ಮತ್ತು ಜಾರು ಬಂಡಿಯಾಡುವುದು. ಕೆಲವೊಮ್ಮೆ ಜೋಕಾಲಿಯಲ್ಲಿ ಕೂತು ತೂಗಿಕೊಳ್ಳುವುದು, ತುಂಬಾ ಮಕ್ಕಳು ಇರುತ್ತಿದ್ದರಿಂದ ಆ ಅವಕಾಶ ತುಂಬಾ ಕಡಿಮೆ ಸಿಗುತ್ತಿತ್ತು. ಹೀಗಾಗಿ ಎಲ್ಲಿ ಜೋಕಾಲಿ ಕಂಡರೂ ತೂಗುವ ಆಸೆಯಾಗುತ್ತದೆ. ಸರಿಕಟ್ಟಾಗಿ ಶಾಲೆಗೆ ಹೋಗಲು ಶುರು ಮಾಡಿದಾಗ ನಾಲ್ಕು ವರ್ಷ, ಮನೆಯಲ್ಲಿ ಕಾಟ ತಾಳಲಾರದೆ ಒಂದು ವರ್ಷ ಜಾಸ್ತಿ ತೋರಿಸಿ ಅಡ್ಮಿಶನ್ ಮಾಡಿಸಿದ್ದರು. ಹೊಸ ಯುನಿಫಾರ್ಮ್, ಶೂಸ್, ಬುಕ್ಸ್ ಆಸೆಗೆ ಸೇರಿದವಳಿಗೆ, ಶಾಲೆಯಲ್ಲಿದ್ದಷ್ಟೂ ಹೊತ್ತು ಪಂಜರದಲ್ಲಿ ಕೂಡಿ ಹಾಕಿದಂತೆ ಅನಿಸುತ್ತಿತ್ತು. ಯಾವಾಗ ಘಂಟೆ ಬಾರಿಸುವುದಿಲ್ಲ ಎಂದು ಕಾದು ಕುಳಿತಿರುತ್ತಿದ್ದೆ. ಇವತ್ತಿಗೂ ಶಾಲೆಗೆ ಹೋಗುವ ಮಕ್ಕಳನ್ನು ಕಂಡರೆ ಪಾಪ ಎಂದೇ ಅನಿಸುತ್ತದೆ.
ಶಾಲೆಯಲ್ಲಿ ಯಾರು ಏನು ಕೇಳಿದರೂ ಕೊಟ್ಟು ಬರುತ್ತಿದ್ದೆ. ನನ್ನ ಪೆನ್ಸಿಲ್, ರಬ್ಬರ್, ಬಳಪ, ಪುಸ್ತಕ, ಪುಸ್ತಕದಲ್ಲಿಟ್ಟ ನವಿಲು ಗರಿ, ಬಣ್ಣದ ಪೆನ್ಸಿಲುಗಳು, ಹೊಸ ಸ್ಲೇಟು ಎಲ್ಲವೂ... ಅಣ್ಣ ಅಮ್ಮನಿಗೆ ಏನು ಹೇಳಬೇಕು ಗೊತ್ತಾಗುತ್ತಿರಲಿಲ್ಲ. ಶಾಲೆಗೆ ಸೇರಿದ ಮೇಲೆ ನನ್ನ ಕಾಟ ಬೇರೊಂದು ರೂಪ ಪಡೆದಿತ್ತು! ಅಕ್ಕ ‘ದಾನ ವೀರ ಶೂರ ಕರ್ಣಿ’ ಎಂದೇ ಹೆಸರಿಟ್ಟಿದ್ದಳು. ಇವತ್ತೂ ಹಾಗೇ ಕರೆದು ಚುಡಾಯಿಸುತ್ತಿರುತ್ತಾಳೆ.
ಒಂದು ದಿನ ಬೆಳಿಗ್ಗೆ ಅಮ್ಮ ಕಸ ಗುಡಿಸುತ್ತಿದ್ದಾಗ ನನ್ನ ಚೀಲದಿಂದ ಏನೋ ಹರಿದು ಬರುವುದು ಕಂಡಿತು, ಗಾಬರಿಯಾದ ಅಮ್ಮ ಚೀಲ ಕೊಡವಿದರೆ ನುಣುಪು ಕಲ್ಲುಗಳು, ತುಂಬಾ ಆಗಲಿ ಎಂದು ತುಂಡು ತುಂಡು ಮಾಡಿಟ್ಟ ಆನೆ ಬಳಪ, ಮರಳು, ಚಿಪ್ಪು, ನೆಲಕ್ಕೆ ತಿಕ್ಕಿ ಬಿಸಿ ತಾಗಿಸುವ ಹಣ್ಣು ಹುರುಳಿಕಾಯಿಯ ಥರದ ಅದ್ಯಾವುದೋ ಬೀಜಗಳು, ಸ್ಲೇಟು, ಗೋಲಿಗಳು, ಒಂದಿಷ್ಟು ತುಂಡಾದ ಹಳೇ ಪೆನ್ನು ಪೆನ್ಸಿಲ್ಲುಗಳು, ಇವಿಷ್ಟರ ಒಟ್ಟಿಗೆ ಗುಂಡು ಗುಂಡಾಗಿರುವ ಕೆಲವು ಕಾಯಿಗಳು ಉದುರಿದವು. ಏನಿದು ಎಂದು ಅಮ್ಮ ಹತ್ತಿರ ಹೋಗಿ ನೋಡಿದರೆ, ಮುಟ್ಟಿದರೆ ಶೆಲ್ ಒಳಗೆ ಹೋಗಿ, ಪುಟ್ಟ ಚಕ್ಕುಲಿಯಂತಾಗುವ ಯಾವುದೋ ಹುಳಗಳು. ಹಾರಿ ಬಿದ್ದ ಅಮ್ಮ, ಅಕ್ಕ ಅವನ್ನೆಲ್ಲಾ ಎತ್ತಿ ಹೊರಗೆ ಬಿಸಾಕಿದ್ದರು. ನನಗೆ ಸಿಟ್ಟೋ ಸಿಟ್ಟು! ವಾರಾಂತ್ಯದಲ್ಲಿ ಎಲ್ಲಾ ರಿಪೋರ್ಟುಗಳು ಅಣ್ಣನಿಗೆ ಹೋಗುತ್ತಿದ್ದವು. ಅಣ್ಣ ನಕ್ಕೂ ನಕ್ಕೂ ಕಣ್ಣೀರು ಬರುತ್ತಿತ್ತು. ಒಟ್ಟಿನಲ್ಲಿ ಎಲ್ಲರೂ ನಗುವುದನ್ನು ನೋಡಿ ನಾನೂ ನಗುತ್ತಿದ್ದೆ.
ಅದೊಂದು ದಿನ ಬೆಳಗ್ಗೆ, ಎದ್ದಿದ್ದೇನೆ. ಹೆಚ್ಚಾಗಿ ಎದ್ದ ಕೂಡಲೇ ‘ಅಮ್ಮಾ’ ಎಂದು ಬೊಬ್ಬೆ ಹಾಕಿ ಅಳಬೇಕು, ಅಮ್ಮ ಇದ್ದ ಬಿದ್ದ ಎಲ್ಲಾ ಕೆಲಸ ಬಿಟ್ಟು ಓಡಿ ಬರಬೇಕು. ಆ ದಿನ ಮೇಜಿನ ಕೆಳಗಿಟ್ಟಿದ್ದ ಅಮ್ಮನ ವ್ಯಾನಿಟಿ ಬ್ಯಾಗು ಕಣ್ಣಿಗೆ ಬಿತ್ತು. ಅಕ್ಕ ಯಥಾಪ್ರಕಾರ ಹೊರಗೆ ಕೂತು ಓದುತ್ತಿದ್ದಳು. ಅಮ್ಮನ ಬ್ಯಾಗು ಮುಟ್ಟುವುದು ನಾವೆಂದೂ ಮಾಡಬಾರದ ಕೆಲಸವಾಗಿತ್ತು. ಏನಾದರೂ ಬೇಕಿದ್ದರೆ ಅಕ್ಕ ಅಮ್ಮನನ್ನು ಕೇಳಿದರೆ, ಅವಳಿಗೆ ಬ್ಯಾಗು ತರಲು ಹೇಳುತ್ತಿದ್ದರು, ಅವರೇ ತೆಗೆದುಕೊಡಬೇಕಿತ್ತು. ನಾನು ಗೆಜ್ಜೆ ಸದ್ದು ಮಾಡದೆ ಹಾಗೆ ಮೆಲ್ಲಮೆಲ್ಲ ಹೆಜ್ಜೆ ಹಾಕಿ ಹೋಗಿ, ಅವರ ಬ್ಯಾಗ್ ತೆಗೆದೆ. ಅವರ ಶಾಲೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಲ್ಲಿ, ಅಮ್ಮ ಯಾವ ತರಗತಿಗೆ ಕ್ಲಾಸ್ ಟೀಚರ್ ಆಗಿದ್ದರೋ ಆ ತರಗತಿಯ ಮಕ್ಕಳ ಕೈಯಿಂದ ದುಡ್ಡು ಕಲೆಕ್ಟ್ ಮಾಡಿ ಶಾಲೆಯ ಕಚೇರಿಗೆ ಕೊಡಬೇಕಾಗಿತ್ತು. ಹಾಗೆ ಕಲೆಕ್ಟ್ ಮಾಡಿದ ದುಡ್ಡು ಅಂದು ಅವರ ಬ್ಯಾಗ್ ಅಲ್ಲಿತ್ತು. ಎಲ್ಲವೂ ಒಂದು ಎರಡು ರೂಪಾಯಿಯ ನೋಟುಗಳು! ನನ್ನ ಪುಟ್ಟ ತಲೆಗೆ ಅಷ್ಟೂ ನೋಟುಗಳನ್ನು ಕಂಡು ಅಚ್ಚರಿಯೆನಿಸಿರಬೇಕು. ಮರದ ಉದ್ದ ಸ್ಟಾಂಡ್ ಅಲ್ಲಿ ನನ್ನ ಮತ್ತು ಅಕ್ಕನ ಬ್ಯಾಗು ಇಡುತ್ತಿದ್ದೆವು. ಅಲ್ಲಿಗೆ ಹೋಗಿ, ನನ್ನ ಚೀಲ ಎತ್ತಿಕೊಂಡು ಬಂದು, ನನ್ನ ಕೈಗಳಿಗೆ ಅದೆಷ್ಟು ಹಿಡಿಯುತ್ತೋ ಅಷ್ಟೂ ನೋಟುಗಳನ್ನು ಮುದ್ದೆ ಮುದ್ದೆ ಮಾಡಿ ಚೀಲಕ್ಕೆ ತುರುಕುತ್ತಿದ್ದೆ.
ಒಂದಷ್ಟು ತುರುಕಿಯಾಗಿರಬೇಕು, ಬೆನ್ನ ಮೇಲೆ ಧಬ್ ಅಂತ ಪೆಟ್ಟು ಬಿತ್ತು! ನೋವಾಗಿ ಹಿಂತಿರುಗಿ ನೋಡಿದರೆ ಅಮ್ಮ ನಿಂತಿದ್ದಾರೆ. ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ, ಏನಿವತ್ತು ಇವಳು ಇನ್ನೂ ಎದ್ದಿಲ್ಲ ಅನಿಸಿ ಬಂದು ನೋಡಿದರೆ ನಾನು ಜಗತ್ ವಿಖ್ಯಾತ ಕಳ್ಳಿಯಾಗುವ ಎಲ್ಲಾ ಪ್ರಯತ್ನಗಳನ್ನು ಮಾಡ್ತಾ ಇದ್ದೀನಿ! ಅವತ್ತು ಸರಿಯಾಗಿ ಪೆಟ್ಟು ತಿಂದಿದ್ದೆ. ಮೊದಲೇ ಎಷ್ಟು ಮಾಡಿದರೂ ಮುಗಿಯದ ಮನೆ ಕೆಲಸಗಳು, ಜವಾಬ್ದಾರಿಗಳು, ಅಣ್ಣ ಬೇರೆ ದೂರದ ಊರಲ್ಲಿರುವುದು. ಇದರ ಮೇಲೆ ನನ್ನ ಈ ಕಳ್ಳತನ, ಪಾಪ ಅಮ್ಮ! ಎಷ್ಟು ಬೇಜಾರಾಗಿರಬೇಕು. ಅವತ್ತು ಇಡೀ ವಠಾರದಲ್ಲಿ ಗಿರಿಜಾ ಟೀಚರ್ ಮಗಳು ಬ್ಯಾಗಿಗೆ ದುಡ್ಡು ತುರುಕಿದ್ದೇ ಕಥೆ! ಮೂರನೇ ಮನೆ ಸತ್ಯ ನಾರಾಯಣ ಮಾಮ-ನೇತ್ರಾ ಆಂಟಿ, ಕೊನೆ ಮನೆಯಲ್ಲಿದ್ದ ಶಾರದಾ ಆಂಟಿ ಮತ್ತವರ ಗಂಡ ಪಳನಿ ಮಾಮ (ಅವರಿಗೆ ನಾನು ಕರಿಯುತ್ತಿದ್ದದ್ದು ಪಣ್ಣನಿಳಿ ಮಾಮ ಎಂದೇ), ಮತ್ತೆ ಪಕ್ಕದ ಕಂಪೌಂಡ್ ಅಲ್ಲಿದ್ದ ಸಾವಿತ್ರಿ ಟೀಚರ್, ಭಾನುಮತಿ ಆಂಟಿ, ಶಿವಣ್ಣ ಮಾಮ ಎಲ್ಲರೂ ಅಂದು ಬುದ್ಧಿ ಹೇಳಿದ್ದೇ ಹೇಳಿದ್ದು. ನಾನು, ತಲೆ ತಗ್ಗಿಸಿ ನಾಚಿಕೆಯಿಂದಲೂ, ಬೇಜಾರಿಂದಲೂ ತಲೆಯಾಡಿಸಿದ್ದೂ ಆಯಿತು. ಕೊನೆಗೆ ಭಾನುಮತಿ ಆಂಟಿ ಕೇಳಿದ್ದಕ್ಕೆ ಹಣೆಬೊಟ್ಟು ತೊಗೊಳ್ಳೋಕೆ ದುಡ್ಡು ತೆಗೆದೆ ಅಂದಿದ್ದೆ. ವಾರದ ಕೊನೆಗೆ ಅಣ್ಣ ಬಂದಾಗ ಕಣ್ಣಲ್ಲಿ ನೀರು ಸುರಿಸಿ ಅಳುವಂತೆ ಹೊಡೆದಿದ್ದರು. ಅದೇ ಕೊನೆ, ಅಮ್ಮನ ಬ್ಯಾಗಿರಲಿ, ಇಂದಿಗೂ ಯಾರ ಬ್ಯಾಗೂ ಮುಟ್ಟುವ ಸಾಹಸಕ್ಕೆ ಹೋಗುವುದಿಲ್ಲ! ಧೂಮ್ ಚಿತ್ರದಲ್ಲಿ ಹ್ಯಾಂಡ್ಸಮ್ ಕಳ್ಳ ಹೃತಿಕ್ ಅನ್ನು ನೋಡುವಾಗೆಲ್ಲ, ಒಂದು ಕ್ಷಣ ‘ಛೆ! ನನ್ನ ಕರಿಯರ್ ಹಾಳಾಯ್ತಲ್ಲ, ಇಂಟರ್ ನ್ಯಾಷನಲ್ ಕಳ್ಳಿಯಾಗುವ ಅವಕಾಶ ತಪ್ಪಿ ಹೋಯ್ತಲ್ಲ’ ಅನಿಸುತ್ತದೆ!.
ಮೂರನೇ ಕ್ಲಾಸಿಗೆ ಕಾಲಿಟ್ಟಿದ್ದೆ, ನನ್ನ ಪಕ್ಕ ಕೂರಲು ಒಬ್ಬಳು ಹೊಸ ಹುಡುಗಿ ಬಂದ್ದಿದಳು. ಅವಳಿಗೆ ಇಬ್ಬರು ಅಮ್ಮಂದಿರು. ಇವಳ ಚಿಕ್ಕಮ್ಮನ ಮಕ್ಕಳಿಗೆ ಸಿಕ್ಕಿದ್ದಷ್ಟು ಇವಳಿಗೆ ಸಿಗುತ್ತಿರಲಿಲ್ಲ, ತಿಂಡಿಗಳಾಗಲಿ, ಹೊಸ ಬಟ್ಟೆಗಳಾಗಲಿ....ಸರಿ, ನಾನು ಡಬ್ಬಿಯಲ್ಲಿದ್ದ ಊಟ, ಮನೆಯಲ್ಲಿಟ್ಟಿದ್ದ ತಿಂಡಿ, ಹಣ್ಣುಗಳು ಏನೂ ಸಿಗದೇ ಹೋದರೆ ಬೆಲ್ಲವನ್ನಾದರೂ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವಳು ಖುಷಿಯಿಂದ ನಕ್ಕಾಗೆಲ್ಲ ನಂಗೂ ಖುಷಿ. ಆ ವರ್ಷ ಚೌತಿಗೆ ಅಜ್ಜಮ್ಮ ಊರಿಗೆ ಹೋಗಲೆಂದು, ಅಮ್ಮ ಹಸಿರು ಎಲೆ ಎಲೆಗಳ ಅವಾಗಷ್ಟೇ ಟ್ರೆಂಡ್ ಆಗುತ್ತಿದ್ದ ಚೂಡಿದಾರವನ್ನು ಇಬ್ಬರಿಗೂ ಹೊಲಿಸಿದ್ದರು. ಇಬ್ಬರೂ ಅದು ಟೈಲರ್ ಶಾಪಿನಿಂದ ಮನೆಗೆ ಬಂದ ಕೂಡಲೇ ತೊಟ್ಟು ನೋಡಿ ಕುಣಿದದ್ದೂ ಆಗಿತ್ತು. ಮರುದಿನ ನನ್ನ ಸ್ನೇಹಿತೆ ಶಾಲೆಯಲ್ಲಿ ನೋಡೇ, ಹಬ್ಬ ಬಂತು. ನಮ್ಮ ಅಪ್ಪ, ಚಿಕ್ಕಮ್ಮನ ಮಕ್ಕಳಿಗಷ್ಟೇ ಬಟ್ಟೆ ಕೊಡಿಸಿದ್ದಾರೆ, ನಮಗೆ ಮಾತ್ರ ಕೊಡಿಸಲೇ ಇಲ್ಲ ಎಂದಳು. ನನ್ನ ಹೊಸ ಚೂಡಿದಾರ್ ಬ್ಯಾಗಲ್ಲಿ ತುರುಕಿಕೊಂಡು ಬಂದು ಅವಳಿಗೆ ಕೊಟ್ಟೆ.
ಊರಿಗೆ ಹೊರಡೋ ಮೊದಲು ಅಮ್ಮ ಅದೆಷ್ಟು ಹುಡುಕಿದರೂ ಮನೆಯಿಡೀ ಸಿಗಲಿಲ್ಲ. ಎಲ್ಲಿ ಸಿಗುತ್ತದೆ?! ಚೌತಿಗೆ ಬೇರೆ ಬಟ್ಟೆ ಹಾಕಿದ್ದಾಯ್ತು. ಒಂದು ದಿನ ನಾನು ಅಕ್ಕ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಚೂಡಿದಾರ ತೊಟ್ಟು ಹೋಗುತ್ತಿದ್ದ ನನ್ನ ಸ್ನೇಹಿತೆಯನ್ನು ನೋಡಿ ಅಕ್ಕ ಬೆಚ್ಚಿಬಿದ್ದಳು, ನಿಜ ಹೇಳು, ನಿಂದೇ ಅಲ್ವಾ ಆ ಡ್ರೆಸ್? ತಡಿ, ಅಮ್ಮನಿಗೆ ಹೇಳ್ತೇನೆ ಎಂದು ಬೆದರಿಸಿದವಳನ್ನು ತಡೆಯಲು ನಾ ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ. ಪ್ರತೀ ಸಲ ಜಗಳವಾದಾಗ, ಹೇಳಿದ ಕೆಲಸ ನಾ ಮಾಡದಿದ್ದಾಗ ಅದೊಂದು ಬ್ಲಾಕ್ ಮೇಲ್ ಅಸ್ತ್ರವಾಗಿತ್ತು ಅವಳಿಗೆ! ಯಾಕೋ ಗೊತ್ತಿಲ್ಲ, ಅವಳೆಂದೂ ಹೇಳಲೇ ಇಲ್ಲ. ಮುಂದಿನ ವರ್ಷದಿಂದ ನನ್ನ ಸ್ನೇಹಿತೆ ಶಾಲೆಗೆ ಬರಲೂ ಇಲ್ಲ. ಮುಂದೊಂದು ದಿನ ನಾನೇ ಅಣ್ಣ ಅಮ್ಮನಿಗೆ ಹೇಳಿದಾಗ ನನ್ನ ಡಿಗ್ರಿ ಮುಗಿದಿತ್ತು! ಅದಕ್ಕೇ ಅಲ್ಲವೇ ಅಕ್ಕ ನಿಂಗೆ ಕರ್ಣಿ ಅಂತ ಹೆಸರಿಟ್ಟಿದ್ದು ಎಂದು ಇಬ್ಬರೂ ಮನಸ್ಸು ಬಿಚ್ಚಿ ನಕ್ಕಿದ್ದರು.
ಡ್ರೆಸ್ ಹಗರಣವಾದಾಗ ಅಕ್ಕ ಒಂದು ಮಾತು ಹೇಳಿದ್ದಳು, ‘ನೀನು ಅಣ್ಣ ಅಮ್ಮನಿಗೆ ಹೇಳದೆ ಈ ಥರ ಮಾಡ್ತೀಯಲ್ಲಾ, ತಪ್ಪು ಅಂತ ಒಂದಿನ ನಿಂಗೆ ಗೊತ್ತಾಗುತ್ತೆ’ ಅಂತ. ಗೊತ್ತಾಗಲಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ.
ಅಜ್ಜಮ್ಮ ಊರಿಗೆ ಹೋದಾಗೆಲ್ಲ ದೊಡ್ಡಮ್ಮ ನಂಗೂ, ಅಕ್ಕನಿಗೂ ಐದೋ, ಹತ್ತೋ ರೂಪಾಯಿಗಳನ್ನು ಕೊಡುವುದು ರೂಢಿ. ಅದು ಸೀದಾ ಅಮ್ಮನ ಕೈಗೆ ಹೋಗುತ್ತಿತ್ತು. ಒಂದು ಸಲ, ಊರಿಂದ ಬೇಗ ಹೊರಟು ಬಂದೆವು. ಮಧ್ಯಾಹ್ನಕ್ಕೆಲ್ಲಾ ಮೂಡಿಗೆರೆಯಲ್ಲಿದ್ದೆವು. ಇಡೀ ದಿನ ರಜೆಯಾಗುವ ಬದಲು, ಮಧ್ಯಾಹ್ನವಾದರೂ ಶಾಲೆಗೆ ಹೋಗಲಿ ಎಂದು ಅಮ್ಮ ಕರಕೊಂಡು ಬಂದು ಶಾಲೆಗೆ ಬಿಟ್ಟರು. ಆ ಸಲ ದೊಡ್ಡಮ್ಮ ಕೊಟ್ಟ ಹತ್ತು ರೂಪಾಯಿ ನಮ್ಮ ಕೈಯಲ್ಲೇ ಉಳಿಯಿತು. ನನ್ನ ಪಾಲಿನ ಹತ್ತು ರೂಪಾಯಿಯ ಆ ನೋಟನ್ನು ಶಾಲೆಗೆ ಬಂದ ತಕ್ಷಣ ನಾನು ನೀತಿ ಭೋಧೆ ಪುಸ್ತಕದ ಬೈಂಡ್ ನಡುವೆ ಹಾಕಿಟ್ಟೆ, ಮನೆಗೆ ಹೋದ ಮೇಲೆ ಅಮ್ಮನಿಗೆ ಕೊಡೋಣವೆಂದು. ಆ ದಿನ ಮಧ್ಯಾಹ್ನದ ಮೊದಲ ಪೀರಿಯಡಿನಲ್ಲಿ ಸ್ನೇಹಾ ಎಂಬ ಹುಡುಗಿಯೊಬ್ಬಳು ಜೋರಾಗಿ ಅಳಲಾರಂಭಿಸಿದಳು. ಅವಳ ತಂದೆ ಸಾಕ್ಸ್ ಕೊಳ್ಳಲೆಂದು ಅವಳಿಗೆ ಹತ್ತು ರೂಪಾಯಿ ಕೊಟ್ಟಿದ್ದರಂತೆ. ಅದು ಕಳೆದುಕೊಂಡಿದ್ದಾಳೆ. ಕ್ಲಾಸು ತೆಗೆದುಕೊಳ್ಳುತ್ತಿದ್ದ ಸಿಸ್ಟರ್, ಮಕ್ಕಳೇ, ಸ್ನೇಹಾ ದುಡ್ದು ಯಾರು ತೆಗೆದಿದ್ದರೂ ಕೊಟ್ಟುಬಿಡಿ ಅಂದರು. ಯಾರೂ ಮುಂದೆ ಬರಲಿಲ್ಲ. ಅತ್ತೂ ಅತ್ತೂ ಅವಳ ಮುಖ ಕೆಂಪಾಗಿತ್ತು. ಇನ್ನೊಂದು ಪಿರಿಯಡ್ ಸ್ಟಾರ್ಟ್ ಆಗೋ ಮೊದಲು ಒಂದೈದು ನಿಮಿಷದ ಬ್ರೇಕ್ ಸಿಕ್ಕಿದಾಗ, ’ಅಪ್ಪ ಹೊಡಿತಾರೆ’ ಎನ್ನುತ್ತಾ ಬಿಕ್ಕುತ್ತಿದ್ದಳು.
ಅವಳನ್ನೇ ನೋಡುತ್ತಿದ್ದ ನಾನು, ಪುಸ್ತಕದ ಬೈಂಡಿನ ನಡುವಿದ್ದ ಹತ್ತು ರೂಪಾಯಿ ನೋಟನ್ನು ತೆಗೆದು ಅವಳಿಗೆ ಕೊಟ್ಟುಬಿಟ್ಟೆ.
ನಮ್ಮ ಕ್ಲಾಸಿನಿಂದ ಹೊರಹೋದ ಸಿಸ್ಟರ್, ಮುಂದಿನ ಪೀರಿಯಡ್ ತೆಗೆದುಕೊಳ್ಳಲು ಬರುತ್ತಿದ್ದ, ಶಾಲೆಗೆ ಹೊಸದಾಗಿ ಬಂದ ಟೀಚರರಿಗೆ ಸ್ನೇಹಾಳ ಹಣ ಕಳೆದ ವಿಷಯ ಹೇಳಿದ್ದಾರೆ. ಅವರು ಬಂದೊಡನೆ ದೊಡ್ಡ, ದಪ್ಪ ಸ್ವರದಲ್ಲಿ, “ಯಾರದು ಸ್ನೇಹಾಳ ದುಡ್ಡು ತೆಗೆದಿದ್ದು, ಕೊಟ್ಟು ಬಿಡಿ, ಇಲ್ಲಾ ಇಡೀ ಕ್ಲಾಸಿಗೆ ಬರೆ ಬೀಳುತ್ತೆ ಎಂದು ಗುಡುಗಿದರು. ಸ್ನೇಹಾ ಎದ್ದು ನಿಂತು “ಟೀಚರ್, ಸೌಮ್ಯ ಕದ್ದಿದ್ದಳು, ನೋಡಿ ವಾಪಸು ಕೊಟ್ಟಿದ್ದಾಳೆ”ಎಂದು ಆ ಹತ್ತರ ನೋಟು ತೋರಿಸಿದಳು. ಅವರೋ ಹತ್ತಿರ ಕರೆದು, ಮಾತನಾಡಲೂ ಅವಕಾಶ ಕೊಡದೆ, ದಪ್ಪ ಬೆತ್ತದಲ್ಲಿ ಹಿಂಗಾಲಿಗೆ ಬರೆ ಬೀಳುವಂತೆ ಹೊಡೆದಿದ್ದಲ್ಲದೇ ಉಳಿದ ಪಿರಿಯಡ್ ಇಡೀ ನನ್ನನ್ನು ಮೊಣಕಾಲೂರಿಸಿ ಬೋರ್ಡಿನ ಹತ್ತಿರ ನಿಲ್ಲಿಸಿದರು. ಆ ಹತ್ತು ರೂಪಾಯಿ ನೋಟು ಅವರ ಟೇಬಲ್ ಮೇಲೆ ಡಸ್ಟರ್ ಕೆಳಗಿತ್ತು. ಇಡೀ ಕ್ಲಾಸಿಗೆ ಅವತ್ತು ನನ್ನ ಬಗ್ಗೆ ನೀತಿ ಪಾಠ. ನಾನು ಎಲ್ಲರೆದುರು ಕಳ್ಳಿಯಾಗಿದ್ದೆ. ಹೊರಗಿನವರ ಬಳಿ ಒಂದೂ ದಿನವೂ ಬೈಸಿಕೊಳ್ಳದೇ, ಹೊಡೆಸಿಕೊಳ್ಳದವಳಿಗೆ ಅಂದಾದ ಗಾಯದ ಕಲೆ ಹಾಗೆ ಉಳಿದು ಹೋಗಿದೆ.
ಆ ಪೀರಿಯಡ್ ಮುಗಿಯುವ ಹೊತ್ತಿಗೆ ನಮ್ಮ ಕ್ಲಾಸ್ ಎದುರು ಹೆಡ್ ಮಿಸ್ ಹೋಗುತ್ತಿದ್ದವರು
ಮೊಣಕಾಲೂರಿ ನಿಂತ ನನ್ನನ್ನು ನೋಡಿ ಕ್ಲಾಸಿನ ಒಳಗೆ ಬಂದರು. ಟೀಚರ್ ಬಾಯಿಯಿಂದ ಇಡೀ ಪ್ರಹಸನ ಕೇಳಿ ನನ್ನ ಕಡೆ ತಿರುಗಿ "ಏನಮ್ಮ ಸೌಮ್ಯ, ಎಲ್ಲಿಂದ ಬಂತು ದುಡ್ಡು?” ಎಂದು ಕೇಳಿದರು. ಅಷ್ಟೂ ಹೊತ್ತು ತಲೆಯೆತ್ತದೆ ಅಳುವನ್ನು ತಡೆ ಹಿಡಿದು ಕೂತಿದ್ದವಳು, ಇನ್ನಷ್ಟು ಅಳುವನ್ನು ನುಂಗಿ, ಕತ್ತೆತ್ತಿ ನಡುಗುವ ಸ್ವರದಲ್ಲಿ “ ಇವತ್ತು ಅಜ್ಜಿ ಊರಿಂದ ಬಂದೆ ಮಿಸ್, ದೊಡ್ಡಮ್ಮ ನಂಗೂ, ಅಕ್ಕನಿಗೂ ಕೊಟ್ಟಿದ್ದರು” ಎಂದೆ.
ಕೂಡಲೇ ಅವರು ಅದೇ ಶಾಲೆಯಲ್ಲಿದ್ದ ಅಕ್ಕನನ್ನು ಕರೆಸಿದರು. ಅಕ್ಕನನ್ನು ನೋಡಿಯೇ ಕಣ್ಣೀರು ನನ್ನ ಮಾತು ಕೇಳದೇ ಉರುಳಲು ಆರಂಭಿಸಿತು, ನನ್ನನ್ನು ನೋಡಿ ಅವಳ ಕಣ್ಣಲ್ಲೂ ನೀರು ತುಂಬಿತು. ಹೆಡ್ ಮಿಸ್ ಕಡೆ ತಿರುಗಿ ಅವಳು ನಿಜವನ್ನು ತಿಳಿಸಿದಾಗ ಅವಳ ಕಂಠವೂ ನಡುಗುತ್ತಿತ್ತು. ಹೆಡ್ ಮಿಸ್ ಆ ಟೀಚರರಿಗೆ, “ ಅವರಮ್ಮ ಹೈಸ್ಕೂಲು ಟೀಚರ್, ಅವಳಕ್ಕ ಇದೇ ಶಾಲೆಯ ಒಳ್ಳೆ ವಿದ್ಯಾರ್ಥಿನಿ, ಇವಳೂ ಕ್ಲಾಸಿನಲ್ಲಿ ಮೊದಲು, ಅದು ಹೇಗೆ ಅವಳನ್ನು ಅನುಮಾನಿಸಿದಿರಿ? ಹೊಡೆದಿರಿ? ಅವರಮ್ಮ ಬಂದು ಕೇಳಿದರೆ ನಾನೇನು ಹೇಳಲಿ ? ” ಎಂದು ಕೇಳಿದರು. ಅದಕ್ಕವರು ವ್ಯಂಗ್ಯವಾಗಿ “ಅಯ್ಯೋ, ಕದಿಯದೇ ಹೋದ್ರೆ ಇವಳ್ಯಾಕೆ ಅವಳಿಗೆ ತೆಗೆದುಕೊಡಬೇಕಿತ್ತು?” ಎಂದರು. ನಾನು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಅವರನ್ನು ನೋಡಿ, ಗಟ್ಟಿಯಾಗಿ “ ಪಾಪ, ಅವಳು ಅಳ್ತಾ ಇದ್ದಳಲ್ಲ, ಮನೆಗೆ ಹೋದಾಗ ಅವರಪ್ಪ ಅವಳಿಗೆ ಹೊಡೆದ್ರೆ? ಅದಕ್ಕೆ ಕೊಟ್ಟಿದ್ದು” ಅಂದೆ.
ಮನೆಗೆ ಬರುತ್ತಿದ್ದಂತೆಯೇ ಅಮ್ಮನಿಗೆ ನನ್ನ ಸಪ್ಪೆ ಮುಖ ನೋಡಿ ಗಾಬರಿಯಾಯಿತು. ಹಣೆ, ಕುತ್ತಿಗೆ ಎಲ್ಲಾ ಮುಟ್ಟಿ ನೋಡಿ ಏನಾಯ್ತಮ್ಮ, ಯಾರಾದರೂ ಏನಾದರೂ ಅಂದರಾ? ಎಂದು ಇಬ್ಬರ ಮುಖ ನೋಡಿ ಕೇಳಿದರು. ಅಕ್ಕ ಎಲ್ಲಾ ವಿವರಿಸಿ ಹೇಳುತ್ತಿದ್ದಂತೆ, ನಾನು ಬೀಳುವ ಹೊಡೆತಕ್ಕೆ ರೆಡಿಯಾಗುತ್ತಿದ್ದೆ. ಅಮ್ಮ ಎಲ್ಲಾ ಕೇಳಿಸಿಕೊಂಡು ನನ್ನೆಡೆ ತಿರುಗಿದಾಗ ನಾನು ಅಮ್ಮಾ, ದೇವರಾಣೆ ನಾನವಳ ದುಡ್ಡು ಕದ್ದಿಲ್ಲ ಎಂದೆ. ನಾ ಹೆದರಿದಂತೆ ಹೊಡೆಯುವ ಬದಲು ಅಮ್ಮ, ಎತ್ತಿ ತೊಡೆಯಲ್ಲಿ ಕುಳಿತುಕೊಳ್ಳಿಸಿ, ಹಿಂಗಾಲಿಗಾದ ಬರೆಯನ್ನು ಹಗುರಕ್ಕೆ ಬೆರಳಲ್ಲಿ ಸವರಿ, "ನೋವಾಗ್ತಿದೆಯಮ್ಮ?" ಎಂದು ನಿಧಾನವಾಗಿ ಕೇಳಿದರು.

No comments:

Post a Comment