Wednesday, May 11, 2016

ಚಿತ್ತಾರಗಳು

ನರಸಿಂಹ ಭಿಡೆ ಪಕ್ಕದಲ್ಲೇ ಕೂತು ಶೀತಲ ಏರಿಳಿತವಿಲ್ಲದ ದನಿಯಲ್ಲಿ, ಹೇಳುತ್ತಲೇ ಹೋದ. ಕೇಳುತ್ತ ಕೇಳುತ್ತ ರೀಲುಗಳು ನನ್ನ ಕಣ್ಣ ಮುಂದೆ ಸುತ್ತುತ್ತಲೇ ಹೋದವು. ಅಪ್ಪನ ಕಾಲಿನ ನರಗಳು, ಬಾವಿ ನೀರ ಸೇದಿ ಸೇದಿ ಕೈ ಚರ್ಮ ಸುಲಿದ ಅಮ್ಮ, ಒಳಗಿನ ಸನ್ಯಾಸಿನಿಯನ್ನು ಬಡಿಯಲೆತ್ನಿಸುವ ಅಕ್ಕ, ರಾತ್ರಿ ಕೂತು ಕೇಳುತ್ತಿದ್ದ ಸತ್ಯನಾರಾಯಣ ಮೇಷ್ಟ್ರು, ನಿರ್ಭಾವುಕ (?) ಮಂಗಳಾ, ಸಿಡಿಲು ತಡೆದ ಸರೋಜಿನಿ....ಎಲ್ಲಕ್ಕಿಂತ ತೀವ್ರವಾಗಿ ಕಾಡುತ್ತಿರುವುದು ದಿಟ್ಟಿಸಿ ನೋಡುತ್ತಿರುವ ಅಳಿಲು.....

ಹಾನಗರದ ಮಗ್ಗಲುಗಳು ಇಷ್ಟು ವೈವಿಧ್ಯಮಯವಾಗಿರಬಲ್ಲದೆ? ಕಣ್ಣಿಗೆ ಕಾಣುವ ಜಯ-ವಿಜಯ ನಗರಗಳು, ಕೋರಮಂಗಲ - ಎಂ ಜಿ ರೋಡುಗಳೂ, ಸುಖ ಸವಲತ್ತಿನ ಅಪಾರ್ಟುಮೆಂಟುಗಳು, ದೌಲತ್ತಿನ ಮಾಲುಗಳು, ಒಣ ಆಡಂಬರದ ಶ್ರೀಮಂತ ದೇವರುಗಳು ಇವೆಲ್ಲದಕ್ಕೂ ತನ್ನ ಮಗಳನ್ನು ಹುಡುಕುತ್ತಿರುವ ಅಂಜನಪ್ಪ ಗುರುತಿದ್ದಾನೆಯೇ, ನರಸಿಂಹ ಭಿಡೆಯ ಆತ್ಮ ಬಗೆದು ನೋಡಲು ಸಾಕ್ಷಾತ್ ಉಗ್ರ ನರಸಿಂಹನಿಗೂ ಆಗುತ್ತದೆಯೇ? ಏರಿಯಕ್ಕೊಂದು ತಲೆ ಎತ್ತಿ ನಿಂತಿರುವ ಬಿಡಿಎ ಕಾಂಪ್ಲೆಕ್ಸಿನ ಅಂಗಡಿಗಳಲ್ಲಿ ನೇತು ಹಾಕಿರುವ ಬಗೆ ಬಗೆ ವಿನ್ಯಾಸದ, ರಂಗ್ ಭಿ ರಂಗೀ ಬಟ್ಟೆಗಳಲ್ಲಿ ಜ್ಯೂಲಿಯ, ಸಹನಾಳ ಬಣ್ಣದ ಕನಸಿರಬಹುದೇ? ನಮ್ಮ ಊರಲ್ಲಿ ಬಿಟ್ಟು ಬಂದ ಹಾದಿ ಬೀದಿಗಳು, ಅಂಗಡಿಗಳು, ಮನುಷ್ಯರು ಇಲ್ಲೂ ಸಿಗಬಹುದೇ ? ಅಪ್ಪ ಅಮ್ಮಂದಿರು ಹತ್ತಿರ ಇರುವಾಗಕ್ಕಿಂತ ದೂರವಾದಾಗ ಏಕೆ ಹತ್ತಿರವಾಗುತ್ತಾರೆ, ಕಾಡುತ್ತಾರೆ, ಕಾಣುವ ಮುಖಗಳಲೆಲ್ಲಾ ಏಕೆ ಮಿಂಚಿ ಮರೆಯಾಗುತ್ತಾರೆ?

ಇದಾವ ಪರಿಯ ನಗರ?

ಕೈ ಹಿಡಿದು ಎಳೆಯಲೆತ್ನಿಸಿದ ಹುಚ್ಚ ಅಪ್ಪ, ತಣ್ಣೀರಲ್ಲಿ ತೊಯ್ದ ಕಾಗದದ ಚೂರುಗಳು, ಆಸ್ತಿ ಪಂಜರವಾದ, ಬೂದಿಯಾದ ಅವರ ಶರೀರಗಳು ಅಷ್ಟೇ ಸುಲಭಕ್ಕೆ ಬೂದಿಯಾಗದ ನೆನಪಿನ ಮಾಲೆಗಳು, ಜೀವನದ ಕಾಲು ಭಾಗ ಅವರೊಂದಿಗೆ, ಇನ್ನು ಉಳಿದ ಮುಕ್ಕಾಲು ಭಾಗ ಅವರ ನೆನಪಿನೊಂದಿಗೆ ಕಳೆಯುವ ನಾವುಗಳು ಇಷ್ಟೇ ತೀವ್ರವಾಗಿ ನಮ್ಮ ಮಕ್ಕಳ ಬದುಕಲ್ಲೂ ಇರುತ್ತೆವೆಯೇ? ಅಂತಹ ಸಾಧ್ಯತೆಗಳ ಬಗ್ಗೆ ಯೋಚಿಸಿದಾಗ ಮೈ ನಡುಗುತ್ತದೆ, ಮತ್ತೊಂದು ಜೀವ ಭೂಮಿಗೆ ತಂದು ಅದರ ಕಣ್ಣಲ್ಲಿ ನಮ್ಮ ಬದುಕು ಹೇಗಿರಬಹುದು ಎಂಬ ಯೋಚನೆಯೇ ವಿಚಿತ್ರವೆನಿಸುತ್ತದೆ. ಯಾವುದನ್ನೋ ಮರೆಯುವುದಕ್ಕೆ, ಅಳಿಸುವುದಕ್ಕೆ ಇನ್ನ್ಯಾರನ್ನೋ ನೋಯಿಸುತ್ತವೆ, ಅಳಿಸುತ್ತೇವೆ. ಕೊನೆಗೊಮ್ಮೆ ಛಿದ್ರ ಛಿದ್ರವಾದ, ಜೀರ್ಣಾವಸ್ಥೆಯಲ್ಲಿರುವ ಬದುಕಿನ ಅಂಗಿ ಹಿಡಿದು ನಾವೂ ಕೂತು ಅಳುತ್ತೇವೆ. ಕಳೆದ ಘಳಿಗೆ ನೆನೆಯುತ್ತಾ ಈ ಕ್ಷಣದಲ್ಲಿ ಬದುಕದೆ ಸವೆಯುವ ನಾವುಗಳು ಜಗತ್ತಿನ ಯಾವುದೇ ನಗರಕ್ಕೂ ಸಲ್ಲದವರು. 

ಇವಿಷ್ಟೂ ಜೋಗಿಯವರ ಹೊಸ ಕಾದಂಬರಿ ‘ಬೆಂಗಳೂರು’ ಹೊಳೆಯಿಸಿದ್ದು.


smile emoticon

No comments:

Post a Comment