Thursday, May 5, 2016

ಘಮಲು

ಪಕ್ಕದ ಮನೆಯ ಗಾಯತ್ರಿ ಅಮ್ಮ ಕೊಡೋ ಅನ್ನ, ದಾಳಿ ತೊವೆ, ಪತ್ರೊಡೆ 
ಮೂರನೇ ಮನೆಯ ಪಳನಿ ಅಂಕಲ್ ತರೋ ಗಜಗಾತ್ರದ ಸೀಬೆ ಹಣ್ಣು
ಅದರ ಪಕ್ಕದ ಮನೆಯ ನೇತ್ರಾ ಆಂಟಿ ಮಾಡುವ ಅಕ್ಕಿ ರೊಟ್ಟಿ, ಕಾಯಿ ಚಟ್ನಿ 
ಚಾಳಿನ ಕೊನೆಯ ಮನೆಯ ಫರೀದಕ್ಕ, ಅವರ ಮನೆಯಲ್ಲಿ ಸಿಗುವ ಬದಾಮು, ಖೀರು
ಬೀದಿ ದಾಟಿದರೆ ಆಲಮೇಲು ಆಂಟಿಯ ಗಮ ಗಮ ಪುಳಿಯೋಗರೆ
ಆ ಬೀದಿಯ ಕೊನೆಗೆ ಇಸ್ತ್ರಿ ಮಾಡುವ ಕುಮಾರ್ ಅಂಕಲ್ ಕೊಡೋ ನಿಂಬೆ ಹುಳಿ ಪೆಪ್ಪರಮಿಂಟು
ಅದರಾಚೆ ಬೀದಿಯ ಜಾನಪ್ಪ ಗೌಡರ ಮನೆಯ ಮುದ್ದೆ, ಅವರೇ ಹುಳಿ
ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಮನೆಯ ಲೂಸಿ ಆಂಟಿ ಮನೆಯ ಕ್ರಿಸ್ಮಸ್ ಕೇಕು
ಎರಡೇ ಬೀದಿ ದಾಟಿದರೆ ಪಲ್ಲೇದ್ ಆಂಟಿ ಮಾಡಿ ಕೊಡೋ ಬಿಸಿ ಜೋಳದ ರೊಟ್ಟಿ, ಬೆಣ್ಣೆ, ಪಲ್ಲೆ
ಬಜಾರಿನಲ್ಲಿ ಬಟ್ಟೆ ಅಂಗಡಿಯ ಹಿಂದೆಯೇ ಅಂಗಡಿಯವರ ಮನೆ, ಅಲ್ಲಿ ಮೆದ್ದು ಬಂದ ಪದರದ ಚಪಾತಿ, ತುಪ್ಪ, ಸಕ್ಕರೆ
ಬಾಲ್ಯ ಅಂದ್ರೆ ಇಷ್ಟೂ ಇಲ್ಲದಿದ್ರೆ ಹೇಗೆ ಹೇಳ್ರಿ, ಒಟ್ಟಿನಲ್ಲಿ ಇಡೀ ಮೂಡಿಗೆರೆ ನಮ್ದೆ ಕಣ್ರೀ!
ಇವನ್ನೆಲ್ಲ ನೆನೆದು ನನ್ನ ಪುಟಾಣಿ ಪುಟ್ಟಣ್ಣನಿಗೆ ಹೇಳಿದ್ರೆ
ಪಾಪ ಅವನಿಗೆ ಸಿಕ್ಕಿದ್ದು ಪಕ್ಕದ ಫ್ಲಾಟಿನ ಪೂಜೆಯ ಸಪಾತ ಭಕ್ಷ್ಯದ ಘಮಲು ಮಾತ್ರ

ಪುಟ್ಟಣ್ಣನ ನಿದ್ದೆ

ಡೊರೆಮೊನ್ ಸುಸ್ತಾಗಿ ಬೆಡ್ ಶೀಟಲ್ಲಿ ಹುದುಗಿ ಬಿಟ್ಟ
ಡಾಗೀಶ ಕೈ ಕಾಲು ಬಿಸಾಡಿ ಮಲಗಿದ 
ಆನೆರಾಯನ ಮುಖವೂ ಸಣ್ಣಗಾಯ್ತು
ವಿನ್ನಿಯಂತೂ ಬಿಟ್ಟ ಕಣ್ಣ ಮುಚ್ಚಲೇ ಇಲ್ಲ
ಈ ಪುಟ್ಟಣ್ಣನ ನಿದ್ದೆ ಮುಗಿತಾನೆ ಇಲ್ಲ...
ಪುಟ್ಟಣ್ಣ ಎದ್ದರೆ ಹಾಲಿಗೆ ಕರಕೊಂಡು ಹೋಗ್ತಾನೆ
ಮನಸ್ಸಾದರೆ ಬಾಲ್ಕನಿಗೂ
ಅಮ್ಮ ನೋಡದೆ ಇದ್ದರೆ ನಲ್ಲಿ ಕೆಳಗೂ ನಿಂತುಕೊಳ್ಳಬಹುದು
ಪುಟ್ಟಣ್ಣ, ಏಳೋ ಮಾರಾಯ ಬೇಗ!
ನೀನಂತೂ ಇಡೀ ದಿನ ಕ್ರಿಕೆಟ್ ಆಡ್ತೀ, ಹೊರಗಡೆ ಇರ್ತೀ
ನಮಗೆ ಮಾತ್ರ ಎಲ್ಲೂ ಹೋಗೋಕಿಲ್ಲ
ನೀನು ಸ್ವಿಮ್ಮಿಂಗೂ ಮಾಡ್ತಿ, ಐಸ್ಕ್ರೀಮೂ ತಿಂತಿ
ಎರಡು ಮೂರು ಸಲ ಸ್ನಾನ ಬೇರೆ
ನಮಗೆ ಶೆಕೆಯೋ ಶೆಕೆ ಮಾರಾಯ
ಏಳೋ ಪುಣ್ಯಾತ್ಮ ಒಂದ್ಸಲ!



Monday, April 18, 2016

Thursday, February 18, 2016

Simply

ಚೆಲುವ ಪ್ರತಿಮೆ ನೀನು...
ಪ್ರೇಮ ಲೋಕದಿಂದ ತಂದ ಪ್ರೇಮದ ಸಂದೇಶ...
ಆಹಾ, ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ...

ವಲೆಂಟೈನ್ಸ್ ಡೇಯ ರಾತ್ರಿ ಹೀಗೆಲ್ಲಾ ಹಾಡಿ ಕುಣಿರಬಹುದೇ ಈ ಕಣ್ಣು ಮೂಗು ಕಾಣದ ಹಾಗೆ ಬಣ್ಣ ಬಳಿದ ಬೊಂಬೆಗಳು? 

 ಹುಬ್ಬು, ರೋಮ, ಕೂದಲು, ಏನೂ ಇಲ್ಲದ ಈ ಬೊಂಬೆಗಳು ದಿನವಿಡೀ ಅಲುಗದೆ ನಿಂತು ರಾತ್ರಿಯೆಲ್ಲ ಮಾಲ್ ಪೂರ್ತಿ ಸುತ್ತಿರಬಹುದೇ?  ಲಿಫ್ಟ್, ಎಸ್ಕಲೇಟರ್ಗಳಲ್ಲಿ ಸುಮ್ಮಸುಮ್ಮನೆ ಮೇಲೆ ಕೆಳಗೆ ಓಡಾಡಿ ಗಾಜಿನಲ್ಲಿ ಬಂದಿಯಾದ ರಂಗ್ ಭಿ ರಂಗೀ ಡೊನಟ್, ಚಾಕಲೇಟ್, ಕುಕೀಸ್ ಗಳಿಗೆ ಆಸೆ ಮಾಡಿರಬಹುದೇ?  ಐನಾಕ್ಸಿನ ಸೀಟುಗಳಲ್ಲಿ ಕೂತು, ಎದ್ದು, ಖಾಲಿ ಸ್ಕ್ರೀನನ್ನು ನೋಡಿ, ನಕ್ಕಿರಬಹುದೇ?  ಮಾಲಿನ ರೂಫಿನ ಮೇಲಿಂದ ನೇತಾಡುವ ತೂಗು ದೀಪಗಳ ಬೆಳಕಲ್ಲಿ ಒಬ್ಬರನ್ನೊಬ್ಬರು ನೋಡಿ ಪ್ರೀತಿಸಿರಬಹುದೇ? ಲಿಫ್ಟಿನ ಸಂಗೀತಕ್ಕೆ, ಅದರ ಗೋಡೆಗಳಿಗೆ ಅಂಟಿರುವ ಕನ್ನಡಿಯಲ್ಲಿ ಕಾಣುವ ತಮ್ಮದೇ ಪ್ರತಿಬಿಂಬಕ್ಕೆ ಮಾರು ಹೋಗಿರಬಹುದೇ? ಬಟ್ಟೆ -ಬರೆ, ಇಲೆಕ್ಟ್ರೋನಿಕ್ಸ್, ಸೌಂದರ್ಯವರ್ಧಕಗಳು, ಪುಸ್ತಕಗಳು, ಆಟಿಕೆಗಳು, ಪರ್ಸ್, ಬ್ಯಾಗು ಇವೆಲ್ಲವನ್ನೂ ನೋಡಿ ಅಬ್ಬಾ! ಮನುಷ್ಯರಿಗೆ ಏನೆಲ್ಲಾ ಬೇಕಿದೆಯಲ್ಲ ಎಂದು ಆಶ್ಚರ್ಯ ಪಟ್ಟಿರಬಹುದೇ?

Monday, December 7, 2015

ಉಲ್ಲಾಸಾ


ಉಲ್ಲಾಸಾ ಕೆಲಸ ಮಾಡುತ್ತಿದ್ದದ್ದು ಕೋರಮಂಗಲದಲ್ಲಿನ ಸಾಫ್ಟವೇರ್ ಕಂಪೆನಿಯೊಂದಕ್ಕೆಕಳೆದ ನಾಲ್ಕು ವರ್ಷಗಳಿಂದ ಟೆಸ್ಟಿಂಗ್ ಟೀಮಿನಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಸಂಬಳವೂ ಚೆನ್ನಾಗಿಯೇ ಬರುತ್ತಿತ್ತುತಂದೆ-ತಾಯಿಯೊಂದಿಗೆ ಆರಾಮಾಗಿ ಬದುಕುತ್ತಿದ್ದವಳಿಗೆ ದೆಹಲಿಯಲ್ಲಿರುವ ಅವಳಕ್ಕನಂತೆಮದುವೆಯಾಗಿ ಕೆಲಸ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟವಿರಲಿಲ್ಲಈಗ ಅಕ್ಕ ಗರ್ಭಿಣಿಯಾಗಿದ್ದರಿಂದ ತಂದೆ-ತಾಯಿ ಅವಳ ಬಳಿ ಹೋಗಿದ್ದರುನಗುಮುಖದಸಮಾಧಾನ ಚಿತ್ತದ ಉಲ್ಲಾಸಾ ಯಾವುದೇ ಕಾರಣಕ್ಕೂ ಕುಗ್ಗುತ್ತಿರಲಿಲ್ಲಜೀವನದುದ್ದಕ್ಕೂ ಸದಾ ಯಶಸ್ಸು ಅವಳೊಂದಿಗೇ ನಡೆದು ಬರುತ್ತಿತ್ತು,ಸೋಲಿನ ರುಚಿ ನೋಡದವರಿಗೆ ಬದುಕು ಸುಂದರವಾಗಿಯೇ ಕಾಣುತ್ತದೆ ಎಂದು ಅವಳಪ್ಪ ಆಗಾಗ ಅನ್ನುತ್ತಿದ್ದರುಟೆಸ್ಟಿಂಗ್ ಟೀಮಿಗೂಡೆವಲಪ್ಮೆಂಟ್ ಟೀಮಿಗೂ ಯಾವಾಗಲೂ ಯುದ್ಧ ನಡೆಯುತ್ತಲೇ ಇರುತ್ತಿತ್ತುಎಂಥಹ ವಾದವಿವಾದಚರ್ಚೆಗಳಾಗಲೀ ಉಲ್ಲಾಸಾ ದನಿಯೇರಿಸಿದ್ದಾಗಲೀತಾಳ್ಮೆಕಳೆದುಕೊಂಡದ್ದಾಗಲೀ ಕಂಡವರೆ ಇಲ್ಲಸ್ನಿಗ್ಧ ನಗುಮೃದು ಮಾತಿನೊಂದಿಗೆ ಎಲ್ಲರೂ ಒಪ್ಪುವಂತೆ ಮಾತನಾಡುತ್ತಿದ್ದಳುಅದಕ್ಕೇ ಕರಿಯರ್ ಮೆಟ್ಟಲನ್ನು ಅತೀ ವೇಗವಾಗಿ ಹತ್ತಿದ್ದಳುಸೆಬಾಸ್ಟಿಯನ್ ವಿನೋದ್ ಉಲ್ಲಾಸಾಳ ಪರಮಾಪ್ತ ಸ್ನೇಹಿತ. ಇಬ್ಬರೂ ಮಾತಾಡದ ವಿಷಯಗಳಿಲ್ಲ. ಅವನ ಅಮ್ಮ, ಅವನು ಇಬ್ಬರೂ ತಂದೆ ತೀರಿ ಹೋದ ಮೇಲೆ ತೀರ್ಥಹಳ್ಳಿ ಬಿಟ್ಟು ಬೆಂಗಳೂರಲ್ಲೇ ವಾಸವಾಗಿದ್ದರು. ಪ್ರೀತಿಸಿದ ಹುಡುಗಿ ದೂರವಾದ ಮೇಲೆ ಜೀವನದಲ್ಲಿ ಆಸಕ್ತಿ ಕಳೆದುಕೊಂಡಂತಿದ್ದವನನ್ನು ಮತ್ತೆ ಬದುಕಿಗೆ ಕರೆದುಕೊಂಡು ಬಂದಿದ್ದು ಉಲ್ಲಾಸಾಳ ನಿರ್ಮಲ ಸ್ನೇಹ, ನಗು, ಮಾತು. ತನ್ನ ಹುಡುಗಿಯ ಬಗ್ಗೆ ನಾಲ್ಕೈದು ಸಲ ಹೇಳಿದ್ದನಾದರೂ ಕೂಡಲೇ ವಿಷಯಾಂತರ ಮಾಡಿಬಿಡುತ್ತಿದ್ದ. ಉಲ್ಲಾಸಾಳೂ ಹೆಚ್ಚು ಕೆದಕಲು ಹೋಗುತ್ತಿರಲಿಲ್ಲ.
ಆ ದಿನ ಕೆಫೆಟೇರಿಯಾಕ್ಕೆಂದು ಬಾಗಿಲ ಬಳಿ ಬಂದವಳಿಗೆ ಹಿಂದಿಂದ ಯಾರೋ ಹಲೋಅಂದ ಹಾಗಾಯ್ತುಸಟ್ಟನೇ ತಿರುಗಿದವಳಿಗೆ ಕಂಡದ್ದು ಹದಿನೈದು ದಿನಗಳ ಹಿಂದಷ್ಟೇ ಡೆವಲಂಪ್ಮೆಂಟ್ ಟೀಮಿಗೆ ಸೇರಿದ್ದ ಆರಡಿ ಎತ್ತರದ ಅಜಾನುಬಾಹು, ಸುರುದ್ರೂಪಿ ವಿನೋದ್. " ಹಾಯ್ಎಂದವಳು ಕಾರ್ಡುಉಜ್ಜಿ ಗಾಜಿನ ಬಾಗಿಲು ತೆಗೆದು ಹೊರಬಿದ್ದು ಅವನಿಗಾಗಿ ಬಾಗಿಲು ತೆರೆದು ನಿಂತಳುಅವನೂ ಕಾರ್ಡು ಉಜ್ಜಿ ಬರುತ್ತಿದ್ದಂತೆ ಕಾಫೀಗಾ?" ಎಂದಳುಹೌದು ಅಂದವನು ಅವಳೊಂದಿಗೆ ಲಿಫ್ಟ್ ಕಡೆ ನಡೆದಯಾವಾಗಲೂ ಗಿಜಿಗುಡುತ್ತಿದ್ದ ಕೆಫೆಟೇರಿಯಾ ಈಹೊತ್ತಲ್ಲಿ ಶಾಂತವಾಗಿ ಬಿಕೋ ಹೊಡೆಯುತ್ತಿತ್ತು.ಅರ್ಡರ್ ಮಾಡಿ ಕೂತವರು ಸಾಕಷ್ಟು ಹರಟಿದರು. ಅವರ ಮಾತುಕತೆಯೆಲ್ಲಾ ಇಂಗ್ಲೀಷಿನಲ್ಲೇ ಸಾಗಿತ್ತು. ವಿನೋದ್ ಮೂಲತಃ ಆಂಧ್ರದವನು, ಅವನೇ ಜಾಸ್ತಿ ಮಾತಾಡಿದ, ಅವಳ ಕುಲಗೋತ್ರವೆಲ್ಲಾ ವಿಚಾರಿಸಿದ. ಅವನ ರೂಪಕ್ಕೂ, ಮಾತುಕತೆಗೂ ಸ್ವಲ್ಪವೂ ಹೊಂದಾಣಿಕೆಯಾಗುತ್ತಲೇ ಇರಲಿಲ್ಲ. ಸಂಬಳ,ಆಸ್ತಿಯ ವಿವರಗಳನ್ನೂ ಅವಳೆದುರು ಬಿಚ್ಚಿಟ್ಟ. ಉಲ್ಲಾಸಾ ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದಳು.  “ ಇವತ್ತೇನು ನಿನ್ನ ಕ್ಲೋಸ್ ಫ್ರೆಂಡ್ ಸೆಬಾಸ್ಟಿಯನ್ ವಿನೋದ್ ಬಂದಿಲ್ಲವೇ? “ ಎಂದು ಕೇಳಿದವನ ದನಿಯಲ್ಲಿ ಸ್ಪಷ್ಟವಾದ ವ್ಯಂಗ್ಯ ಹಾಗೂ ಸಹಜವಲ್ಲದ ಕುತೂಹಲವಿತ್ತು. ಪ್ರಶ್ನೆ ಹಾಗೂ ಅಶ್ಚರ್ಯದೊಂದಿಗೆ ಅವನ ಮುಖ ನೋಡಿದಳು ಉಲ್ಲಾಸಾ, ಅವಳ ಭಾವ ಗುರುತಿಸಿದವನಂತೆ “ ಹಾಗಲ್ಲ, ನಿಮ್ಮಿಬ್ಬರನ್ನು ಒಟ್ಟಿಗೆ ನೋಡಿದ್ದೆ ಕೆಫೆಟೇರಿಯಾದಲ್ಲಿ ಆಗಾಗ “ ಎಂದ. “ಓಹ್! “ ಎಂದು ಉದ್ಗರಿಸಿದವಳು “ ಇಲ್ಲ, ಇವತ್ತು ರಜೆಯಲ್ಲಿದ್ದಾರೆ, ಹೊರಡೋಣ? “ ಎಂದು ಖುರ್ಚಿ ಸರಿಸಿ ಮೇಲೆದ್ದಳು. ಅವನ ಭಾವವನ್ನು ಅಲಕ್ಷಿಸಿ ದುಡ್ಡು ತಟ್ಟೆಗಿಟ್ಟು ಮಾತನಾಡುವ ಮೊದಲೇ “ನಾನೇ ಕರೆದಿದ್ದು ಕಾಫಿಗೆ, ನೆಕ್ಸ್ಟ್ ಟೈಮ್ ನೀವು ಕೊಡೋರಂತೆ” ಎಂದವಳೇ ಹೊರನಡೆದಳು. ಲಿಫ್ಟಿನಲ್ಲಿ ಇಬ್ಬರೂ ಒಟ್ಟಿಗಿಳಿದರೂ ನಡುವೆ ಮೌನವಿತ್ತು. ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆ “ ಬಾಯ್” ಎಂದಷ್ಟೇ ನುಡಿದು ಹೊರಟುಹೋದಳು. ಅವುಡುಗಚ್ಚಿದ ವಿನೋದ್ ಮುಖ ಯಾಕೋ ಉರಿಯುತ್ತಿತ್ತು.
ಇದಾಗಿ ವಾರ ಕಳೆದಿರಬೇಕು, ಸೆಬಾಸ್ಟಿಯನ್ ಒಟ್ಟಿಗೆ ಕೂತು ಹರಟುತ್ತಾ ಊಟ ಮಾಡುತ್ತಿದ್ದವಳಿಗೆ ವಿನೋದ್ ಕಾಣಿಸಿದ. ಅವನಾಗೇ ಬಂದು “ ಹಲೋ ಉಲ್ಲಾಸಾ, ಹೇಗಿದ್ದೀಯಾ ?, ಹಾಯ್ ಸೆಬಾಸ್ಟಿಯನ್ , ಐಯಾಮ್ ವಿನೋದ್, ವಿ ಬೋತ್ ಶೇರ್ ಎ ಕಾಮನ್ ನೇಮ್ “ ಅಂದವನು ದೊಡ್ಡ ಜೋಕ್ ಹೇಳಿದೆ ಎಂಬಂತೆ ಗಹಗಹಿಸಿ ನಗುತ್ತಾ ಅವನ ಎಡಗೈ ಕುಲುಕಿದ. ಸೆಬಾಸ್ಟಿಯನ್ ಮಾತನಾಡದೇ ಊಟ ಮಾಡತೊಡಗಿದ. ವಿನೋದ್, ಸಂಭಾಷಣೆಯ ಪೂರ್ತಿ ಉಸ್ತುವಾರಿ ವಹಿಸಿದಂತೆ ತನ್ನ ಬಗ್ಗೆಯೇ ಕೊಚ್ಚಿಕೊಂಡ. ಇದು ಸತತ ಮೂರು ದಿನಗಳು ನಡೆದಾಗ ನೆಮ್ಮದಿಯಿಂದ ಊಟ ಮಾಡಲಾಗುತ್ತಿಲ್ಲ ಎಂದು ಬೇಸರಪಟ್ಟುಕೊಂಡರು ಇಬ್ಬರೂ. ನಾಲ್ಕನೇ ದಿನ ಅವನು ಬರುತ್ತಿದ್ದಂತೆ ಉಲ್ಲಾಸಾ ತನ್ನ ನಿರುದ್ವಿಗ್ನ ದನಿಯಲ್ಲಿ “ ವಿನೋದ್, ತಪ್ಪು ತಿಳಿಯಬೇಡಿ, ನಮ್ಮ ಫ್ರೀಕೆನ್ಸಿ ಮ್ಯಾಚಾಗಲ್ಲ ಅನಿಸುತ್ತೆ, ದಯವಿಟ್ಟು ನಮ್ಮ ಪಾಡಿಗೆ ಊಟ ಮಾಡಲು ಬಿಡಿ “ ಎಂದುಬಿಟ್ಟಳು. ತಿರುಗಿ ಅವನ ಮುಖವನ್ನೊಮ್ಮೆ ದಿಟ್ಟಿಸಿದ ಸೆಬಾಸ್ಟಿಯನ್ ಕೂಡಾ ಮಾತನ್ನು ಅನುಮೋದಿಸಿದಂತಿತ್ತು.  ಅವನೊಮ್ಮೆ ಅವಳನ್ನು ಕ್ರೂರವಾಗಿ ದಿಟ್ಟಿಸಿ, “ ಯು ವಿಲ್ ಪೇ ಫಾರ್ ದಿಸ್ “ ಎಂದು ಕಾಲಪ್ಪಳಿಸಿ, ತಟ್ಟೆಯನ್ನು ಊಟದ ಸಮೇತ ಎಂಜಲು ತಟ್ಟೆಗಳ ಸಿಂಕಿಗೆ ಹಾಕಿ ಕೆಫೆಟೇರಿಯಾದಿಂದಲೇ ಹೊರನಡೆದ. ಆಮೇಲೆ ಎದುರು ಸಿಕ್ಕರೂ ಇವರಿಬ್ಬರನ್ನು ಮಾತನಾಡಿಸುವ ಗೋಜಿಗೇ ಹೋಗಲಿಲ್ಲ ಹಾಗೂ ನಿಕೃಷ್ಟವಾಗೆಂಬಂತೆ ನೋಡುತ್ತಿದ್ದ. ಇವರೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ಆರಾಮಾಗಿದ್ದರು.
ಕೆಲಸ ಜಾಸ್ತಿಯಿದೆಯೆಂದು ಬೆಳಿಗ್ಗೆ  ಬೇಗ ಆಫೀಸಿಗೆ ಬಂದ ಉಲ್ಲಾಸಾಳಿಗೆ  ಸಾರಾ ಬಂದು ತಮ್ಮ ಕ್ಯೂಬಿಕಲ್ಲಿಗೆ ಬರುವಂತೆ ಕರೆದಾಗ ಆಶ್ಚರ್ಯವಾಯಿತು. ಸಾರಾ ವಯಸ್ಸಿನಲ್ಲಿ ಹಿರಿಯರು, ಬೆಳಿಗ್ಗೆ ಏಳು ಗಂಟೆಗೆಲ್ಲಾ ಬಂದು ಮೂರು ಗಂಟೆಗೆ ಹೊರಟುಬಿಡುತ್ತಿದ್ದರು, ಸಾಕಷ್ಟು ಜವಾಬ್ದಾರಿಯುತ ಕೆಲಸಗಾರ್ತಿ. ಉಲ್ಲಾಸಾ ಬಂದೊಡನೆ ಸುತ್ತ ಕಣ್ಣಾಡಿಸಿದವರು ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಅವಳ ಕೈಯನ್ನು ಒಮ್ಮೆ ಒತ್ತಿ “ ನೋಡು ಉಲ್ಲಾಸಾ, ನಿನ್ನೆ ಬೆಳಗ್ಗೆ ವಿನೋದ್ ಸಿಸ್ಟಮ್ಮನ್ನು ಯಾವುದೋ ಫೈಲಿಗೋಸ್ಕರ ಹುಡುಕುತ್ತಿದ್ದಾಗ ಸಿಕ್ಕ ವಿಡಿಯೋವಿದು, ನಿನಗೆ ಹೇಗೆ ಹೇಳೋದು ಅಂತ ಗೊತ್ತಾಗದೇ ಒದ್ದಾಡಿದೆ, ಟೀಮ್ ಮೆಂಬರ್ಸ್ ಎಲ್ಲರಿಗೂ ಶೇರ್ ಮಾಡಿದ್ದಾನೆ, ಹೇಳದೇ ಇದ್ದರೆ ತಪ್ಪೆನಿಸಿ ಕರೆದೆ “ ಎಂದವರು ವಿಡಿಯೋ ಓಪನ್ ತೋರಿಸಿದರು. ಎರಡು ಜೊತೆ ಕಾಲುಗಳ ಚಲನೆಯ ವಿಡಿಯೋ ಅದಾಗಿತ್ತು, ಉಲ್ಲಾಸಾಳಿಗೆ ಅದೇನೆಂದು ಅರ್ಥವಾಗಲೇ ಸ್ವಲ್ಪ ಸಮಯ ಹಿಡಿಯಿತು. ಸಾರಾಳ ಮುಖ ನೋಡಿ, “ ಥೂ  ಅಸಹ್ಯ, ಅವನ ಕರ್ಮ, ನನಗೇಕೆ ತೋರಿಸಿದ್ರಿ ಸಾರಾ “ ಎಂದಳು. ಅವಳ ಮುಖವನ್ನೇ ನೋಡುತ್ತಿದ್ದವರು ವಿಡಿಯೋದ ಟೈಟಲ್ ಬಾರ್ ತೋರಿಸಿದರು. ವಿಡಿಯೋದ ಹೆಸರು ಕಪ್ಪು ಬಣ್ಣದಲ್ಲಿ ರಾರಾಜಿಸುತ್ತಿತ್ತು, ವಿನೋದುಲ್ಲಾಸಾ.
ಉಲ್ಲಾಸಾಳ ಮುಖ ವಿವರ್ಣಗೊಂಡಿತು. ಕದಲದೇ ಸುಮ್ಮನೆ ಕುಳಿತವಳು, ಸೀಟಿನ ಕಡೆ ಧಾವಿಸಿ ಬ್ಯಾಗನ್ನೆತ್ತಿಕೊಂಡು ಆಫೀಸಿನಿಂದ ಹೊರಗೋಡಿ ಬಿಟ್ಟಳು. ಆಟೋದಲ್ಲಿ ಕೂತವಳು ಅದ್ಹೇಗೆ ಮನೆ ಸೇರಿದಳೋ ಗೊತ್ತಿಲ್ಲ.
ಮನೆ ಸೇರಿದವಳೇ ಸೋಫಾದ ಕೈಗೆ ಬೆನ್ನು ಆನಿಸಿಇಡೀ ದೇಹವನ್ನು ಮುದುಡಿಸಿ ಬೆಕ್ಕಿನ ಮರಿಯಂತೆ ಕುಳಿತಳು, ಎಂದೂ ಇಂತಹದ್ದನ್ನು ನೋಡದಿದ್ದವಳ ಮನಸ್ಸು ತೀವ್ರ ಆಘಾತಕ್ಕೊಳಗಾಗಿತ್ತು ,ಅವಳ ಮೈಯಂತೆ ಮನಸ್ಸೂ ಕಂಪಿಸುತ್ತಿತ್ತು.  ಅಳುಅರೆ ಪ್ರಜ್ಞೆ, ಪಪ್ಪ-ಅಮ್ಮನ ನೆನಪು ಎಲ್ಲದರ ಮಧ್ಯೆ ತೇಲುತ್ತಾ,ಮುಳುಗುತ್ತಾ ಅತ್ತಳು. ನಂತರ ಸ್ನಾನ ಮಾಡಿ ಮನಸ್ಸನ್ನು ತಹಬಂದಿಗೆ ತಂದುಕೊಳ್ಳುವ ಪ್ರಯತ್ನ ಮಾಡುತ್ತಾ ದೇವರೆದುರು ಕೂತು ಒಂದಿಷ್ಟು ಹೊತ್ತು ಧ್ಯಾನ ಮಾಡಿದಳು. ಎಷ್ಟೋ ಸಮಾಧಾನವೆನಿಸಿತು.
ಯಾವ ಕಾಲ್ ಬಂದರೂ ರಿಸೀವ್ ಮಾಡಿರಲಿಲ್ಲ, ಸೆಲ್ ಎತ್ತಿ ನೋಡಿದರೆ ಇಪ್ಪತ್ತೈದು ತಪ್ಪಿದ ಕರೆಗಳಿದ್ದವು, ಆಫೀಸಿನದ್ದು ಮತ್ತೆ ಸೆಬಾಸ್ಟಿಯನ್ನಿದ್ದು. ಆಫೀಸಿಗೆ ಹೇಳಲೂ ಇಲ್ಲವೆಂಬುದು ಆವಾಗಷ್ಟೇ ಅರಿವಿಗೆ ಬಂದು ತಲೆ ಮೇಲಿದ್ದ ಕೆಲಸಗಳೆಲ್ಲಾ ನೆನಪಿಗೆ ಬಂದವು. ಸೆಬಾಸ್ಟಿಯನ್ನಿಗೆ ಕರೆ ಮಾಡಿದಳು. ಅವನು ಎತ್ತಿದ್ದ ಕೂಡಲೇ “ ಏನಮ್ಮಾ ಆಯ್ತು? “ ಎಂದ, ಅವನ ಕರೆಯಲ್ಲಿದ್ದ ಕಾಳಜಿ, ಪ್ರೀತಿ, ವಿಶ್ವಾಸಕ್ಕೆ ಮತ್ತೆ ಅಳು ಉಕ್ಕಿ ಬಂತು. ಅವನಿಗೋ ಆ ಅಳು ಕೇಳುತ್ತಿದ್ದಂತೆ ಎದೆ ಹಿಂಡಿದಂತಾಯ್ತು, “ ಅಳಬೇಡಮ್ಮ, ಸಾರಾ ಹೇಳಿದರು, ಆ....ಮಗನನ್ನು ಸುಮ್ಮನೆ ಬಿಡಲ್ಲ, ನಿನ್ನಂತಹ ಹುಡುಗಿಗೆ ನೋಯಿಸಿದನಲ್ಲ, ಅದರ ಫಲ ಅನುಭವಿಸುತ್ತಾನೆ ಅವನಿವತ್ತು, ಏನು ತಿಳಿದುಕೊಂಡಿದ್ದಾನೆ ನನ್ನ, ನನಗೂ ಸಾಕಷ್ಟು ಕಾಂಟಕ್ಟ್ಸ್ಗಳಿವೆ “ ಎಂದು ಅಕ್ರೋಶದಿಂದ ನುಡಿದವನೇ ಫೋನಿಟ್ಟ. ಯಾವತ್ತೂ ಹಸುವಿನಂತೆ ಸಾಧುವಾಗಿದ್ದ ಸೆಬಾಸ್ಟಿಯನ್ನಿಗೆ ಇಷ್ಟು ಸಿಟ್ಟು ಬರಬಹುದೆಂಬ ಕಲ್ಪನೆ ಇರಲಿಲ್ಲ ಉಲ್ಲಾಸಾಳಿಗೆ. ಅವನೇನು ಮಾಡಬಹುದೆಂಬ ಆಲೋಚನೆಯಿಂದಲೇ ನಡುಗಿದವಳು ಅವನಿಗೆ ಕರೆ ಮಾಡಿದಳು, ಅವನು ಕರೆ ಕತ್ತರಿಸುತ್ತಿದ್ದನೇ ಹೊರತು ಎತ್ತುತ್ತಿರಲಿಲ್ಲ, ಎಂಟು ಹತ್ತು ಸಾರಿ ಮಾಡಿದವನು ಕೊನೆಗೊಮ್ಮೆ ಕರೆಯನ್ನು ರಿಸೀವ್ ಮಾಡಿದ, ಕೂಡಲೇ ಉಲ್ಲಾಸಾ “ ಸೆಬಿ, ಇದು ಆವೇಶದಿಂದ ಮಾಡುವ ಕೆಲಸವಲ್ಲ, ನಾವಿಷ್ಟೂ ವರ್ಷ ಗಳಿಸಿದ್ದ ವಿದ್ಯೆ, ಕೆಲಸ, ಗೌರವ ಎಲ್ಲವನ್ನೂ ಕ್ಷಣಕಾಲದ ಸಿಟ್ಟಿಗೋಸ್ಕರ ಹಾಳುಗೆಡುವುದು ಬೇಡ. ಸಧ್ಯಕ್ಕೆ ಸುಮ್ಮನಿರು “ ಎಂದು ಅರ್ಧ ಬೇಡಿಕೆ, ಅರ್ಧ ಅಧಿಕಾರಯುತವಾಗಿ ಹೇಳಿದಳು. “ಸರಿ, ಇನ್ಮೇಲೆ ನೀನೀ ವಿಷಯಕ್ಕೆ ಅಳಬಾರದು, ಯಾವುದೋ ಹೊಲಸು ಪ್ರಾಣಿಗೋಸ್ಕರ ನೋಯಬಾರದು“ ಅಂದ.
ಮನೆಯಿಂದ ಆಫೀಸ್ ನೆಟ್ವರ್ಕ್ ಕನೆಕ್ಟ್ ಮಾಡಿ ತನಗೆ ಹುಶಾರಿಲ್ಲವೆಂದೂ ಎರಡು ದಿನದ ರಜೆ ತೆಗೆದುಕೊಳ್ಳುವುದಾಗಿ  ಮೇಲ್ ಮಾಡಿದಳು. ಆ ಎರಡು ದಿನಗಳಲ್ಲಿ ಪಪ್ಪ ಅಮ್ಮನ ಬಳಿ, ಸೆಬಾಸ್ಟಿಯನ್ ಬಳಿಯೂ ನಾರ್ಮಲ್ ಆಗೇ ಮಾತನಾಡಿದಳು.  ಮೂರನೇ ದಿನ ಆಫೀಸಿಗೆ ಹೊರಟಾಗ ಮೊದಲಿನ ಉಲ್ಲಾಸಾಳೇ ಆಗಿದ್ದಳು. ಆಫೀಸು ಮುಟ್ಟುತ್ತಿದ್ದಂತೆ ವಿನೋದ್ ಟೀಮ್ ಎದುರಾಯ್ತು, ನೋಡಿಯೂ ನೋಡದವಳಂತೆ ಕ್ಯಾಬಿನ್ಗೆ ಹೋಗಿ ಕುಳಿತಳು, ಸಾರಾ ಮಾತನಾಡಲು ಬಂದಾಗ ಮುಕ್ಕಾಲು ಗಂಟೆಗೂ ಜಾಸ್ತಿ ಮಾತನಾಡಿದಳು. ವಿನೋದ್ ಬಗ್ಗೆ ಸಾಕಷ್ಟು ಒಡಕು ಸುದ್ದಿಗಳು ಹೊರಬಿದ್ದಿರುವುದಾಗಿಯೂ ಕ್ಲೈಂಟಿಗಾಗಿ ಅವನನ್ನು ಉಳಿಸಿಕೊಂಡಿರುವುದಾಗಿಯೂ ವಿಷಯ ತಿಳಿದುಬಂತು. ಹೆಚ್ಚಾರ್ ವಿಶಾಲ್ ಇವಳನ್ನು ಕರೆಸಿ, ವಿನೋದ್ ಹತ್ತಿರ ಮಾತನಾಡಿದ್ದಾಗಿಯೂ ಅವನು ತನ್ನ ಗರ್ಲ್ ಫ್ರೆಂಡ್ ಹೆಸರೂ ಉಲ್ಲಾಸಾ ಎಂತಲೂ, ತಾನೊಬ್ಬ ಕ್ರಿಯೇಟಿವ್ ಪರ್ಸನ್, ಅವಳಿಗೋಸ್ಕರ ಪರ್ಸನಲ್ ಟೈಮಿನಲ್ಲಿ ಮಾಡಿದ ಚಿಕ್ಕ ಅನಿಮೇಶನ್ ಎಂದೂ ಹೇಳಿಕೊಂಡಿದ್ದ. ಅಲ್ಲದೇ, ಅಫೀಸಿನಲ್ಲಿ ಶೇರ್ ಹೇಗಾಯ್ತು ಎಂದು ತಿಳಿಯದು, ಅದರ ಬಗೆಗೆ ವಿಷಾದವಿದೆಯೆಂಬಂತೆ ನಾಟಕವಾಡಿದ್ದ. ಅವರಿಗೆ ಪರಿಸ್ಥಿತಿ ಸಂಪೂರ್ಣ ಅರಿವಿದ್ದರೂ “ ಸಾರಿ ಉಲ್ಲಾಸಾ, ಈಚೆಗಷ್ಟೇ ನಮ್ಮ ಅತೀ ದೊಡ್ಡ ಕ್ಲೈಂಟ್ ಅಲೆಕ್ಸ್ ಅವಶ್ಯಕತೆಗನುಸಾರವಾಗಿ ಮತ್ತು ಅವರೇ ಇಂಟರ್ವ್ಯೂ ಮಾಡಿ ಅಪಾಂಯ್ಟ್ ಮಾಡಿಕೊಂಡ ಒಳ್ಳೆ ಕ್ಯಾಂಡಿಡೇಟ್. ನಿನಗೇ ಗೊತ್ತಿರಬೇಕು, ಒಬ್ಬ ಕ್ಯಾಂಡಿಡೇಟ್ ಪಡೆಯಲು ನಾವು ಹಾಕುವ ಪ್ರಯತ್ನಗಳು ಹಾಗೂ ಭರಿಸುವ ಖರ್ಚುಗಳು, ವಿಕಾಂಟ್ ಲೂಸ್ ಹಿಮ್” ಎಂದು ಅಸಹಾಯಕತೆ ತೋಡಿಕೊಂಡಿದ್ದರು. ಉಲ್ಲಾಸಾ ಯಾವುದಕ್ಕೂ ಮಾತನಾಡದೇ ತಲೆಯಾಡಿಸಿ ಹೊರಗೆದ್ದು ಬಂದಿದ್ದಳು.  ವಿನೋದ್ ಇವಳನ್ನು ನೋಡದವನಂತೆ ಓಡಾಡುತ್ತಿದ್ದರೂ, ಅವನ ಟೀಮ್ ಮೆಂಬರ್ಸ್ ಮಾತ್ರ ಇವಳದೇ ತಪ್ಪು ಎಂಬಂತೆ ವಿಚಿತ್ರವಾಗಿ ನೋಡುತ್ತಿದ್ದರು.
ದಿನಗಳುರುಳಿದವು ಯಾರ ಅಪ್ಪಣೆಗೂ ಕಾಯದೇ, ಯಾರ ಹಂಗಿಗೂ ಬೀಳದೇ. ಆ ದಿನ ಅಲೆಕ್ಸ್ ಹಾಗೂ ಸೀನಿಯರ್ಸಗಳ ಮೀಟಿಂಗ್ ನಡೆದಿತ್ತು, ಟೀಮ್ ಲೀಡ್ಗಳೆಲ್ಲರೂ ನೆರೆದಿದ್ದರು. ಅಲೆಕ್ಸ್ ಕಾನೆಫರೆನ್ಸ್ ಕಾಲ್ ಮಾಡಿ ಪ್ರಾಜೆಕ್ಟ್ ಈಗಾಗಲೇ ಸಾಕಷ್ಟು ತಡವಾಗಿದೆಯೆಂದೂ, ಯಾರೂ ತನ್ನ ಪ್ರಶ್ನೆಗಳಿಗೆ, ಹೊಸ ಅವಶ್ಯಕತೆಗಳಿಗೆ ಸರಿಯಾಗಿ ರೆಸ್ಪಾನ್ಸ್ ಕೊಡುತ್ತಿಲ್ಲವೆಂದು ಹಾರಾಡುತ್ತಿದ್ದ. ಟೀಮಿನ ಮ್ಯಾನೇಜರ್ ಏನು ಮಾತನಾಡಿದರೂ ಕೇಳುವ ಸ್ಥಿತಿಯಲ್ಲಿ ಅವನಿರಲಿಲ್ಲ. ಹೆಚ್ಚು ಹಣ ಕೊಟ್ಟು ಅಪಾಂಯ್ಟ್ ಮಾಡಿಕೊಂಡ ವಿನೋದ್ ಬಗ್ಗೆಯೂ ಕಿಡಿಕಾರಿದ, “ ಹಿ ಈಸ್ ನಾಟ್ ವರ್ತ್ ಫಾರ್ ಇಟ್ “ ಎಂದೂಬಿಟ್ಟ. ಅದಾದ ಮೇಲೆ ಮತ್ತಷ್ಟು ಅವಶ್ಯಕತೆಗಳು, ಡೆಡ್ಲೈನ್ ಬಗ್ಗೆ ವಾರ್ನ್ ಮಾಡಿದ. ತಲೆಕೆಟ್ಟಿದ್ದ ಮ್ಯಾನೇಜರ್ ಆ ಪೂರ್ತಿ ಸಿಟ್ಟನ್ನು ವಿನೋದ್ ಮೇಲೆ ತೆಗೆದು ಮೀಟಿಂಗಿನ ಪೂರ್ತಿ ವಿವರಗಳು, ಬಾಕಿ ಇರುವ ಕೆಲಸಗಳ ಪಟ್ಟಿ, ಅವನ್ನು ಮುಗಿಸುವ ದಿನ ಎಲ್ಲವನ್ನೂ ತನಗೂ, ಅಲೆಕ್ಸಿಗೂ ಇಂದು ಎಷ್ಟೇ ಹೊತ್ತಾದರೂ ಕಳಿಸಿಯೇ ಹೊರಡಬೇಕು ಎಂದು ಹೊರನಡೆದರು.  ಇವೆಲ್ಲಾ ಮುಗಿಯುವಾಗಲೇ ಘಂಟೆ ಒಂಭತ್ತೂವರೆಯಾಗಿತ್ತು. ಎಲ್ಲರೂ ಹೊರಟರೆ, ವಿನೋದ್ ಪಿಸಿ ಎದುರು ಕುಳಿತು ವರ್ಕ್ ಮಾಡಲು ಶುರು ಹಚ್ಚಿಕೊಂಡ.
ಉಲ್ಲಾಸಾ ಮೀಟಿಂಗ್ ಮುಗಿಸಿ ಹೊರಟವಳು ಮತ್ತೆ ವಾಪಾಸು ಬಂದು ತನ್ನ ಕ್ಯಾಬಿನಿನ್ನಲ್ಲೇ ಕುಳಿತಳು. ಸುಮಾರು ಒಂದೂಕಾಲು ಘಂಟೆಯಾಗಿರಬೇಕು. ಟೆನ್ಷನ್ನಿನಲ್ಲಿ ಏನೂ ಮಾಡಲಾಗದೇ ಒದ್ದಾಡುತ್ತಿದ್ದ ವಿನೋದ್ ಸಿಗರೇಟ್ ಸೇದಬೇಕೆನಿಸಿ ಎದ್ದು ಕೆಫೆಟೇರಿಯಾದ ಸ್ಮೋಕ್ ಜೋನ್ ಕಡೆ ನಡೆದ. ಅವನು ಆ ಕಡೆ ಹೋಗುತ್ತಿದ್ದಂತೆ ಕ್ಯಾಬಿನ್ನಿಂದ ಹೊರಬಿದ್ದ ಉಲ್ಲಾಸಾ, ಸಾರಾ ಕೊಟ್ಟಿದ್ದ ಪಾಸ್ವರ್ಡಿನಿಂದ ವಿನೋದ್ ಪಿಸಿ ಅನ್ಲಾಕ್ ಮಾಡಿ ಅವನು ಅಲೆಕ್ಸಿಗೆ ಅರೆ ಬರೆ ಡ್ರಾಫ್ಟ್ ಮಾಡಿಟ್ಟ ಮೇಲ್ ಅನ್ನು ಓಪನ್ ಮಾಡಿದಳು. ಇಂಗ್ಲೀಷಿನಲ್ಲಿ ತನಗೆ ಗೊತ್ತಿರುವ ಬೈಗುಳಗಳನ್ನು ಆ ಮೇಲಿನಲ್ಲಿ ಎಲ್ಲೆಲ್ಲಿ ಬೇಕೋ ಅಲ್ಲಿ ತುಂಬಿಸಿದಳು. ಅದು ಮ್ಯಾನೇಜರ್ರಿಗೂ ಕೂಡಾ ಕಾಪಿ ಆಗಿದೆಯೆಂದು ಖಾತರಿಪಡಿಸಿಕೊಂಡಳು. ಸೆಂಡ್ ಮಾಡುವ ಬಟನ್ ಮೇಲೆ ಕ್ಲಿಕ್ ಮಾಡುವ ಮೊದಲು ಸೆಬಾಸ್ಟಿಯನ್ನಿಗೆ ಕರೆ ಮಾಡಿ “ ಸೆಬಿ, ನಾನಿದನ್ನ ಮಾಡುತ್ತಿರುವುದಕ್ಕೆ ನಾ ಸತ್ತ ಮೇಲೆ ನರಕಕ್ಕೆ ಹೋದರೂ ಪರವಾಗಿಲ್ಲ, ಆದರೆ ಬದುಕಿರುವವರೆಗೆ ಬೇರ್ಯಾರೂ  ನನ್ನಂತೆ ನರಕದಲ್ಲಿ ನರಳುವುದು ಬೇಡ” ಎಂದವಳು ಅವನುತ್ತರ ಕೇಳಿ ನಕ್ಕು ಕರೆ ಕತ್ತರಿಸಿದಳು. ಸೆಂಡ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತೆ ಲಾಕ್ ಮಾಡಿ ಹೊರಟವಳ ಮುಖದಲ್ಲಿ ಸಂತೃಪ್ತಿಯಿತ್ತು.  

Friday, November 20, 2015

ಅಮ್ಮ

ತಂತಿಯ ಮೇಲೆ ಒಣಗಿಸಿದ ಗುಲಾಬಿ ಸೀರೆ
ಮತ್ತದರ ರವಕೆ ಅತ್ತಿತ್ತ ನೋಡಿ, ಹಾರಿ ಹುಡುಕುತಿದೆ,
ಇಸ್ತ್ರಿಯಾಗಿ ಮಡೆಸಿಕೊಂಡು ಕಪಾಟ ಸೇರಲು.
ಬಸಳೆ ಚಪ್ಪರ ಸ್ವಲ್ಪ ಜರುಗಿದೆ, ಎಲ್ಲಿಗೆ ಹೋದಳು
ಎಂದು ನೋಡಲು ತಲೆಯ ವಾಲಿಸಿರಬೇಕು,
ಅಷ್ಟರಲ್ಲೇ ಉಳುಕಿರಬೇಕು ಕತ್ತು!
ಬಾವಿಗಿಳಿಬಿಟ್ಟ  ಕೊಡಪಾನದಿಂದ
ಅಳುವ ಸದ್ದು, ಅಮ್ಮಾ, ಬಾಮ್ಮ
ನನ್ನ ಎತ್ತು, ಈ ಹಗ್ಗಣ್ಣ ನನ್ನ
ಕೈ ಬಿಡುತ್ತಾನೆ, ಎಲ್ಲಿದ್ದಿ?
ಮಾಡಿ ಮೇಲೆ ಇಡೀ ದಿನ ಕಾದು
ಬಳಲಿ ಬೆಂಡಾದ ಸೆಂಡಿಗೆ, ಹಪ್ಪಳಗಳು
ತವಕದಿ ಕಾದಿವೆ ಡಬ್ಬ ಸೇರಲು.
ರಾಜು ನಾಯಿ, ಚಾಮಿ ಬೆಕ್ಕಿನ
ಗೋಳಂತೂ ಆಕಾಶಕ್ಕೆ ಮುಟ್ಟಿದೆ.
ತೆಂಗಿನ ಮರವೂ ಸ್ವಲ್ಪ ಕೆಳಕ್ಕೆ
ಬಾಗಿ ಮನೆಯೊಳಗೆ ಇಣುಕಿ ಹಾಕುತ್ತಿದೆ.
ಕನಕಾಂಬರವೂ ಜಂಭ ಬಿಟ್ಟು ಕೇಳುತ್ತಿದೆ
ಗೊರಟೆಯಲ್ಲಿ, ಎಲ್ಲಿ ಹೋದಳು ಈ ಮಹಾತಾಯಿ!
ಚಪ್ಪರದವರೆ ಮತ್ತು ಮನಿ ಪ್ಲಾಂಟಿನ ಚರ್ಚೆ,
ಅಷ್ಟರಲ್ಲಿ  ಹಮ್ಮು ಬಿಮ್ಮಿನ ಸುಗಂಧಿಯೂ ತಲೆ ಹಾಕಿತು.
ವೀರನ ಹಾಗೆ ನಿಂತ ಕರವೀರಕ್ಕೂ ಇಂದು ಹೆದರಿಕೆ,
ಸದಾ ನಗುವ ಸದಾಪುಷ್ಪವೂ, ಪಕ್ಕದ
ಶಂಖಪುಷ್ಪಗಳೆರಡೂ ಮುಖ ಬಾಡಿಸಿ ನಿಂತಿವೆ.
ಸಂಜೆ ಮಲ್ಲಿಗೆ ನಗುವೂ ಮಂಕಾಗಿದೆ ಇಂದು.
ಕರೆದಾಗೊಮ್ಮೆ ಎಲೆಯುದುರಿಸುವ
ಕರಿಬೇವು ಸುಮ್ಮಗಾಯ್ತು ಈಗ.
ಯಾರಿಗೂ ತಿಳಿಯುತ್ತಿಲ್ಲ ಅಮ್ಮ ಎಲ್ಲಿದ್ದಾಳೆಂದು,
ಎಂದು ಬರುವಳೆಂದು.
ಬೆಳಗ್ಗಿನ ರಂಗೋಲಿ ಸಾಕಾಯ್ತು, ಬೇರೆ ಹಾಕು
ಎಂದಿತು ಮನೆ ಎದುರು ಮೈ ಚೆಲ್ಲಿದ ಅಂಗಳ,
ಕುಂದಗಳ ಮಧ್ಯೆ ಬಂಧಿಯಾದ
ಗೇಟು ಮಹಾಶಯನಿಗೆ ಒಳ ಹೋಗುವಾಸೆ,
ಮುರಕಲ್ಲ ಹುದುಗಿಸಿಕೊಂಡು ಕೆಂಪು
ಮುಖ ಹೊತ್ತ ಪಾಗರಕ್ಕೂ
ಇದೀಗ ಇರುಸು ಮುರುಸು,
ಅಮ್ಮನ ಮೈ ಸ್ಪರ್ಶವಿಲ್ಲವೆಂದು.
ಇಸಿಚೇರು ರಾಯನಿಗೆ ಕೂತಲ್ಲೇ ಜೋಂಪು
ಎಚ್ಚರಿಸುವವರಿಲ್ಲದೆ.
ಇಷ್ಟೆಲ್ಲಾ ನಡೆದರೂ ಒಳಗಿದ್ದ ಅಮ್ಮನಿಗೆ
ಕೇಳದಲ್ಲ, ನೋವೆಂದು ಕುಳಿತವಳು
ಅಲ್ಲೇ ಮಲಗಿದಳಲ್ಲ
ಮತ್ತೆಂದೂ ನಡೆಯದ ಹಾಗೆ
ಹೊರಗೆ ಎಲ್ಲರ ಗಲಾಟೆಗೂ
ಅದಾರು ಉತ್ತರಿಸುವವರು, ಮೈದಡವವರು????