Monday, June 27, 2022

Secret life of our pets

 ಎರಡು ಸಾವಿರ ಅಡಿ ಎತ್ತರದಿಂದ ತನ್ನ ಸಾಕುತಂದೆಯೊಡನೆ ಪಾರಾಗ್ಲೈಡಿಂಗ್ ಮಾಡೋ ನಾಯಿ, ಹದಿನೈದು ಬಗೆ ಬಗೆಯ ಸ್ಟೆಪ್ ಹಾಕಿ ಕುಣಿಯೋ ಗಿಳಿ, ಬಾಸ್ಕೆಟ್ ಬಾಲ್ ಆಡೋ ಮೊಲ, ಟೋಕನ್ ಎಕ್ಸ್ ಚೇಂಜ್ ಮಾಡಿಕೊಂಡು ಊಟ ತೆಗೆದುಕೊಳ್ಳೋ. ಅಣ್ಣ ತಂಗಿ ಬೂದು ಗಿಳಿ ಜೋಡಿ, ಕಾರು ಓಡಿಸೋ ಇಲಿಗಳು, ಫ್ರಾಕ್ಚರ್ ಮಾಡಿಕೊಂಡು ಕುಂಟುವ ಸಾಕುವ ತಂದೆಗೆ ಲೋನ್ಲಿ ಫೀಲ್ ಆಗಬಾರದೆಂದು ತಾನೂ ಸುಮ್ಮನೆ ಸುಮ್ಮನೆ ಕುಂಟೋ ನಾಯಿ, ಅಲೆಕ್ಸಾದ ಶಾಪಿಂಗ್ ಲಿಸ್ಟಿಗೆ ತನಗೆ ಬೇಕಾದ ಸ್ಟ್ರಾಬೆರ್ರಿ ಹಣ್ಣು ಸೇರಿಸೋ ಕಳ್ಳ ಗಿಳಿ, ಫುಟ್ಬಾಲ್ ಮ್ಯಾಚ್ ಆಡೋ ಮೀನುಗಳು...

ಎಂಥ, ಮಕ್ಕಳ ಸಿನಿಮಾ ಕತೆ ಅಂದುಕೊಂಡಿರಾ? ಅಲ್ಲ, ಸಾಕುಪ್ರಾಣಿಗಳು ಏನೆಲ್ಲಾ ಮಾಡಬಲ್ಲವು, ನಾವಿಲ್ಲದಾಗ ಏನೆಲ್ಲಾ ಮಾಡ್ತಾವೆ, ನಮ್ಮನ್ನು ಅದೆಷ್ಟು ಅರ್ಥ ಮಾಡಿಕೊಂಡಿರ್ತಾವೆ, ಅದಕ್ಕೆಷ್ಟು ಸಹಾನುಭೂತಿ ಇರುತ್ತದೆ, ಅವುಗಳ ಬುದ್ಧಿಮಟ್ಟ, ಕಲಿಕೆಯ ಉತ್ಸಾಹ, ಚಾಕಚಕ್ಯತೆಗಳ ಬಗ್ಗೆ ಇರುವ ' secret life of our pets' ಡಾಕ್ಯುಮೆಂಟರಿಯಲ್ಲಿ ಬರುವ ಪಾತ್ರಗಳಿವು.
ಸಾಮಾನ್ಯವಾಗಿ ಸುತ್ತಮುತ್ತಲಿನ ಪ್ರಾಣಿ, ಪಕ್ಷಿ, ಹುಳ ಹುಪ್ಪಡಿಗಳ ಬಗ್ಗೆ ಮಕ್ಕಳಿಗೆ ಆಸ್ಥೆ, ಪ್ರೀತಿ ಇದ್ದೇ ಇರುತ್ತದೆ. ದೊಡ್ಡವರಾಗುತ್ತಿದ್ದಂತೆ ಅದನ್ನು ನೋಡುವ ಕಣ್ಣು , ಖುಷಿಪಡುವ ಮನಸ್ಸು ಕೊನೆಗೆ ಅವುಗಳ ಬಗ್ಗೆ ಸಹನೆಯೂ ಮಾಯವಾಗಿಬಿಡುತ್ತದೆ. ತೇಜಸ್ವಿ ಪುಸ್ತಕಗಳು ಮತ್ತು ಅವರು ಪರಿಚಯಿಸಿದ ಪ್ರಾಣಿ ಪ್ರಪಂಚ ನನ್ನ ಕಣ್ಣು, ಮನಸ್ಸು ಮತ್ತು ಸಹನೆಯನ್ನು ಇನ್ನೂ ಇರಗೊಟ್ಟಿದೆ. ನಮ್ಮ ಸಣ್ಣ ಬದುಕನ್ನು ಕೌತುಕಮಯ, ಅರ್ಥಪೂರ್ಣ ಮತ್ತು ಸುಂದರಗೊಳಿಸುವ ಎಲ್ಲಾ ಜೀವಜಾಲವೂ ಅದ್ಭುತವೇ. ಬೇರೆ ದೃಷ್ಟಿಕೋನ ಕಲಿಸಿದ ತೇಜಸ್ವಿಗೆ ಶರಣು!
ನಮ್ಮೊಂದಿಗೇ ಬದುಕುವ ಈ ಸಹಜೀವಿಗಳ ಲೋಕದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಡಾಕ್ಯುಮೆಂಟರಿ ಚೆಂದಕ್ಕೆ ತೋರಿಸಿಕೊಟ್ಟಿದೆ. ನೆಟ್ ಫ್ಲಿಕ್ಸಿನಲ್ಲಿದೆ, ಪ್ರಾಣಿ ಪ್ರಿಯರು ತಪ್ಪದೇ ನೋಡಿ.
May be an image of text that says 'Secret Life of Our Pets'
Prathima Keshav Prabhu, Raghu Apara and 5 others

Thursday, July 8, 2021

ಹೀಗೆ ಕಳೆಯುತ್ತದೆ ಕಾಲ





ಒಬ್ಬೊಬ್ಬರೆ ಮರೆಯಾಗುವಾಗ ಮತ್ತೆ ನೆನಪಾದ ನನ್ನದೇ ಸಾಲುಗಳು. ಹಾಗೆ ನೋಡ ಹೋದರೆ ಸದಾ ಡಿನೇಯಲ್ ಮೋಡ್ ಅಲ್ಲೇ ಬದುಕುವವಳು ನಾನು. ಮತ್ತೆಂದಾದರೂ ಆ ವ್ಯಕ್ತಿ ಸಿಗಬಹುದು ಎಂಬ ಭ್ರಮೆಯಲ್ಲಿ ಕಾಲ ಸವೆಸುವವಳು.
ಹೀಗೆ ಕಳೆಯುತ್ತದೆ ಕಾಲ
ಸಾಗಂತ್ಯ ಚಿಂದಿ ಚೂರಿನ ನೆನಹುಗಳಾಗಿ
ಪ್ರೀತಿಯ ಜೀವಗಳು ಭಾವಕೋಶಗಳಾಗಿ
ಕಲಿತ ವಿದ್ಯೆಯೂ, ಓದಿದ ಸಾಲುಗಳೂ
ನೋಡಿದ ಚಿತ್ರಗಳೂ, ಕೇಳಿದ ಹಾಡುಗಳು
ಕಂಡ ಮುನ್ನೂರ ಅರವತ್ತು ಕೋಟಿ ಅಪರಿಚಿತ, ಚಿರ ಪರಿಚಿತ ಮುಖಗಳೂ
ಸುತ್ತಿದ ಹಾದಿ ಬೀದಿಗಳು ಕೇವಲ ಮೆದುಳಿನ ಗೆರೆಗಳಾಗಿ.
ನಿನ್ನಿನ ಅರಮನೆಗಳು ದಾರಂದದ ಅಸ್ಥಿಪಂಜರಗಳಾಗಿವೆಯಲ್ಲ
ಓಣಿಗಳು, ಬಾವಿಗಳು, ಕೆರೆಗಳೂ ನೀರು ಬಿದ್ದ
ಜಲವರ್ಣ ಚಿತ್ರಗಳಂತೆ ಮಾಸಿ ಹೋದವಲ್ಲ.
ನಿನ್ನೆ ಅವೆಲ್ಲವೂ ಇದ್ದಿದ್ದು ನಿಜವೇ, ಅಲ್ಲ ಅದು
ಕೈಗಂಟಿದ ಚಿಟ್ಟೆಯ ರೆಕ್ಕೆಯ ಪುಡಿ ಬಣ್ಣಗಳಷ್ಟೇ.
ಚಿತ್ರದ ಬಿಂಬವಷ್ಟೇ ದಕ್ಕಿದ್ದು ಕಣ್ಣಿಗೆ.
ಹೀಗೆ ಕಳೆಯುತ್ತದೆ ಕಾಲ.
ಆಗಾಗ ಮಿಂಚುವ ನೆನಹುಗಳೊಂದಿಗೆ
ಬಿಸಿ ಉಸಿರಿನ ಜೊತೆಗೊಂದಿಷ್ಟು ಕಣ್ಣೀರ ತರ್ಪಣ,
ನಿನ್ನೆಗಳ ಆತಂಕವಿಲ್ಲವಿಂದು. ಕಳೆದದ್ದು ಕಳೆದಾಯ್ತು
ಕಳೆಯಲು ಇನ್ನೇನ್ನೂ ಉಳಿದಿಲ್ಲವಲ್ಲವಿಲ್ಲಿ
ಕಳೆ ಕಳೆದು ಮನಸ್ಸು ಕೂಡಿಸಿ ಹಾಕಿತಲ್ಲವೇ
ಲಕ್ಷ, ಸಾವಿರ, ಕೋಟಿ ವರ್ಣಗಳ ಬಿಂಬಗಳ
ಹೀಗೆ ಕಳೆಯುತ್ತದೆ ಕಾಲ...
ಬಣ್ಣಗಳಲ್ಲಿ ಮುಳುಗಿ ಹೋಲಿಯಾಡುತ್ತಾ
ಕೂತು ಬಿಂಬಗಳ ಜೋಡಿಸಿ ಹೊಲೆದು
ಅದಕ್ಕೊಂದಿಷ್ಟು ಚೆಂದ ಚೆಂದದ ಕಸೂತಿ ಸೇರಿಸಿ
ಸಂಭ್ರಮಿಸಿದರೆ ಆಯ್ತಲ್ಲವೇ ಜೀವಕ್ಕೊಂದು ಅಂಗಿ

ಹೀಗೆ ಕಳೆಯಲಾರದೆ ಕಾಲ? 

ಕಾವನ್ ಎಂಬ‍ ಏಕಾಂಗಿಯ ಕಥನ


pc:internet

 


ಕಾವನ್ ಎಂಬ ಈ ಚೆಂದದ ಕಣ್ಣುಗಳ, ಸುರ ಸುಂದರಾಂಗನನ್ನು ೧೯೮೫ರಲ್ಲಿ ಶ್ರೀಲಂಕಾ ಸರಕಾರ ಪಾಕಿಸ್ತಾನದ ಆಗಿನ ಪ್ರಧಾನಿ ಜಿಯಾ ಉಲ್ ಹಕ್ ಅವರಿಗೆ ಉಡುಗೊರೆಯ ರೂಪದಲ್ಲಿ ಕೊಟ್ಟಿತ್ತು. ಇಸ್ಲಾಮಾಬಾದಿನ ಮೃಗಾಲಯ ಒಂದರಲ್ಲಿ ಮೂವತ್ತೆರಡು ವರ್ಷಗಳ ಕಾಲ ಬಂಧಿಯಾಗಿ ಕಾಲ ಕಳೆದ ಈತ ಬರಬರುತ್ತಾ ಮಾನಸಿಕವಾಗಿ ಕುಗ್ಗಲಾರಂಭಿಸಿದ. ಅವನ ಸಂಗಾತಿ ಸಹೇಲಿ ಕಾಲಿನ ಸೋಂಕು ರೋಗದಿಂದ ಸತ್ತು ಹೋದ ಮೇಲೆ, ಸಿಟ್ಟು, ಮಾನಸಿಕ ಉದ್ವೇಗಕ್ಕೊಳಗಾಗಿ ನಿಂತಲ್ಲೇ ಜೋಲಿಯಾಡಲಾರಂಭಿಸಿದ. ಹತ್ತಿರ ಹೋದ ಮೃಗಾಲಯದ ಕೆಲಸಗಾರರ ಮೇಲೆ ಮಣ್ಣು, ನೀರು ಅಥವಾ ಸೊಂಡಿಲಿಗೆ ಸಿಕ್ಕಿದ್ದನ್ನು ತೆಗೆದು ಎಸೆಯುತ್ತಲೂ ಇದ್ದ. ಆ ಸಿಬ್ಬಂದಿಯೋ, ಬರೇ ಕಬ್ಬನ್ನೇ ಕೊಟ್ಟು ಕೊಟ್ಟು, ಅಷ್ಟೂ ವರ್ಷಗಳಲ್ಲಿ ಐದೂವರೆ ಟನ್ ತೂಕ ಬೆಳೆಸಿಟ್ಟಿದ್ದರು. ಕಾಲುಗುರುಗಳೂ ಕೂಡಾ ಸೋಂಕಿನ ಲಕ್ಷಣಗಳನ್ನೂ ತೋರಿಸುತ್ತಿದ್ದವು. ಹಸಿರಿನ ಲವಲೇಶವೂ ಇಲ್ಲದ ಪರಿಸರದಲ್ಲಿ ಸರಪಣಿ ಕಟ್ಟಿ, ಕೆಲವೊಮ್ಮೆ ಅವನನ್ನು ಶಾಂತಗೊಳಿಸಲು ಮದ್ಯವನ್ನೂ ಕೊಡಲಾಗುತ್ತಿತ್ತು. ೨೦೧೫ರಿಂದ ಸುಮಾರು ಐದು ವರ್ಷಗಳ ಕಾಲ ಸಾಕಷ್ಟು ಜನರ ಸಾಹಸ, ಪ್ರಯತ್ನಗಳ ನಂತರ ಕಾವನ್ ಅನ್ನು ಅಲ್ಲಿಂದ ಮುಕ್ತಗೊಳಿಸುವ ಪ್ರಕ್ರಿಯೆ ನಡೆಯಿತು. ಪಾಕಿಸ್ತಾನದಿಂದ ಅವನನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಸರಿಯಾಗಿ ಅವನನ್ನು ನೋಡಿಕೊಳ್ಳದ್ದಕ್ಕೆ ಮೃಗಾಲಯಕ್ಕೆ ಛೀಮಾರಿ ಹಾಕಿದ್ದೂ ಅಲ್ಲದೇ, ಅದನ್ನು ಮುಚ್ಚಿಸಿಯೂ ಬಿಟ್ಟಿತು.

ಅಮೇರಿಕಾದ ಸುಪ್ರಸಿದ್ಧ, ‌ಪಾಪ್ ನ ದೇವತೆ ಎಂದೇ ಕರೆಯಿಸಿಕೊಳ್ಳುವ ಶೆರ್ ನಿಂದಾಗಿ ಇಸ್ಲಾಮಾಬಾದಿನ ಜೂನಿಂದ ಕಾಂಬೋಡಿಯಾದ ಅಭಯಾರಣ್ಯಕ್ಕೆ ಕಾವನನ್ನು ಸ್ಥಳಾಂತರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗುತ್ತದೆ. ಕೋವಿಡ್ ಮಧ್ಯೆಯೂ ಆಸ್ಟ್ರಿಯಾದ
four paws ಎಂಬ ಸಂಸ್ಥೆಗೆ ಸೇರಿದ ಸದಸ್ಯರು ಆ ಜವಾಬ್ದಾರಿಯನ್ನು ಹೊತ್ತುಕೊಂಡರು.
ಆ ಸಂಸ್ಥೆಯ ನಿರ್ದೇಶಕ ಅಮೀರ್ ಖಲೀಲ್ ಎಂಬ ವೆಟ್ ಕಾವನ್ನೊಂದಿಗೆ ಬೆಳೆಸಿಕೊಂಡ ಸಂಬಂಧ ನನ್ನೀ ಬರಹಕ್ಕೆ ಕಾರಣ. ತನ್ನ ಜೀವನವಿಡೀ ಯುದ್ಧ ನಿರತ ದೇಶಗಳಿಂದ, ಮೃಗಾಲಯಗಳಿಂದ ಬೇರೆ ಬೇರೆ ಪ್ರಾಣಿಗಳನ್ನು ರಕ್ಷಿಸುತ್ತಲೇ ಬರುತ್ತಿರುವ ಹಾಗೂ ಮರದ ದಿಮ್ಮಿಗಳನ್ನು ಎತ್ತಿ ಹಾಕುವ ಆನೆಗಳಿಗಾಗಿ ಹದಿನೇಳು ಸಾವಿರ ಹೆಕ್ಟೇರ್ ಜಾಗದಲ್ಲಿ ‘ಎಲೆಫಂಟ್ಸ್ ಲೇಕ್’ ಎಂಬ ಸಂರಕ್ಷಿತ ಹಾಗೂ ರಿಹ್ಯಾಬಿಲಿಟೇಶನ್ ಅನ್ನು ನಿರ್ಮಿಸಿದ ಹೆಗ್ಗಳಿಕೆ ಅಮೀರ್ ಅವರದ್ದು.
ಅಮೀರ್, ಕಾವನ್ ಅನ್ನು ಶಾಂತಗೊಳಿಸಲು, ಅವನಿಗೆ ಫ್ರಾಂಕ್ ಸಿನಾಟ್ರಾನ (ಅಮೇರಿಕನ್ ಹಾಡುಗಾರ) ‘ದಿ ಎಂಡ್ ಇಸ್ ನಿಯರ್’ ಹಾಡತೊಡಗುತ್ತಾರೆ. ತನ್ನ ದೊಡ್ಡ ಸ್ನೇಹಿತನಿಗೆ ಅತೀ ಕೆಟ್ಟ ಅಭಿರುಚಿಯಿದೆ, ಅದಕ್ಕೆ ನನ್ನ ಸ್ವರವನ್ನಿಷ್ಟಪಟ್ಟಿದ್ದಾನೆ ಎಂದು ಅಮೀರ್ ನಗುತ್ತಾ ಹೇಳುತ್ತಾರೆ. ಶೆರ್ ಅವನನ್ನು ನೋಡಲು ಬಂದಾಗಲೂ ಅವಳಿಂದ ಅದೇ ಹಾಡು ಹೇಳಿಸುತ್ತಾರೆ. ಅವನ ಡಯಟ್ ಅನ್ನು ಬದಲಾಯಿಸಿ ಅವನನ್ನು ಓಡಾಡಿಸಿ, ಓಡಾಡಿಸಿ ತೂಕವನ್ನಿಳಿಸುತ್ತಾರೆ. ಅದೇನೋ ಆನೆ! ಇವರೂ ಅದರೊಂದಿಗೆ ಓಡಾಡಬೇಕಲ್ಲ?! ಕಾಲಿನ ಉಗುರುಗಳನ್ನೂ ಪದೇ ಪದೇ ಸ್ವಚ್ಛಗೊಳಿಸುತ್ತಲೇ ಇರಬೇಕಾಗುತ್ತದೆ. ದಿನಕ್ಕೆರಡು ಸಲ, ನಾಲ್ಕು ಘಂಟೆ ಅವನೊಂದಿಗೆ ಕಳೆದು ಅವರಿಬ್ಬರ ಮಧ್ಯೆ ಬಾಂಧವ್ಯ ಹುಟ್ಟುತ್ತದೆ. ಹಾಡು ಕೇಳುತ್ತಾ ಕಾವನ್ ಕಣ್ಣೀರೂ ಹಾಕುತ್ತಾನೆ. ಅಮೀರ್ ಅನ್ನು ತನ್ನ ಸೊಂಡಿಲಿನಿಂದ ಅಪ್ಪಿಕೊಳ್ಳುತ್ತಾನೆ. ತಲೆ ಸವರುವಂತೆ ಅವರಿಗೆ ಅಂಟಿಕೊಳ್ಳುತ್ತಾನೆ. ಇಬ್ಬರೂ ಅಂಟಿಕೊಂಡು ಓಡಾಡುವ ವಿಡಿಯೋ ದೃಶ್ಯಗಳು ನೋಡಿದಾಗೆಲ್ಲಾ ಮನಸ್ಸು ತುಂಬಿ ಬರುತ್ತದೆ.
ಆತನ ನಂಬಿಕೆಯನ್ನು ಗಳಿಸಿದ ನಂತರ ಅವನನ್ನು ಮಾತನಾಡಿಸುತ್ತಾ, ತಿನ್ನಿಸುತ್ತಾ ಅವನಿಗೋಸ್ಕರ ತಯಾರಾದ ಒಂದು ದೊಡ್ಡ ಕಂಟೇನರ್ ಒಳಗೆ ಅವನನ್ನು ಸೇರಿಸಿ, ಅರಿವಳಿಕೆ ನೀಡಿ ಅದನ್ನು ಟ್ರಕ್ ಒಂದರ ಮೂಲಕ ಕಾರ್ಗೋ ವಿಮಾನಕ್ಕೆ ತಂದು ಸೇರಿಸುತ್ತಾರೆ. ಅದೊಂದು ‘ದೊಡ್ಡ, ಅತೀ ದೊಡ್ಡ’ ಸಾಧನೆ! ರಾಶಿಗಟ್ಟಲೆ ಕ್ಯಾಮೆರಾಗಳು, ಕಾನ್ ವೇ ಥರದಲ್ಲಿ ಕಾರುಗಳು ಆ ಟ್ರಕ್ಕನ್ನೇ ಹಿಂಬಾಲಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬರುತ್ತವೆ. ಆ ಕಂಟೆನರ್ ಅನ್ನು ವಿಮಾನಕ್ಕೆ ನುಗ್ಗಿಸುವಾಗ ಅವನು ಒಂದು ಚೂರು ಅಲ್ಲಾಡಿದರೂ ವಿಮಾನದ ಒಳಭಾಗಕ್ಕೆ ಪೆಟ್ಟಾಗುತ್ತದೆ. ವಿಮಾನದ ಸಿಬ್ಬಂದಿ, ಅಮೀರ್ ಅವರಿಗೆ ಕಾವನ್ ಗೆ ಆದೇಶ ಕೊಡುವಂತೆ ಹೇಳುತ್ತಾರೆ. ಅಮೀರ್ ಗೆ ತಬ್ಬಿಬ್ಬು, ಅವನೇನು ಮನುಷ್ಯನೇ, ಅಲ್ಲಾಡಬೇಡ, ಮಧ್ಯ ಕೂತುಕೋ ಅಂದರೆ ಕೇಳುವುದಕ್ಕೆ! ಅಂತೂ ಇಂತೂ ಕಾವನ್ನಿನ್ನದ್ದೋ, ಅಮೀರ್ ಅವರದ್ದೋ ಅಥವಾ ಆ ವಿಮಾನದ ಅದೃಷ್ಟಕ್ಕೋ ಅವನು ಅಲ್ಲಾಡದೇ ಸರಿಯಾಗಿ ಮಧ್ಯದಲ್ಲೇ ನಿಂತು ವಿಮಾನದ ಒಳಕ್ಕೆ ಕಂಟೇನರ್ ಅನ್ನು ನುಗ್ಗಿಸಲಾಗುತ್ತದೆ. ಅಷ್ಟೂ ಹೊತ್ತು ಕಾವನ್ ಆರೋಗ್ಯವಾಗಿದ್ದಾನೆ ಎಂದು ಕಂಟೇನರ್ ಒಳಗೆ ತಲೆ ಹಾಕಿ ಅವನ ಸೊಂಡಿಲನ್ನು ಮುಟ್ಟಿ ಮುಟ್ಟಿ ನೋಡುತ್ತಲೇ ಇರುತ್ತಾರೆ ಅಮೀರ್. ಅವನ ಮಿಸುಕಾಟ ನೋಡಿ ‘ಸಧ್ಯ ಅವನು ಬದುಕಿದ್ದಾನೆ’ ಅನ್ನುವ ಸಮಾಧಾನ.
ಅವನು ಕಾಂಬೋಡಿಯಾ ಮುಟ್ಟಿ ಅವನನ್ನು ಬೀಳ್ಕೊಡುವ ಸಮಯದಲ್ಲಿ ಒದ್ದಾಡಿ ಹೋಗುತ್ತಾರೆ. ಅವರಿಗೆ ವಿಚಿತ್ರ ತಳಮಳ, ಸಂಕಟ. ಅಮೀರ್ ಕಾವನ್ನೊಂದಿಗೆ ತನ್ನ ಭಾವನಾತ್ಮಕ ಬಾಂಧವ್ಯವನ್ನು ನೆನೆದು ಕಣ್ಣೀರು ಹಾಕುತ್ತಾ “ಅವನೊಟ್ಟಿಗೆ ನಾನು ಅಟ್ಯಾಚ್ ಮೆಂಟ್ ಬೆಳೆಸಿಕೊಂಡದ್ದು ನನ್ನ ತಪ್ಪು, ಆದರೆ ಅವನನ್ನು ಶಾಂತಗೊಳಿಸಲು ಬೇರೆ ಯಾವುದೇ ದಾರಿಯೂ ನಮಗಿರಲಿಲ್ಲ” ಎನ್ನುತ್ತಾರೆ. ಕಾವನ್ ಈಗ ಕಾಂಬೋಡಿಯಾದ ತನ್ನ ಮೂವತ್ತು ಎಕರೆಗಳ ಕಾಡು-ಮನೆಯಲ್ಲಿ ಆರಾಮಾಗಿ ಓಡಾಡಿಕೊಂಡು, ಹೊಸ ಸಂಗಾತಿಗಳನ್ನು ಅವಾಗವಾಗ ಮಾತನಾಡಿಸಿಕೊಂಡು, ಸೊಪ್ಪು, ಕಲ್ಲಂಗಡಿ, ಬಾಳೆಹಣ್ಣು, ಬಾಳೆದಿಂಡು, ಹಣ್ಣುಗಳ ಭೂರಿ ಆದರೆ ಸರಿಯಾದ ಆಹಾರ ಸೇವಿಸಿಕೊಂಡು ಖುಷಿಯಿಂದಿದ್ದಾನೆ. ಅವನ ಜೋಲಿಯಾಡುವಿಕೆ ಈವಾಗ ನಿಂತಿದೆ. ಅವನ ಈ ಬೆಳವಣಿಗೆ ಬಗ್ಗೆ ಅಮೀರ್ ಅವನು ಇನ್ನಷ್ಟು ಆರಾಮಾಗುತ್ತಾನೆ ಎಂದು ತುಂಬು ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಮಕ್ಕಳಿಗೆ ಇಂಥಹುದೇನನ್ನೋ ತೋರಿಸಿದಾಗ, ಓದಿ ಹೇಳಿದಾಗ, ಅವರು ದೊಡ್ಡವರಾದಾಗ ವೆಟ್ ಆಗಿಯೋ, ಕಾಡಿನ ಸಂರಕ್ಷಕರಾಗಿಯೋ ಅಥವಾ ಸಾಕಷ್ಟು ಹಣ ದುಡಿದಲ್ಲಿ ಒಂದಿಷ್ಟು ಇಂತಹ ಸಂಸ್ಥೆಗಳಿಗೆ ದಾನ ಮಾಡಿಯೋ, ಯಾವುದೂ ಅಲ್ಲದಿದ್ದಲ್ಲಿ ದಾರಿಯಲ್ಲಿ ಸಿಗುವ ನಾಯಿ, ಬೆಕ್ಕುಗಳಿಗೆ ಹಿಂಸೆ ಮಾಡದೇ ಇರಬಹುದು ಎಂಬುದು ನನ್ನಾಸೆ.

Thursday, November 5, 2020

ಪರುಷ ಮಣಿ


(ಹಿಂದೆ ಯಾವತ್ತೋ ಬರೆದಿದ್ದ ಕತೆ, ಸಂಕಥನದಲ್ಲಿ ಪ್ರಕಟವಾಗಿತ್ತು)

 

ಬಚ್ಚಲಿನ ಪಕ್ಕದ ಬಾಣಂತಿ ಕೋಣೆಯ ಜಗಲಿಯಲ್ಲಿ ಅಡಿಕೆ ಸುಲಿಯುತ್ತಾ ಮಗಳು ಸೀತೆಯೊಡನೆ ಹರಟುತ್ತಾ ಕುಳಿತ ಭಾಗೀರಥಿ ಏತಕ್ಕೋ ತಲೆಯೆತ್ತಿ ಕಾಲುಹಾದಿಯೆಡೆ ಕಣ್ಣು ಹಾಯಿಸಿದರೆ ಆಡಿಕೆ ಮರಗಳ ಹಿನ್ನೆಲೆಯಲ್ಲಿ ಅಸ್ಪಷ್ಟವಾಗಿ ಗಂಡನ ಆಕೃತಿ ಕಾಣಿಸಿತು. ಗಡಿಬಿಡಿಯಿಂದ "ಬಾಯಾರಿಕೆಗೆ ತಂದಿಡು ಮಗಳೇ, ಅಕೋ ಅಲ್ಲಿ ಅಪ್ಪಯ್ಯ ಬಂದ್ರು" ಎಂದರು. ಅಷ್ಟರವರೆಗೂ ತಾಯಿಯ ಸಾನಿಧ್ಯದಿಂದ ಬೆಳಗಿದ್ದ ಸೀತೆಯ ಮುಖ ಕಪ್ಪಿಟ್ಟು, ಅವಳು ಬರಿದೇ ತಲೆಯಾಡಿಸಿ ಉಟ್ಟ ಸೀರೆಗೆ ಕೈಯೊರೆಸುತ್ತಾ ಒಳಧಾವಿಸಿದಳು. ಗಣಪಯ್ಯ ಹತ್ತಿರವಾದಂತೆಲ್ಲಾ ಅವರ ನಡೆಯುವ ಶೈಲಿಯಿಂದಲೇ ಏನು ನಡೆದಿರಬಹುದೆಂಬ ಸೂಚನೆ ಭಾಗೀರಥಿಗಾಗಲೇ ಸಿಕ್ಕಿತ್ತು. ದಪ ದಪ ಹೆಜ್ಜೆ ಹಾಕುತ್ತಾ ಬಂದವರೇ ಜಗಲಿಯಂಚಿಗೆ ಕುಸಿದು ಕೂತು, ಕೈಲಿದ್ದ ಬೈರಾಸಿನಿಂದ ಮುಖವೊರೆಸಿ " ಏ ಹೆಣ್ಣೇ, ಈ ಸಾಡೇಸಾತ್ ಶನಿ ಈ ಜನ್ಮದಲ್ಲಿ ನಮ್ಮ ಬೆನ್ನು ಬಿಡುವುದಿಲ್ಲ ಕಾಣ್ತದೆ. ಎಂತ ಸಾಯುವುದು! ಎಂತ, ಸತ್ತಾಳಾ ಹೇಗೆ!? ಒಂದು ಬಾಯಾರಿಕೆಗೆ ತರಲು ಹೇಳೇ" ಎಂದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಿಗೂ ಕೇಳುವಂತೆ ತಮ್ಮ ದಪ್ಪ ಸ್ವರದಲ್ಲಿ ಬೊಬ್ಬಿರಿದರು. ಅದರಲ್ಲಿನ ತಿರಸ್ಕಾರ, ವ್ಯಂಗ್ಯ, ಅಸಹನೆ, ದ್ವೇಷಗಳು ಬಾಣಗಳಂತೆ ಒಂದರ ಹಿಂದೆ ಒಂದರಂತೆ ಹಾರಿ ಬಂದು ಭಾಗೀರಥಿಯ ಮನದಲ್ಲಿ ನೆಟ್ಟು ನೋಯಿಸತೊಡಗಿದವು. ಅಷ್ಟರಲ್ಲೇ ಮನೆಯಿಂದ ಬಂದ ಸೀತೆ, ಕೈಯಲ್ಲಿದ್ದ ಮಜ್ಜಿಗೆಯನ್ನು ಅಪ್ಪನ ಬಳಿಯಿಟ್ಟು ಒಂದು ಸಲವೂ ಅವರ ಕಡೆ ದೃಷ್ಟಿ ಹಾಯಿಸದೇ ತನ್ನ ಪಾಡಿಗೆ ತಾನು, ಸುಲಿಯುತ್ತಿದ್ದ ಅಡಕೆಯ ಬುಟ್ಟಿಯ ಹತ್ತಿರ ಕುಳಿತಳು.

ಅವಳನ್ನೇ ದುರುಗಟ್ಟಿ ನೋಡುತ್ತಿದ್ದ ಗಣಪಯ್ಯನ ಕೋಪ ನೆತ್ತಿಗೇರಿ ಅಲ್ಲೇ ಬಿದ್ದಿದ್ದ ಅಡಕೆ ಸೋಗೆಯನ್ನೆತ್ತಿಕೊಂಡು ಕೂತಿದ್ದವಳನ್ನು ಕೆಳಕ್ಕೆಳೆದು ಮನಸೋ ಇಚ್ಛೆ ಬಡಿದರು, ಬಿಡಿಸಲು ಬಂದ ಭಾಗೀರಥಿಗೂ ಒಂದಷ್ಟು ಬಡಿದು, ಅವಳನ್ನು ದೂಡಿ, ಅದೂ ಸಾಕಾಗದೆ ಸೋಗೆ ಬಿಸಾಡಿ, ಕೆಳಕ್ಕೆ ಬಿದ್ದ ಸೀತೆಯನ್ನು ಕಾಲಿನಿಂದ ಒದೆಯಲಾರಂಭಿಸಿದರು. ಅದರೊಂದಿಗೆ ಊರಿಡೀ ಕೇಳುವಂತೆ ಅಶ್ಲೀಲ ಬೈಗುಳಗಳ ಸುರಿಮಳೆ ಬೇರೆ.

ಅಲ್ಲಲ್ಲಿ ನಿಂತು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು ತೋಟದಾಳುಗಳು, ಮುಂದೆ ಬಂದು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಅಷ್ಟು ಹೊಡೆಸಿಕೊಂಡರೂ ಒಂಚೂರೂ ನರಳದೇ, ಅಳದೆ, ಪ್ರತಿಭಟಿಸದೇ ಸುಮ್ಮನಿದ್ದಳು ಸೀತೆ. ಹೋದ ಜನ್ಮದಲ್ಲಿ ಮಾಡಿದ್ದ ಪಾಪಕ್ಕೆ ಉಳಿದುಹೋದ ಕಂದಾಯ ಸಲ್ಲಿಸುವವಳಂತೆ ಮುದ್ದೆಯಾಗಿ ಬಿದ್ದಿದ್ದಳು. ಭಾಗೀರಥಿಗೆ ಒಡಲೆಲ್ಲಾ ಹತ್ತಿ ಉರಿದಂತಾಯ್ತು. ಇನ್ನೂ ಒದೆಯುತ್ತಾ, ಬೈಯುತ್ತಿದ್ದ ಗಂಡನನ್ನು, ಅವುಡುಗಚ್ಚಿ ಎಲ್ಲಿಲ್ಲದ ಶಕ್ತಿಯನ್ನು ತಂದುಕೊಂಡು ದೂಡಿಬಿಟ್ಟಳು. ಆಕೆ ದೂಡಿದ ರಭಸಕ್ಕೆ ಸಮತೋಲನ ಕಳೆದುಕೊಂಡರೂ ಬೀಳದಂತೆ ಸಾವರಿಸಿಕೊಂಡ ಗಣಪಯ್ಯ ನಿಬ್ಬೆರಗಾಗಿ ಅವಳನ್ನೇ ದಿಟ್ಟಿಸಿದರು. ಅವಳ ಮುಖದಲ್ಲಿ ಕಾಣುತ್ತಿದ್ದ ತಿರಸ್ಕಾರ, ಕೋಪ ಅವರನ್ನು ಒಂದರೆಗಳಿಗೆ ಹಿಮ್ಮೆಟಿಸಿತು. ಬೆರಗು ಕಳೆದಂತೆ, ಚೆಲ್ಲಾಡಿ ಹೋಗಿದ್ದ ಕೋಪ, ಅಹಂಕಾರ, ಶಕ್ತಿಯನ್ನು ಬಾಚಿ ಧರಿಸಿ ಮತ್ತೆ ಕ್ರೂರ ಕಣ್ಣುಗಳಿಂದ ನೋಡುತ್ತಾ ಬೈಯಲು ಬಾಯಿ ತೆಗೆದರು. ಆದರೆ ಸಾಕ್ಷಾತ್ ಕಾಳಿಯೇ ಅವತರಿಸಿದಂತಿದ್ದ ಭಾಗೀರಥಿ ಅದಕ್ಕೆ ಸೊಪ್ಪು ಹಾಕದೆ ಹೊಡೆಯಲೆಂದು ಎತ್ತಿದ್ದ ಅವರ ಕೈಯನ್ನು ಬಲವಾಗಿ ತಿರುಚಿಬಿಟ್ಟಳು, ಅಷ್ಟೇ ಅಲ್ಲದೆ ಮೊಣಕಾಲೆತ್ತಿ ಎಲ್ಲಿಗೆ ಒದೆಯಬೇಕೋ ಅಲ್ಲಿಗೆ ಒದ್ದೂ ಬಿಟ್ಟಳು. ಬಿದ್ದವನ ಬೆನ್ನಿಗೆ ಅಂಗಳದಲ್ಲಿ ಹಾಕಿದ್ದ ಕಲ್ಲು ಚಪ್ಪಡಿ ಬಲವಾಗಿಯೇ ಬಡಿಯಿತು. ಅಲ್ಲಿಗೆರಡು ದಶಕ ವಿರಾಜಮಾನವಾಗಿ ಮೆರೆದ ಗಣಪಯ್ಯನ ಕಿರೀಟ ನೆಲಕಚ್ಚಿತು. ನೋವು, ಹತಾಶೆ, ಅವಮಾನಗಳಿಂದ ಗಣಪಯ್ಯ ಕಿರುಚುತ್ತಿದ್ದರೆ, ಅಷ್ಟು ಹೊತ್ತು ಸುಮ್ಮನಿದ್ದ ಸೀತೆ, ಎದ್ದು ನಿಂತು ಕುಣಿಯುತ್ತಾ, ಚಪ್ಪಾಳೆ ತಟ್ಟುತ್ತಾ ವಿಕಾರವಾಗಿ ನಗಲಾರಂಭಿಸಿದಳು. ನೆಲದಲ್ಲಿ ಕುಸಿದು ಕೂತು ನೋವಿನಿಂದ ಒದ್ದಾಡುತ್ತಿದ್ದ ಗಂಡನನ್ನು ಉದ್ದೇಶಿಸಿ, " ಇನ್ನೊಂದು ಸಲ, ಇನ್ನೊಂದು ಸಲ ನನ್ನ ಮಗಳ ಮೇಲೆ ಕೈಯಿಟ್ಟರೆ ನೋಡು, ಆ ವೀರಭದ್ರನ ಆಣೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ, ಈ ಭಾಗೀರಥಿ ಮಗಳಿವಳು. ನಾನಿದ್ದೇನೆ ಅವಳ ರಕ್ಷಣೆಗೆ, ಆ ವೀರಭದ್ರನಿದ್ದಾನೆ. ತಿಳಿದುಕೋ, ನಿನ್ನ ಸಿಗಿದು ತೋರಣ ಕಟ್ಟಲಿಕ್ಕೂ ನಾನು ಸಿದ್ಧ!" ಎಂದವರೇ ಮಗಳ ಕೈ ಹಿಡಿದು ಒಳಗೆಳೆದುಕೊಂಡು ಹೋದರು. ಢವಗುಡುತ್ತಿದ್ದ ಎದೆ ಬಡಿತವನ್ನು ತಹಬಂದಿಗೆ ತರಲೆತ್ನಿಸುತ್ತಾ ಮಗಳ ಕೈಹಿಡಿದು ಮನೆಯೊಳಗೆ ನುಗ್ಗಿ ದಾರಂದ ಅಲ್ಲಾಡಿ ಹೋಗುವಷ್ಟು ಜೋರಾಗಿ ಬಾಗಿಲು ಹಾಕಿಕೊಂಡಳು. ಮತ್ತದೇ ಬಾಗಿಲಿಗೆ ಬೆನ್ನಾನಿಸಿ ಕುಸಿದು ಕೂತು ಅಳಲಾರಂಭಿಸಿದಳು, ಅವಳ ಕೈ ಹಿಡಿತದಲ್ಲೇ ಸಿಕ್ಕಿಕೊಂಡ ತನ್ನ ಕೈ ಬಿಡಿಸಿಕೊಳ್ಳಲಾಗದೆ ಇದ್ದ ಸೀತೆ ಕೂಡ ಅವಳೊಂದಿಗೆ ತಾರಾಡಿ ನೆಲಕ್ಕೆ ಬಿದ್ದಳು. ತಾಯ ಮಡಿಲಿಗೆ ತೆವಳಿ ಅಲ್ಲೇ ತಲೆಯಿಟ್ಟು ತಾಯ ಅಳುವಿನೊಂದಿಗೆ ತಾನೂ ದನಿ ಸೇರಿಸಿ ಅಳಲಾರಂಭಿಸಿದಳು. ತಾಯಿ, ಮಗಳ ಅಳು ಹಾಗೂ ಹೊರಗಿದ್ದ ಗಣಪಯ್ಯನ ಗೊಣಗಾಟ ಸೇರಿ ಆ ಮನೆಯ ಛಾವಣಿಯ ಮೇಲೆ ಹದ್ದಿನಂತೆ ಗಿರಕಿ ಹೊಡೆಯಲಾರಂಭಿಸಿತು. ನೋವಿನಿಂದ ನರಳುತ್ತಿದ್ದ ಗಣಪಯ್ಯನ ಉಸಾಬರಿ ಕೇಳಲು ಯಾವೊಬ್ಬ ಆಳೂ ಬರಲಿಲ್ಲ.

ತೋಟಕ್ಕೆ ಹರಡಿದ ಈ 'ಭಾಗೀರಥಿ ಮಹಾತ್ಮೆ' ಪ್ರಸಂಗ ವಿವಿಧ ರೆಕ್ಕೆ ಪುಕ್ಕಗಳೊಂದಿಗೆ ಬೇಗನೆ ಇಡೀ ಊರಿನಲ್ಲಿ ಹಾರತೊಡಗಿತು. ಕಂಡವರಿಗೆಲ್ಲಾ ವಿವಿಧ ವರ್ಣಗಳೊಂದಿಗೆ ಮನೋರಂಜನೆ ಒದಗಿಸಿದ ಈ ಪ್ರಸಂಗ ಗಣಪಯ್ಯನ ಆಪ್ತ ಮಿತ್ರ ಚಾಟು ಕಿವಿ ತಲುಪಿದೊಡನೆ ಆತ ಎದ್ದೆನೋ ಬಿದ್ದೇನೋ ಎಂಬAತೆ ಮಿತ್ರನ ರಕ್ಷಣೆಗೆ ಧಾವಿಸಿ ಅಲ್ಲಿ ಭಾಗೀರಥಿಯ ದರ್ಶನವಾದೊಡನೆ ಕಾಲಿಗೆ ಬುದ್ಧಿ ಹೇಳಿದ್ದೂ ಆಯಿತು. ಇದರಿಂದ ಮನೆಯಲ್ಲಿ ಭಾಗೀರಥಿ ಯಜಮಾನ್ತಿಯ ಪಟ್ಟಕ್ಕೇರಿದರೆ ಊರಿನ ಪತೀ ಪೀಡಿತ ಹೆಣ್ಣು ಮಕ್ಕಳಿಗೆ ನೂರಾನೆ ಬಲ ಬಂದಂತಾಯ್ತು.

ಭಾಗೀರಥಿ ಗಣಪಯ್ಯನ ಎರಡನೇ ಧರ್ಮಪತ್ನಿಯಾಗಿ ಕಾಲಿಟ್ಟಾಗಿನಿಂದ ಎಂದೂ ಹೊರಗೆ ಕಾಲಿಟ್ಟದ್ದೇ ಇಲ್ಲ, ಮನೆಯ ಹಿತ್ತಲು,ಅದಕ್ಕೆ ಅಂಟಿಕೊAಡAತೇ ಇದ್ದ ಪುಟ್ಟ ಕೆರೆ, ಕೊಟ್ಟಿಗೆ, ಬಚ್ಚಲುಮನೆ, ಅದರ ಪಕ್ಕದ ಹೊರಗಾದಾಗ ಕೂರುತ್ತಿದ್ದ ಬಾಣಂತಿ ಕೋಣೆ, ಅಂಗಳ, ಅನತಿ ದೂರದಲ್ಲಿದ್ದ ಬಾವಿ ಇವಿಷ್ಟೇ ಇವಳ ಜೀವನದ ಪರಿಧಿ. ತಂದೆ ತಾಯಿ, ಅಣ್ಣ, ತಮ್ಮ, ಅಕ್ಕ ಎಲ್ಲರೂ ಮೊದಮೊದಲ ಕೆಲದಿನಗಳಲ್ಲಿ ನೋಡಲು ಬಂದರಾದರೂ ಅಳಿಯ ದೇವರ ಅಸಹ್ಯ ನುಡಿಗಳು ಹಾಗೂ ಜಿಗುಪ್ಸೆ ಹುಟ್ಟಿಸುವ ವರ್ತನೆಗಳಿಗೆ ನೊಂದುಕೊಂಡು ಅದನ್ನೂ ನಿಲ್ಲಿಸಿದ್ದರು. ತವರಿನಿಂದಲೂ ದೂರವಾದ ಭಾಗೀರಥಿ, ವಿಕ್ಷಿಪ್ತ ಮನಸ್ಸಿನ ಗಣಪಯ್ಯನ ವಿಕೃತ ಕೃತ್ಯಗಳಿಗೆ ಬಲಿಪಶುವಾಗುತ್ತಲೇ ಹೋದಳು. ಮನೆ ಬಿಟ್ಟು ಎಲ್ಲೂ ಹೋಗುವಂತಿಲ್ಲ, ಯಾರನ್ನೂ ಮಾತನಾಡಿಸಲೂಬಾರದು.ಮನೆಯಲ್ಲಿ ಟಿವಿ, ರೇಡಿಯೋ, ಪೇಪರ್ಗಳ ಸುದ್ದಿ ಸುರಾಣವಿರಲಿಲ್ಲ, ಎಲ್ಲರೂ ಸಾಮಾನ್ಯವಾಗಿ ತೊಡುತ್ತಿದ್ದ ನೈಟಿಯನ್ನೂ ಹಾಕಲು ಬಿಡುತ್ತಿರಲಿಲ್ಲ. ಮದುವೆ, ಶಾಸ್ತ್ರಗಳು ಎಲ್ಲವನ್ನೂ ಮುಗಿಸಿ ತವರ ಬಿಟ್ಟು ಯಾವುದೇ ಸಂಭ್ರಮವಿಲ್ಲದೆ ಗಂಡನ ಮನೆ ಹೊಕ್ಕುತ್ತಿದ್ದಂತೆ ಓಡಿ ಬಂದು ಕಾಲ ತಬ್ಬಿದ್ದು ಗಣಪಯ್ಯನ ಮೊದಲನೇ ಹೆಂಡತಿ ಜಾನಕಿಯ ಒಂದೂವರೆ ವರ್ಷದ ಕೂಸು ಸೀತೆ. ದೈನ್ಯತೆಯ ಪುಟ್ಟ ರೂಪವಾಗಿದ್ದ ಅದನ್ನು ನೋಡಿದೊಡನೆ ಎತ್ತಿ ಬಾಚಿ ತಬ್ಬಿದ್ದಳು ಭಾಗೀರಥಿ. ಅಲ್ಲೇ ಕೂತು ಕುಟ್ಟಾಣಿಯಲ್ಲಿ ಎಲೆ ಅಡಿಕೆ ಕುಟ್ಟುತ್ತಿದ್ದ ಅತ್ತೆ ಎಂಬ ಮುದಿಜೀವ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು, ತನ್ನ ಕೆಲಸವಾಯಿತೆಂಬಂತೆ ಸೊಸೆ ಬಂದ ಎರಡೇ ತಿಂಗಳಲ್ಲಿ ಗೋಡೆ ಮೇಲಿನ ಪಟವಾಗಿತ್ತು. ತವರಲ್ಲಿ ಅಣ್ಣ, ಅಕ್ಕಂದಿರ ಮಕ್ಕಳನೊಡನಾಡಿ ಅವುಗಳ ಪ್ರೀತಿ ಸವಿದವಳಿಗೆ ಈ ಕಿಷ್ಕಿಂದೆಯಲ್ಲಿ ಅದೊಂದೇ ಸಂಜೀವಿನಿ. ಕೆಲಸ, ಮಗು, ದನ, ಕರುಗಳೊಂದಿಗೆ ಆರಾಮಾಗಿರುತ್ತಿದ್ದವಳಿಗೆ ಹೆದರಿಕೆ ಗಂಡನದ್ದೊಂದೇ, ಮನುಷ್ಯ ಹೀಗೂ ಇರಲು ಸಾಧ್ಯವೇ ಅನ್ನುವಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದ. ಅವನ ಒರಟುತನ, ವಿಕೃತ ಬಯಕೆಗಳು, ಆ ಚಿಕ್ಕ ಮಗುವಿನ ಮೇಲೆ ಅವನಿಗಿದ್ದ ಅಸಾಧ್ಯ ದ್ವೇಷ, ಊಹೆಗೂ ಮೀರಿದ ಸಣ್ಣತನ, ದುರಾಸೆ ಮತ್ತು ಹಪಾಹಪಿ ಆತನನ್ನು ಇಡೀ ಮನುಷ್ಯಕುಲದಿಂದ ದೂರವಿರಿಸಿತ್ತು. ಆಳು, ಕಾಳುಗಳು ಹೋಗಲಿ ತಾಯಿ ಕೂಡ ಸೊಲ್ಲೆತ್ತಿಲ್ಲ ಎನ್ನುವುದು ಭಾಗೀರಥಿಗೆ ಅಂದಾಜಾಗಿತ್ತು. ನಿಧಾನಕ್ಕೆ ಹೆಣ್ಣಾಳುಗಳು ಒಂದಿಬ್ಬರು ಕದ್ದುಮುಚ್ಚಿ ಮಾತನಾಡಲಾರಂಭಿಸಿದ್ದರು. ಮತ್ತೆ ಮನುಷ್ಯ ಪ್ರಪಂಚಕ್ಕೆ ವಾಪಸು ಬಂದ ಹಾಗಾಗಿತ್ತು ಅವಳಿಗೆ. ಅದೆಷ್ಟು ಯತ್ನಿಸಿದರೂ ಸೀತೆ ಬೇರೆ ಮಕ್ಕಳಂತೆ ಸಹಜವಾಗಿ ಬೆಳೆಯಲೇ ಇಲ್ಲ, ಗಣಪಯ್ಯ ಅವಳನ್ನೆಷ್ಟು ದ್ವೇಷಿಸುತ್ತಿದ್ದನೋ ಅದಕ್ಕಿಂತ ಸಾವಿರಪಟ್ಟು ಅವಳು ಅವಳವನನ್ನ ದ್ವೇಷಿಸುತ್ತಿದ್ದಳು. ಪುಟ್ಟ ಮಗುವಿಗಿದ್ದ ಹೆದರಿಕೆ ಆಕೆ ಬೆಳೆದಂತೆ ತಿರಸ್ಕಾರ ಮತ್ತು ದ್ವೇಷಕ್ಕೆ ತಿರುಗಿತ್ತು. ಮೌನದಿಂದಲೇ ಹಗೆ ತೀರಿಸುತ್ತಿದ್ದ ಆಕೆಯ ವರ್ತನೆ ಗಣಪ್ಪಯ್ಯನಿಗೆ ನುಂಗಲಾರದ ತುತ್ತಾಗಿತ್ತು. ಕಾರಣವಿರಲಿ, ಬಿಡಲಿ ತಾಯಿ ಮಗಳಿಬ್ಬರಿಗೂ ನಿತ್ಯ ಕೊಳಕು ಮಾತುಗಳ, ಬೈಗುಳಗಳ ಪೂಜೆ ತಪ್ಪಿದ್ದಲ್ಲ. ಆಳುಗಳಿಗೆ ಕೊಟ್ಟಂತೆ ವರ್ಷಕ್ಕೆರಡು ಸಲ ಇವರಿಗೂ ಬಟ್ಟೆ-ಬರೆ ತರುತ್ತಿದ್ದ. ತೋಟದಾಳುಗಳು ಕೆಲವರು ಬೇರೆ ಕಡೆ ಕೆಲಸ ಸಿಗುತ್ತಿದ್ದಂತೆ ಬಿಟ್ಟು ಹೋಗಿ ಬಿಡುತ್ತಿದ್ದರು. ಒಂದೆರಡು ಹಿರಿ ತಲೆಗಳು ಬೇರೆ ಗತಿಯಿಲ್ಲದೆ ಬರುತ್ತಿದ್ದದ್ದು. ಒಟ್ಟಿನಲ್ಲಿ ಈ ಸರ್ವಾಧಿಕಾರಿಯ ಆಳ್ವಿಕೆಯಲ್ಲಿ ನರಳಿದವರೆಷ್ಟೋ ಜನ. ಭಾಗೀರಥಿ ಅದೆಷ್ಟು ಸಲ ಗರ್ಭ ಧರಿಸಿದಳೋ ಅವಳಿಗೆ ಗೊತ್ತಿಲ್ಲ, ಅದು ಗೊತ್ತಾಗುತ್ತಿದ್ದಂತೆ ದೈಹಿಕವಾಗಿ ಹಿಂಸಿಸಿ, ಒದ್ದು ಪ್ರತೀಸಲ ಮೈಯಿಳಿಯುವಂತೆ ಮಾಡುತ್ತಿದ್ದ ಆ ಮೃಗ. ಸೀತೆಯನ್ನು ಅವಳು ಹಚ್ಚಿಕೊಳ್ಳುವುದಂತೂ ಅವನಿಗೆ ಸಹಿಸಲಾಗುತ್ತಿರಲಿಲ್ಲ. ಅವನಿಲ್ಲದ ಸಮಯದಲ್ಲಿ ತಾಯಿ ಮಗಳು ಒಂದಿಷ್ಟು ನಿಮಿಷಗಳನ್ನು ಸಂತೈಸಿಕೊಂಡೋ, ಏನಾದರೂ ವಿಷಯಗಳಿದ್ದರೆ ಹಂಚಿಕೊಂಡೋ, ಬಾಸುಂಡೆ ಬಿದ್ದ ಜಾಗಗಳಿಗೆ ಕೊಬ್ಬರಿಯೆಣ್ಣೆ ಹಚ್ಚಿಕೊಂಡೋ ಇರುತ್ತಿದ್ದರು. ಬಾಯಿ ಬಾರದ ಮೂಕಪಶುಗಳೂ ನೆಕ್ಕಿಕೊಂಡು ಸಮಾಧಾನ ಮಾಡಿಕೊಳ್ಳುತ್ತಲ್ಲವೇ.

ಅವಾಗಾವಾಗ ಚಾಟುವಿನ ಸವಾರಿ ಅಲ್ಲಿಗೆ ಚಿತ್ತೈಸುತ್ತಿತ್ತು. ಅವಾಗೆಲ್ಲ ಭಾಗೀರಥಿ ಕುರುಕುಲು ತಿಂಡಿಗಳನ್ನು ಮಾಡಿ ಕೊಟ್ಟಿಗೆಯ ಪಕ್ಕದ ಬಚ್ಚಲುಮನೆಯ ಮೂಲೆಯಲ್ಲಿ ನಡೆಯುತ್ತಿದ್ದ ಅವರಿಬ್ಬರ ಪಾನಕೂಟಕ್ಕೆ ಸರಬರಾಜು ಮಾಡಬೇಕಾಗುತ್ತಿತ್ತು, ಚಾಟುವಿನ ತಲೆ ಕಂಡರಾಗುತ್ತಿರಲಿಲ್ಲ ಅವಳಿಗೆ, ಹೆಂಡತಿ ಚಂದ್ರಿಯನ್ನು ಊರವರಿಗೆ ತಲೆಹಿಡಿದು ಬದುಕುತ್ತಿದ್ದ ಆ ಮನುಷ್ಯ, ಸಹಿಸಿ ಸಹಿಸಿ ಸಾಕಾಗಿ ಚಂದ್ರಿ ಊರುಬಿಟ್ಟು ಹೋದಳು ಎಂದು ಮನೆಗೆಲಸದ ಅಪ್ಪಿ ಹೇಳಿದ್ದಳು. ಭಾಗೀರಥಿಯನ್ನು ಹಸಿದ ಕಣ್ಣುಗಳಿಂದ ನೋಡುತ್ತಾ ಅನಾವಶ್ಯಕವಾಗಿ ಹಲ್ಲು ಕಿರಿಯುತ್ತಾ "ಏನತ್ತಿಗೇ, ಆರಾಮ? " ಎನ್ನುತ್ತಿದ್ದ. ಸೀತೆಯನ್ನು ಅಪ್ಪಿ ತಪ್ಪಿಯೂ ಅವನೆದುರಿಗೆ ಬರಲು ಬಿಡುತ್ತಿರಲಿಲ್ಲ ಭಾಗೀರಥಿ. ಅದೊಂದು ದಿನ ಮಿಡಿ ಸೌತೆಯನ್ನು ತರಲು ಬೆಟ್ಟು ಗದ್ದೆಗೆ ಹೋಗಿದ್ದ ಸೀತೆಯನ್ನು ಅಕಸ್ಮಾತ್ತಾಗಿ ಕಿಟಕಿಯಿಂದ ನೋಡಿಬಿಟ್ಟ ಚಾಟು, ಪಾನಗೋಷ್ಠಿಗೆ ಉಪ್ಪಿನಕಾಯಿ ಬೇಕೆಂದು ಕೊಡಲು ಬಂದಿದ್ದ ಭಾಗೀರಥಿ ಆತ ಜೊಲ್ಲು ಸುರಿಸುವುದನ್ನು ನೋಡಿ ಕಂಗಾಲಾಗಿಬಿಟ್ಟಳು. ಅವಳು ಹೆದರಿದಂತೆಯೇ ಮರುದಿನವೇ ಮತ್ತೊಮ್ಮೆ "ಗಣಪಣ್ಣ ಒಳ್ಳೆ ಸೇಂದಿ ಸಿಕ್ತು, ಅದಕ್ಕೆ ಮತ್ತೆ ಬಂದೆ", ಅಂದವನೇ ಬಚ್ಚಲಿನ ಮೂಲೆ ಹಿಡಿದು ಕೂತುಬಿಟ್ಟ. ಅದೇನು ತಲೆತುಂಬಿದನೋ ಗಣಪಯ್ಯ, "ಆ ಶನಿ ಹತ್ತಿರ ತಿಂಡಿ ಕೊಟ್ಟು ಕಳಿಸೇ" ಎಂದು ಬೊಬ್ಬೆ ಹೊಡೆದ. ಎಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ, ಭಾಗೀರಥಿ ತಾನೇ ತಿಂಡಿ, ಉಪ್ಪಿನಕಾಯಿ ಎಲ್ಲವನ್ನೂ ತೆಗೆದುಕೊಂಡು ತಾನೇ ಹೋಗಿದ್ದಳು, "ಅವಳು ಒಳಗಿಲ್ಲ" ಅಂದವಳೇ ಚಾಟುವಿನ ಗ್ರಹಚಾರ ಬಿಡಿಸುವವಳಂತೆ ಕ್ರೂರವಾಗಿ ದಿಟ್ಟಿಸಿದ್ದಳು. ಅದಾದ ನಂತರ ಚಾಟು ಪದೇ ಪದೇ ಎಡತಾಕುವುದು ಹೆಚ್ಚಾಗಿತ್ತು, ಆದರೆ ಅವಳು ಸೊಪ್ಪು ಹಾಕುತ್ತಿರಲಿಲ್ಲ.

ಇದಾದ ಮೇಲೆ ಸೀತೆಯ ಮದುವೆ ಮಾಡಬೇಕೆಂಬ ಹುಳ ಭಾಗೀರಥಿಯನ್ನು ಹೊಕ್ಕಿತ್ತು, ನಿಧಾನಕ್ಕೆ, ಗಣಪಯ್ಯನ ಮೂಡು ನೋಡಿಕೊಂಡು ಪ್ರಸ್ತಾಪ ಮಾಡಿದ್ದಳು. "ಅದಕ್ಕಿಷ್ಟು ದುಡ್ಡು ದಂಡ, ಇಲ್ಲೇ ಬಿದ್ದರಲಿ ದರಿದ್ರ " ಅಂದೆಲ್ಲಾ ಬೈದರೂ, ಹುಡುಗ ಹುಡುಕುವ ಪ್ರಹಸನ ಶುರುವಾಯ್ತು. ಗಣಪಯ್ಯನ ಮಗಳೆಂದೇ ಸಂಬಂಧಗಳು ಬರುತ್ತಿರಲಿಲ್ಲವಾದರೆ ಬಂದರೂ ಮಾತುಕತೆಯ ಹಂತದಲ್ಲೇ ಮುರಿದು ಬೀಳುತಿತ್ತು. ಭಾಗೀರಥಿ ಏನೆಲ್ಲಾ ಪಾಡುಪಟ್ಟರೂ ಗಣಪಯ್ಯನ 'ಕೆಲಸಕ್ಕೆ ಬಿಟ್ಟಿ ಜನ ಸಿಗುತ್ತೆ ನಿಮಗೆ, ಎರಡು ಹೊತ್ತು ಊಟ ಹಾಕಿದ್ರಾಯ್ತು, ವಧುದಕ್ಷಿಣೆ ಕೊಡಿ, ಖರ್ಚೆಲ್ಲಾ ನೀವೇ ನೋಡಿಕೊಳ್ಳಿ' ಎಂಬೆಲ್ಲಾ ವಾದಗಳಿಗೆ ಮಾತುಕತೆಗೆಂದು ಮನೆ ಬಾಗಿಲಿಗೆ ಬಂದವರೂ ಎದ್ದು ಹೋಗುತ್ತಿದ್ದರು. ಒಟ್ಟಾರೆ ಶನಿಯನ್ನು ಹೊರದೂಡುವಾಗಲಾದರೂ ಒಂದಿಷ್ಟು ದುಡ್ಡು ಮಾಡಿಕೊಳ್ಳಬಹುದು ಎಂಬ ಅವನಾಸೆ ಬರ ಬರುತ್ತಾ ನಿರಾಸೆಯಾದಂತೆ ಸೀತೆಯ ಪಾಲಿಗೆ ಜೀವನ ಇನ್ನಷ್ಟು ದುಸ್ತರವಾಗಲಾರಂಭಿಸಿತು. ಅದೆಷ್ಟು ಸಲ ಸೀರೆಯನ್ನು ಜಂತಿಗೆ ಬಿಗಿದಳೋ ಅವಳಿಗೇ ಗೊತ್ತಿಲ್ಲ, ಭಾಗೀರಥಿಯ ಕಣ್ಗಾವಲಿನಲ್ಲಿ ಅದಾಗಲೇ ಇಲ್ಲ. ಎಲ್ಲದರ ಮಧ್ಯೆಯೂ ಭಾಗೀರಥಿ ಮಗಳ ಒಳ್ಳೆ ಭವಿಷ್ಯದ ಕನಸ ನೇಯುವುದನ್ನು, ಅದನ್ನು ಮಗಳಿಗೆ ಹೇಳಿ ಅವಳಲ್ಲಿ ಕನಸು ಹುಟ್ಟು ಹಾಕುವುದನ್ನು ಬಿಡಲಿಲ್ಲ.

ಗಣಪಾಸುರ ಗರ್ವಭಂಗದ ಮರುದಿನದಿಂದ ಮನೆಯಲ್ಲಿ ಭಾಗೀರಥಿಯ ಆಳ್ವಿಕೆ ಶುರುವಾಯಿತು. ಗಣಪಯ್ಯ ಚಾವಡಿಯ ಒಂದು ಮೂಲೆಯಲ್ಲಿ ಬಿದ್ದಿರುತ್ತಿದ್ದ. ಊಟ, ತಿಂಡಿ ಅಲ್ಲಿಗೇ ಸರಬರಾಜಾಗುತ್ತಿತ್ತು. ಅಪ್ಪಿ ಹೇಳುವಂತೆ ಸಾಕ್ಷಾತ್ ಕಾಳಿಯೇ ಭಾಗೀರಥಿಯಲ್ಲಿ ನೆಲೆಸಿದಂತಾಯ್ತು. ಹೊಸ ಅಮ್ಮನನ್ನು ಮಾತನಾಡಿಸಲು ಆಳು-ಕಾಳುಗಳು ಬರುತ್ತಿದ್ದರು. ಅಸರಿಗೆ, ಅವರ ಊಟಕ್ಕೆ ಮತ್ತೊಂದು ಮಗದೊಂದಕ್ಕೆ ಎಂಬಂತೆ ಎಲ್ಲದರಲ್ಲೂ ಯಜಮಾನಿಕೆ ವಹಿಸಿ ಮಾತನಾಡುತ್ತಿದ್ದ ಭಾಗೀರಥಿ ಮತ್ತಷ್ಟು ಗಟ್ಟಿಯಾಗುತ್ತಾ, ಮಾಗುತ್ತಾ ತನ್ನ ಒಳ್ಳೆಯ ಆದರೆ ಸ್ಪಷ್ಟವಾದ ಮಾತುಗಳಿಂದ ಎಲ್ಲರ ವಿಶ್ವಾಸ ಗೆಲ್ಲುತ್ತಲೇ ಹೋದರೆ ಗಣಪಯ್ಯ ಮೂಲೆ ಹಿಡಿದ ಜೇಡದಂತಾದ. ಬಿದ್ದ ಪೆಟ್ಟು, ದೇಹಕ್ಕಷ್ಟೇ ಅಲ್ಲದೇ ಮನಸ್ಸಿಗೂ ಪರಿಣಾಮ ಬೀರಿತ್ತು. ಅಷ್ಟೆಲ್ಲಾ ಆದರೂ ದೇಹಕ್ಕಾದ ಪೆಟ್ಟು ಮಾಯುವವರೆಗೂ ತಿಂಗಳಾನುಗಟ್ಟಲೆ ಭಾಗೀರಥಿ ಮಾಡಿದ ಸೇವೆ ಅವನನ್ನು ಪೆಟ್ಟಿಗಿಂತ ಜಾಸ್ತಿ ನೋಯಿಸಿತ್ತು. ಪಂಡಿತರು ಕೊಟ್ಟ ಎಣ್ಣೆಯನ್ನು ಒಂದಿನಿತೂ ಬೇಸರಿಸದೆ ದಿನಕ್ಕೆರಡು ಸಲ ತಪ್ಪದೇ ಹಚ್ಚುತ್ತಿದ್ದಳು, ಅವನನ್ನು ನಿಧಾನಕ್ಕೆ ಏಳಿಸಿ ಹೊರಜಗಲಿಗೆ ತಂದು ಅಡಕೆ ಹಾಳೆಯನ್ನಿಟ್ಟು ಮಲ ಮೂತ್ರಗಳನ್ನೂ ಶುದ್ಧಿಗೊಳಿಸುತ್ತಿದ್ದಳು. ಸದಾ ಶೂನ್ಯದಲ್ಲಿ ದೃಷ್ಟಿ ಹಾಯಿಸಿ, ತನ್ನಷ್ಟಕ್ಕೆ ಸರಿ ತಪ್ಪುಗಳ ಬಗ್ಗೆ ಮಾತನಾಡುತ್ತಾ ಇಲ್ಲವೇ ಮಾಡಿದ ಅಷ್ಟೂ ವರ್ಷಗಳ ಪಾಪದ ಹೊರೆಯನ್ನು ಇಳಿಸುವಂತೆ ರಾಮನಾಮ ಹೇಳುತ್ತಾ ಕೂರುತ್ತಿದ್ದ. ಕೆಲವೊಮ್ಮೆ ತನ್ನ ತಂದೆ ತಾಯಿಯ ನೆನಪು ತೆಗೆದು, ಅವರ ಭಾವಚಿತ್ರಗಳನ್ನು ಕೈಲಿ ಹಿಡಿದು ಅಳುತ್ತಲೂ ಕೂರುತ್ತಿದ್ದ.

ಚಾಟುವಂತೂ ಈ ಕಡೆಗೆ ತಲೆ ಕೂಡಾ ಹಾಕುತ್ತಿರಲಿಲ್ಲ. ಸೀತೆಗೆ ಎಲ್ಲವೂ ಹೊಚ್ಚಹೊಸದು, ಎಲ್ಲಿ ಬೇಕೆಂದಲ್ಲಿ ಹೋಗಬಹುದಾದ ಸ್ವಾತಂತ್ರ್ಯ, ಜನರ ಮಾತುಗಳು, ನಗು, ಪ್ರೀತಿ ಎಲ್ಲವೂ ಜೀವನ ಪ್ರೀತಿಯನ್ನು ಹುಟ್ಟು ಹಾಕಿದ್ದವು. ಪಕ್ಕದ ಗದ್ದೆಯಂಚಿನವರೆಗೂ ನಡೆದುಹೋಗುತ್ತಿದ್ದಳು, ಗಂಟೆಗಟ್ಟಲೆ ನಿಂತು ಆಕಾಶ, ಹಕ್ಕಿಗಳನ್ನು ನೋಡುತ್ತಾ ನಿಲ್ಲುತ್ತಿದ್ದಳು. ಅಮ್ಮನ ಧೈರ್ಯ ಮಗಳಲ್ಲಿ ಹೊಸ ಲೋಕದ ಬಾಗಿಲನ್ನು ತೆರೆದಿತ್ತು. ದಿನಗಳೆದಂತೆ ಹಿಂದಣ ದಿನಗಳು ಅಸ್ಪಷ್ಟವಾಗುತ್ತಿದ್ದವು. ಅಮ್ಮನ ಯಜಮಾನಿಕೆಯಲ್ಲಿ ಗೇಣಿ ಲೆಕ್ಕ, ಅಡಕೆ ಮಾರಾಟ, ಆಳು-ಕಾಳುಗಳ ಸಂಬಳದ ಲೆಕ್ಕ, ವ್ಯವಹಾರ ಎಲ್ಲವನ್ನೂ ನಿಧಾನಕ್ಕೆ ಕಲಿಯುತ್ತಿದ್ದಳು. ಕಲಿತ ಅರ್ಧಂಬರ್ಧ ಶಾಲೆಯಿಂದ ಕಷ್ಟವಾದರೂ ಪಟ್ಟುಹಿಡಿದು ಎಲ್ಲವನ್ನೂ ಅರ್ಥ ಮಾಡಿಕೊಂಡಳು. ತಾಯಿ-ಮಗಳ ಜೀವನ ಒಂದು ಹಳಿಗೆ ಬಂದು ನಿಂತಿತ್ತು. ಗಣಪಯ್ಯನ ಕಡೆಗಿದ್ದ ಸೀತೆಯ ದ್ವೇಷ ಮಾತ್ರ ಕರಗಲೇ ಇಲ್ಲ.

ದಿನಗಳುರುಳಿ ಅದಾಗಲೇ ಎರಡು ವರ್ಷಗಳಾಗುತ್ತಾ ಬಂದಿತ್ತು, ಗಣಪಯ್ಯ ನಿಧಾನಕ್ಕೆ ಎದ್ದು ಬಾಗಿದ ಬೆನ್ನಿನೊಂದಿಗೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ, ಆಳುಗಳೊಂದಿಗೆ ಕೂತು ಅಡಿಕೆ ಸುಲಿಯುತ್ತಲೋ, ತೋಟದಲ್ಲಿ ಬಿದ್ದ ಅಡಿಕೆ, ಸೋಗೆ ಎತ್ತಿಕೊಂಡು ಬರುತ್ತಲೋ, ಕೊಟ್ಟಿಗೆ ಕೆಲಸ ಮಾಡುತ್ತಲೋ ಇರುತ್ತಿದ್ದ. ಭಾಗೀರಥಿಯೊಂದಿಗೆ ಅಲ್ಪಸಲ್ಪವಾದರೂ ಮಾತುಗಳಿತ್ತು, ಆದರೆ ಸೀತೆ ಮಾತು ಹೋಗಲಿ, ಅವನ ಮುಖವನ್ನೂ ನೋಡಲಿಷ್ಟಪಡುತ್ತಿರಲಿಲ್ಲ. ಅಪ್ಪಿ ಬರದಿದ್ದ ದಿನ, ಅಮ್ಮ ಹೊರಗಾದ ದಿನ ಅವನಿದ್ದಲ್ಲಿ ಹೋಗಿ ಅವನೆದುರು ತಟ್ಟೆಯನ್ನು ಕುಕ್ಕುತ್ತಿದ್ದಳೇ ಹೊರತು ಊಟಕ್ಕೆ ಬಾ ಎಂದೂ ಕರೆಯುತ್ತಿರಲಿಲ್ಲ. ಕಣ್ಣೆದಿರು ಕಾಣುತ್ತಿದ್ದ ಶಾಂತಿ, ಸಮಾಧಾನ, ನೆಮ್ಮದಿ, ಗೌರವದ ಬದುಕು ಗಣಪಯ್ಯನಂತ ಗಣಪಯ್ಯನಿಗೂ ಮೋಡಿ ಮಾಡಿತ್ತು. ಆಳುಗಳೂ ನಮ್ಮ ಧಣಿ ಬದಲಾದರಲ್ಲವೇ ಎಂದು ಮಾತನಾಡಿಕೊಳ್ಳುತ್ತಿದ್ದದ್ದು ಭಾಗೀರಥಿಯ ಕಿವಿಗೆ ಬಿದ್ದಾಗ ಅವಳ ತುಟಿಯಲ್ಲಿ ವಿಷಾದದ ನಗುವೊಂದು ಹಾದುಹೋಗಿತ್ತು. ಅದೊಂದು ಸಂಜೆ, ಬತ್ತಿ ಹೊಸೆಯುತ್ತಾ ಕೂತ ಭಾಗೀರಥಿಗೆ, ಆಳು ನಾಗ "ಅಮ್ಮ, ಯಾವುದೋ ಪತ್ರ ಬಂದಿತ್ತು, ನೋಡಿ" ಎಂದು ಕೊಟ್ಟ. ನನಗ್ಯಾರಪ್ಪ ಪತ್ರ ಬರೆಯುವವರು ಎಂದು ಬಿಚ್ಚಿಸಿ ನೋಡಿದರೆ ಮರತೇಹೋದಂತಿದ್ದ ತವರಿಂದ ಅಣ್ಣ ಬರೆದಿದ್ದ ಪತ್ರ. 'ಅಮ್ಮನಿಗೆ ತುಂಬಾ ಹುಷಾರಿಲ್ಲ, ನಿನ್ನ ನೋಡಲು ಆಸೆ ಮಾಡುತ್ತಿದ್ದಾರೆ, ಒಂದು ಸಲ ಬಂದು ಹೋಗು' ಎಂಬುದು ಅದರ ಸಾರಾಂಶ. ಎದೆಯಾಳದಲ್ಲೊಂದು ಅಲೆ ಕಲಕಿದಂತಾಗಿ ನೆನಪುಗಳು ನುಗ್ಗಿ ಬರಲಾರಂಭಿಸಿದವು. ಎಂದೂ ಬೈಯದೇ ಬರೀ ಪ್ರೀತಿಯನ್ನಷ್ಟೇ ಉಣಿಸಿದ ಜೀವವದು, ಅಷ್ಟು ಅಮೃತ ಕುಡಿದಿದ್ದರಿಂದಲೋ ಏನೋ ಇಷ್ಟೂ ವರ್ಷಗಳು ವಿಷವನ್ನು ಕುಡಿದು ಅರಗಿಸಿ ಬದುಕಲು ಸಾಧ್ಯವಾಯಿತು ಅನಿಸಿತು ಅವಳಿಗಾಕ್ಷಣ. ಅಪ್ಪ ಹೇಗಿರಬಹುದು. ಅವರಿಬ್ಬರಲ್ಲಿ ಜಗಳವನ್ನೇ ನೋಡಿರಲಿಲ್ಲವಲ್ಲ, ಎಷ್ಟೊಂದು ಪ್ರೀತಿಯಿತ್ತು. ಅಣ್ಣ ಮದುವೆಯಾದ ಮೇಲೆ ಅತ್ತಿಗೆಯ ಆಗಮನವಾಗುತ್ತಿದ್ದಂತೆ ಪರಿಸ್ಥಿತಿ ಹದೆಗಡಲಾರಂಭಿಸಿತು. ಮೂಲಾ ನಕ್ಷತ್ರದ ಪಟ್ಟ ಬೇರೆ ತಲೆ ಮೇಲೆ, ಇವಳೇ ಹಟ ಹಿಡಿದು ಎರಡನೇ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದಾಗ ಇಬ್ಬರೂ ಅದೆಷ್ಟು ನೊಂದುಕೊಂಡಿದ್ದರು, ಅಳಿಯನೂ ವಿಚಿತ್ರ ಸ್ವಭಾವದವನು ಎಂದು ತಿಳಿದಾಗಲೂ ಅವರ ದುಃಖ ಮೇರೆ ಮೀರಿತ್ತು. ಅವರ ಸಂಕಟ ನೋಡಲಾಗದೇ ಭಾಗೀರಥಿ ಸಂಬಂಧವನ್ನೇ ಕಡಿದು ಹಾಕುವಷ್ಟು ಕಲ್ಲಾಗಿ ಬದುಕುತ್ತಿದ್ದಳು. ಎಂದೋ ಒಂದು ಸಲ ಹಬ್ಬಕ್ಕೆ ಕರೆಯಲು ಬಂದವರು, ಕರುಳು ಕಿತ್ತು ಬರುವಂತೆ ಅತ್ತಿದ್ದರು. ಅದ್ಯಾವ ಘಳಿಗೆಯಲ್ಲಿ ಈ ಸಂಬಂಧಕ್ಕೆ ಒಪ್ಪಿದೆನೋ ಎಂದುಕೊಂಡು ನಿಟ್ಟುಸಿರುಬಿಟ್ಟಳು. ನೆನಪುಗಳ ಓಣಿಯಲ್ಲಿ ಸುತ್ತಾಡುತ್ತಿದ್ದವಳನ್ನು ಸೀತೆಯ ದನಿ ಎಚ್ಚರಿಸಿತು, "ಅಮ್ಮ, ನೋಡು ಎಷ್ಟು ಹೂವಿದೆ ಇವತ್ತು, ಕಟ್ಟಮ್ಮ" ಎಂದು ಉಡಿತುಂಬಾ ಜಾಜಿ ಹೂಗಳನ್ನು ತಂದಿದ್ದವಳು ಅಮ್ಮನೆದುರಿಗೆ ಸುರಿದಳು. ಕೋಣೆಯಿಡೀ ಹರಡಿದ ಸುಗಂಧ, ಕಣ್ಣಲ್ಲಿ ಕನಸುಗಳು ಮತ್ತು ನಳನಳಿಸುವ ಹರುಷದ ಮುಖ ನೋಡುತ್ತಿದ್ದಂತೆ ಅಷ್ಟು ಬೇಸರದ ಮಧ್ಯೆಯೂ ತಂಗಾಳಿಯೊಂದು ಸುಳಿದಂತಾಯ್ತು ಭಾಗೀರಥಿಗೆ. ಮಗಳಿಗೆ ಪತ್ರ ಕೊಟ್ಟು ಬಾಳೆನಾರಿನ ಹಗ್ಗದಿಂದ ಹೂವನ್ನು ಸುರಿಯತೊಡಗಿದಳು. "ಯಾರದಮ್ಮ ಪತ್ರ, ನಮಗ್ಯಾರು ಬರೆಯುವವರು" ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾ ಓದತೊಡಗಿದವಳ ಮುಖ ಪತ್ರ ಮುಗಿಯುತ್ತಿದ್ದಂತೆ ಮ್ಲಾನವಾಯಿತು. "ನಾವಿಬ್ಬರೂ ಹೋಗೋಣ್ವಾ, ನಾನಾ ಅಜ್ಜ-ಅಜ್ಜಿಯನ್ನು ನೋಡಲೇ ಇಲ್ಲ" ಎಂದಳು. ಬರಿದೇ ತಲೆಯಾಡಿಸಿದ ಭಾಗೀರಥಿ "ತುಳಸಿಗೆ ದೀಪ ಹತ್ತಿಸು, ಕತ್ತಲಾಗ್ತಾ ಬಂತು, ಅಪ್ಪಯ್ಯನಿಗೆ ಕಷಾಯ ಕೊಟ್ಟಾಯ್ತಾ" ಎಂದು ಕೇಳಿದಳು. ಉತ್ತರ ನೀಡದೇ ಮುಖ ಹಿಂಡಿ ಬಚ್ಚಲಿಗೆ ಧಾವಿಸಿದ ಮಗಳನ್ನೇ ನೋಡಿದವಳು 'ಓಹ್! ಆಗಲೇ ತಿಂಗಳಾಯ್ತೇ, ಇನ್ನಿವಳನ್ನು ಕರೆದುಕೊಂಡು ಹೋಗಲಾಗುವುದಿಲ್ಲ, ಅಪ್ಪಿಯ ಮಗಳನ್ನು ಜೊತೆ ಮಾಡಿ ಬಿಟ್ಟು ಹೋಗಬೇಕಷ್ಟೆ' ಎಂದು ಲೆಕ್ಕ ಹಾಕಿದಳು. ಅಂತೆಯೇ ಅಪ್ಪಿಯ ಮಗಳು ಕಣ್ಣಿಯನ್ನು ಸೀತೆಯ ಜೊತೆ ಮಾಡಿದರೆ, ಅಪ್ಪಿ ಒಂದಿಷ್ಟು ಎಲ್ಲರಿಗೂ ಬೇಯಿಸಿ ಹಾಕುವುದಾಗಿಯೂ, ಭಾಗೀರಥಿ ನಾಗನೊಂದಿಗೆ ಬೆಳಗ್ಗೆ ಬಸ್ಸುಹಿಡಿಯುವುದಾಗಿಯೂ ನಿರ್ಧಾರವಾಯಿತು. ಬೆಳಗ್ಗೆ ಸೀತೆಗೊಂದು ಮಾತು ಹೇಳಲು ಬಾಣಂತಿಕೋಣೆಗೆ ಭಾಗೀರಥಿ ಬಂದಾಗ ಅವಳಿನ್ನೂ ಎದ್ದಿರಲಿಲ್ಲ, "ರಾತ್ರಿಯಿಡೀ ಹೊಟ್ಟೆನೋವಿಂದ ನರಳಿದರು ಸಣ್ಣಮ್ಮ" ಎಂದು ಕಣ್ಣಿ ಹೇಳಿದಳು. ಒಂದೂ ದಿನವೂ ಮಗಳನ್ನು ಬಿಟ್ಟು ಹೋಗದವಳಿಗೆ ಹೊರಡುವ ಗಳಿಗೆಗೆ ಒಂಥರಾ ಕಸಿವಿಸಿ, ಮಾತನಾಡಲೂ ಆಗಲಿಲ್ಲವಲ್ಲ ಎಂದುಕೊಂಡೇ ಹೊರಟಳು.

ಅಮ್ಮನಿಲ್ಲದೇ ಖಾಲಿಖಾಲಿ ಅನಿಸುತ್ತಿದ್ದ ಮನವನ್ನು ಸಂತೈಸಿಕೊಂಡೇ ಕಳೆದ ಸೀತೆಗೆ ಮನೆಯೊಳಗೆಯೂ, ಗದ್ದೆ ಸುತ್ತಲೂ ಹೋಗುವ ಹಾಗಿರಲಿಲ್ಲ, ಕಣ್ಣಿಯೊಡನೆ ಚೌಕಾಭಾರ ಆಡುತ್ತಾ, ಊರಿನ ಸುದ್ದಿ ಮಾತನಾಡುತ್ತಾ ದಿನ ಕಳೆದಳು. ಇಬ್ಬರು ಹರೆಯದ ಹುಡುಗಿಯರಿಗೆ ಮಾತಿನ ಬರವೇ? ದೀಪವಾರಿಸಿಯೂ, ಹಾಸಿಗೆಯ ಸುರುಳಿಗಳ ಮೇಲೆ ಬಿದ್ದುಕೊಂಡು ಅದೆಷ್ಟೋ ಹೊತ್ತು ಮಾತನಾಡುತ್ತಲೇ ಇದ್ದರು. ಅದು ಯಾವಾಗ ಕಣ್ಣೆಳಿಯಿತೊ, ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಬಚ್ಚಲಿನಿಂದ ಜೋರು, ಜೋರಾದ ಅಸ್ಪಷ್ಟ ಮಾತುಗಳು ಕೇಳಿಬಂದಂತಾಯ್ತು. ಸೀತೆ ಎದ್ದು ನಿಂತು ಮರದ ಅಡ್ಡಪಟ್ಟಿಗಳ ಕಿಟಕಿಗೆ ಮುಖವೊತ್ತಿ ಬಚ್ಚಲಿನ ಕಡೆ ಕಣ್ಣು ಹಾಯಿಸಿದರೆ ಮಂದಬೆಳಕಿನಲ್ಲಿ ಅಪ್ಪಯ್ಯ ಯಾರೊಡನೆಯೋ ಮಾತನಾಡುವುದು ಕಾಣಿಸಿತು. ಕಣ್ಣು ಕಿರಿದುಗೊಳಿಸಿ ನೋಡಿದರೆ ಚಾಟು, ಅಷ್ಟರಲ್ಲಿ ಕಣ್ಣಿಯೂ ಎದ್ದು ಇವಳ ಪಕ್ಕಕ್ಕೆ ಬಂದು ನಿಂತಿದ್ದವಳು "ಅರೇ!ಇದ್ಯಾಕೆ ಇಲ್ಲಿಗೆ ಬಂತು ಶನಿ?! ದೊಡ್ಡ ಅಮ್ಮ ಹೋಗಿದ್ದು ಇದಿಕ್ಕ್ಯಾರು ಹೇಳಿದ್ರೋ ಕಾಣೆ" ಎಂದು ಉದ್ಗರಿಸಿದಳು. ಯಾವುದರ ಬಗ್ಗೆಯೋ ಇಬ್ಬರಲ್ಲಿ ಚರ್ಚೆ ನಡೆದಿತ್ತು. ಬಾಗಿದ ಬೆನ್ನಿನ ಅಪ್ಪಯ್ಯನನ್ನು ನೋಡುತ್ತಿದ್ದಂತೆ ಸೀತೆಗೆ ಏನೋ ಅಸ್ಪಷ್ಟ ಭಾವನೆಯೊಂದು ಸುಳಿಯಿತು, ಅದೇನೆಂದು ಗೊತ್ತಾಗಲಿಲ್ಲ, ಆದರೆ ಚಾಟುವನ್ನು ನೋಡುತ್ತಿದ್ದಂತೆ ಹುಟ್ಟಿದ ಭಾವ ಮಾತ್ರ ಅಸಹ್ಯ, ಜಿಗುಪ್ಸೆ ಎಂಬುದು ಅರಿವಾಯಿತು. ಅವರೀರ್ವರ ಏರುದನಿಯ ಸಂಭಾಷಣೆ ಜಗಳಕ್ಕೆ ತಿರುಗಿ ಮೈಕೈ ಮಿಲಾಯಿಸುವ ಹಂತಕ್ಕಿಳಿಯಿತು, ಒಂದು ಹಂತದಲ್ಲಿ ಚಾಟು ಜೋರಾಗಿ ಅಪ್ಪಯ್ಯನನ್ನು ತಳ್ಳಿ ಅವರು ಇದ್ದ ಎರಡು ಮೆಟ್ಟಲಿನಿಂದ ಕೆಳಕ್ಕುರುಳಿದ್ದು ಕಂಡು ಸೀತೆ ಜೋರಾಗಿ ಕಿರುಚಿಕೊಂಡಳು. ತಿರುಗಿ ನೋಡಿದ ಚಾಟು, ಬಚ್ಚಲಿನಿಂದ ಇವರಿದ್ದ ಕೋಣೆಯ ಮಧ್ಯೆ ಇದ್ದ ಸಣ್ಣ ಕಟ್ಟೆಯನ್ನು ಹಾರಿಬಂದು ಕೋಣೆಯ ಬಾಗಿಲನ್ನು ಜೋರಾಗಿ ಒದ್ದ. ಒಳಗಿಂದ ಮರದ ಪಟ್ಟಿಯದೇ ಚಿಲಕ ಅಡ್ಡವಾಗಿದ್ದರಿಂದ ಬಾಗಿಲು ತೆರೆದುಕೊಳ್ಳಲಿಲ್ಲ. ಇಬ್ಬರು ಹುಡುಗಿಯರಿಗೂ ಅವನು ಒಳನುಗ್ಗುವ ಪ್ರಯತ್ನ ಮಾಡುತ್ತಿದ್ದಾನೆಂಬ ಅರಿವಾದಂತೆ "ಓಬಲಣ್ಣಾ, ಗೋಪಾಲಣ್ಣಾ, ರುಕ್ಮಿಣಿಯಕ್ಕ" ಎಂದು ಇದ್ದಬಿದ್ದವರ ಹೆಸರುಗಳನ್ನೆಲ್ಲಾ ಕಿರುಚಿ ಕರೆಯತೊಡಗಿದರು. ಅದೂ ಅಲ್ಲದೇ, ಸಮಯಪ್ರಜ್ಞೆಯಿಂದ ಕೋಣೆಯ ಮೂಲೆಯಲ್ಲಿ ಪೇರಿಸಿಟ್ಟ ಭಾರದ ನೇಗಿಲು, ಮತ್ತಿತ್ತರ ಮರದ ಸಾಮಾನುಗಳನ್ನು ತಂದು ಬಾಗಿಲಿಗೆ ಅಡ್ಡವಾಗಿಡಲಾರಂಭಿಸಿದರು. ಚಾಟುವಿನ ಮೈಯಲ್ಲಿ ರಾಕ್ಷಸ ಹೊಕ್ಕಿದ್ದ. ಎಲ್ಲಾ ಶಬ್ದಗಳು, ಕಿರುಚಾಟಕ್ಕೆ ರಾಜು ನಾಯಿಯೂ ಎದ್ದು ಬೊಗಳತೊಡಗಿದ, ಕೊಟ್ಟಿಗೆಯಲ್ಲಿದ್ದ ಹಸುಗಳೂ ಎದ್ದು ಅಂಬಾ ಎಂದು ಕರೆಯಲಾರಂಭಿಸಿದವು. ಇವರೆಲ್ಲರ ಸ್ವರಗಳನ್ನೂ ಮೀರಿಸುವ ಆರ್ಭಟವೊಂದು ಕೇಳಿಬಂತು, ಬಾಗಿಲಿನಿಂದ ಕಿಟಕಿಗೆ ಧಾವಿಸಿ ಸೀತೆ ನೋಡುತ್ತಾಳೆ, ಅಪ್ಪಯ್ಯ ಎದ್ದು ಬಂದು ನಿಂತಿದ್ದಾರೆ! ಮತ್ತೊಮ್ಮೆ ಸೂರು ಕಿತ್ತು ಹೋಗುವಂತೆ ಆರ್ಭಟಿಸಿದ ಅಪ್ಪಯ್ಯ, ಕೈಲಿದ್ದ ಅಡಿಕೆ ಮರಕ್ಕೆ ಔಷಧ ಹೊಡೆಯುವ ಸ್ಪ್ರೇಯರ್ ಟ್ಯಾಂಕಿನಿಂದ ಚಾಟು ತಲೆಗೆ ಜೋರಾಗಿ ಬಾರಿಸಿ, ಅವನ ತಲೆಯಿಂದ ರಕ್ತ ಕಾರಂಜಿಯಂತೆ ಚಿಮ್ಮಿತು. ಅದು ಗಣಪಯ್ಯನ ಮುಖವನ್ನು ನೆನಸಿದಂತೆ ನಿಧಾನಗತಿಯಲ್ಲಿ ಚಾಟು ಕೆಳಕ್ಕೆ ಕುಸಿದ. ಕೂಗಲೂ ಶಕ್ತಿಯಿಲ್ಲದೆ, ಅಪ್ಪಯ್ಯನನ್ನೇ ನೋಡುತ್ತಾ ಕಿಟಕಿಗೆ ಭಾರಹಾಕಿ ನಿಂತ ಸೀತೆಯ ಮೈ ನಡುಗುತ್ತಿತ್ತು, ನಿಧಾನಕ್ಕೆ ಕಣ್ಣಲ್ಲಿ ನೀರು ತುಂಬಲಾರಂಭಿಸಿತು.

Sunday, October 11, 2020

A life on our planet

 ಮೊದಲೆಲ್ಲಾ ಸುಮಾರು ಒಂದು ಲಕ್ಷ ವರ್ಷಗಳಿಗೊಮ್ಮೆ ತನ್ನ ಒಡಲಲ್ಲಿ ಹುದುಗಿದ್ದ ಲಾವಾವನ್ನು ಹೊರ ಕಕ್ಕುತ್ತಿದ್ದ ಭೂಮಿ ಇತ್ತೀಚೆಗೆ ಅದನ್ನು ಇನ್ನೂರು ವರ್ಷಗಳಿಗೊಮ್ಮೆ ಮಾಡಲಾರಂಭಿಸಿದ್ದಾಳೆ. ತೀರಾ ಇತ್ತೀಚಿನವರೆಗೂ ಮನುಷ್ಯ ಮಾಡಿದ ಅನಾಚಾರಗಳನ್ನು ನುಂಗಿ ಉಷ್ಣತೆಯನ್ನು ನಿಯಂತ್ರಿಸುತ್ತಿದ್ದ ಸಾಗರಗಳು ಕೈಚೆಲ್ಲಿದ್ದರಿಂದ ಜಗತ್ತಿನ ಐಸ್ ಕ್ಯಾಪುಗಳು ನಿಧಾನಕ್ಕೆ ಕರಗಲಾರಂಭಿಸಿವೆ. ಜೀವ ಜಗತ್ತಿನ ವೈವಿಧ್ಯತೆ, ದಟ್ಟ ಕಾಡುಗಳು ಆತಂಕಕಾರಿಯಾಗಿ ಕ್ಷೀಣಿಸತೊಡಗಿವೆ. ಕೇವಲ ಮನುಷ್ಯನಿಂದ ಮನುಷ್ಯನಿಗೋಸ್ಕರ ಮಾತ್ರ ಈ ಜಗತ್ತು ಸುತ್ತುತ್ತಿದೆ. 


ತನ್ನ ತೊಂಭತ್ತಮೂರು ವರ್ಷಗಳ ತುಂಬು ಬದುಕನ್ನು ಪ್ರಾಣಿ, ಪಕ್ಷಿ, ಗಿಡ, ಮರ ಹೀಗೆ ಪ್ರಕೃತಿಯ ವಿಸ್ಮಯಗಳ ಬಗ್ಗೆಯೇ ಸವೆಸಿದ ದೇವ ದೂತನೊಬ್ಬನ ಹತಾಶೆಯ ಕೂಗೇ a life on our planet. ಸರ್ ಡೇವಿಡ್ ಅಟೆನ್ ಬರ್ಗ್ ತನ್ನ ಚೆಂದದ ಆದರೆ ವಿಷಾದಭರಿತ ದನಿಯಲ್ಲಿ, 

ಆತಂಕ ಭರಿತ ನೀಲಿ ಕಣ್ಣುಗಳಲ್ಲಿ ನಮ್ಮನ್ನೇ ದಿಟ್ಟಿಸುತ್ತಾ ಈ ಅಂಶಗಳನ್ನು ಹೇಳುತ್ತಾ ಹೋದಂತೆ ಕರಾಳ ಭವಿಷ್ಯದ ಚಿತ್ರಗಳು ಕಣ್ಣೆದುರಿಗೆ ಬರಲಾರಂಭಿಸುತ್ತವೆ. 


ಮನುಷ್ಯನನ್ನು ಹೊರತುಪಡಿಸಿ ಪ್ರಕೃತಿಯಲ್ಲಿರುವ ಉಳಿದೆಲ್ಲಾ ಜೀವಜಂತುಗಳಿಗೂ ಅವುಗಳದ್ದೇ ಆದ ಉದ್ದೇಶವಿದೆ, ಅದರೊಂದಿಗೆ ಚೆಲ್ಲಾಟವಾಡಲು ಮನುಷ್ಯನಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟವಾಗಿ ನುಡಿಯುವ ಸರ್ ಅಟೆನ್ ಬರ್ಗ್ ಈ ಭೂಮಿಗೆ ಖಂಡಿತಕ್ಕೂ ಮನುಷ್ಯನ ಅವಶ್ಯಕತೆಯಿಲ್ಲ ಎಂದೂ ಸೇರಿಸುತ್ತಾರೆ. ಕಡಿಮೆಯಾಗುತ್ತಿರುವ ಮರಗಳು, ಏರುತ್ತಿರುವ ಕಾರ್ಬನ್, ಉಷ್ಣತೆಯಷ್ಟೇ ಅಲ್ಲದೇ ತೀವ್ರವಾಗಿ ಇಳಿಮುಖವಾಗುತ್ತಿರುವ ವನ್ಯಜೀವಿಗಳಿಂದ ಪರಿಸರ ಮತ್ತು ಹವಾಮಾನದ ಮೇಲಾಗುತ್ತಿರುವ ಅತೀ ಭಯಂಕರ ಪರಿಣಾಮಗಳನ್ನು ಎಳೆಎಳೆಯಾಗಿ ಅಂಕಿ ಅಂಶಗಳೊಂದಿಗೆ ವಿವರಿಸುತ್ತಾರೆ. ಬಹುಶಃ ಅವರು ನೋಡದ ಕಾಡುಗಳಿಲ್ಲ, ಅವರಿಗೆ ತಿಳಿಯದ ಜೀವ ವೈವಿಧ್ಯವಿಲ್ಲ. ತನ್ನ ಹರೆಯದ ದಿನಗಳಿಂದ ಇಲ್ಲಿಯವರೆಗೂ ಬದಲಾದ ಭೂಮಿಯ ಪರಿಸ್ಥಿತಿ ಹೇಳುತ್ತಿದ್ದಂತೆ ಅವರು ಹತಾಶರಾಗುತ್ತಾರೆ. 


ಹಾಗಿದ್ದಲ್ಲಿ ಇದು ಏಕಮುಖ ದಾರಿಯೇ, ಇದಕ್ಕೆ ಯೂ ಟರ್ನುಗಳಿಲ್ಲವೇ, ನಾವೇನೂ ಮಾಡಲಾಗುವುದಿಲ್ಲವೇ, ಮುಂದಿನ ಮಕ್ಕಳ ಭವಿಷ್ಯದ ಗತಿಯೇನು ಎಂದೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಹುಟ್ಟುತ್ತಿದ್ದಂತೆಯೇ ಸರ್ ಅಟೆನ್ ಬರ್ಗ್ ಸುಲಭ ಉಪಾಯಗಳನ್ನು ತಿಳಿಸಿಕೊಡುತ್ತಾರೆ. ರಣ ವಿಷದ ವಿಕಿರಣ ಹೊರಸೂಸಿ ಬದುಕಲು ಯೋಗ್ಯವಲ್ಲದಂತಾದ ಚರ್ನೋಬಿಲ್ ನಲ್ಲಿ ಮತ್ತೀಗ ನಿಧಾನಕ್ಕೆ ಪ್ರಕೃತಿ ಹಸಿರಾಗುತ್ತಿದ್ದಾಳೆ, ಹಕ್ಕಿಗಳು ಉಲಿಯತೊಡಗಿವೆ,  ಮೆತ್ತಗೆ ಒಂದೊಂದೇ ಪ್ರಾಣಿಗಳು ಓಡಾಡುತ್ತಿವೆ. 

ಅದೇ ರೀತಿ ನಾವೂ ಒಂದಿಷ್ಟು ವಿರಾಮ ನೀಡಿದಲ್ಲಿ ಭೂಮಿಯ ಗಾಯಗಳೂ ಮಾಯಬಹುದು, ನಾವು ಮಾಡಬಹುದಾಗಿಷ್ಟು.

1. ಜನಸಂಖ್ಯೆಯ ನಿಯಂತ್ರಣ 

2. ಕಾಡು ಕಡಿದು ಕೃಷಿಭೂಮಿ ಮಾಡುವುದು ಹಾಗೂ ಆ ಪರಿಸರಕ್ಕೆ ಹೊಂದದ, ಕೇವಲ ಲಾಭಕ್ಕಾಗಿ ಮರಗಳನ್ನು ಬೆಳೆಸುವುದನ್ನು ಪೂರ್ಣವಾಗಿ ನಿಲ್ಲಿಸುವುದು

3. ಅವಶ್ಯಕತೆಗಿಂತ ಜಾಸ್ತಿ ಮತ್ತು ಪದೇ ಪದೇ ಸಮುದ್ರದಿಂದ ಜಲಚರಗಳನ್ನು ತೆಗೆಯುವುದನ್ನು ಕಡಿಮೆ ಮಾಡುವುದು

4. ಧಂಡಿಯಾಗಿ ಭೂಮಿಗೆ ಸುರಿಯುತ್ತಿರುವ ಸೂರ್ಯನ ಬೆಳಕನ್ನು ಬಳಸುವುದು, ಸಾಧ್ಯವಾದಷ್ಟು ವಿಂಡ್ ಮಿಲ್ಲುಗಳನ್ನು ಸ್ಥಾಪಿಸುವುದು ಇತ್ಯಾದಿ.


ನಾಲ್ಕು ದಶಕಗಳ ನನ್ನದೇ ಬದುಕಲ್ಲಿ ಅದೆಷ್ಟು ಬದಲಾವಣೆಗಳನ್ನು ನಾನೂ ನೋಡಿದ್ದೇನೆ. ಅಣ್ಣ ಅಮ್ಮನ ವರ್ಗಾವಣೆಗಳಿಂದ ಸುತ್ತಿದ ಊರುಗಳನ್ನು ಮತ್ತೆ ಸಂದರ್ಶಿಸಿದಾಗ ಗುರುತೇ ಸಿಗದಷ್ಟು ಬೆಳೆದು ಹಸಿರು ಮಾಯವಾಗಿರುವುದನ್ನು ಗಮನಿಸಿದ್ದೇನೆ. ರಥೋತ್ಸವಕ್ಕೆ ಮಳೆ ಬಂದೇ ಬರುತ್ತದೆ, ಈ ಬೆಳೆಗೆ ಇಷ್ಟು ಮಳೆ ಸಾಕು ಎಂದುಕೊಂಡ ಹಿರಿಯರ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು ಕಂಡಿದ್ದೇನೆ. ಮಳೆಗಾಲ, ಬೇಸಿಗೆಗಾಲಗಳು ವಿಚಿತ್ರವಾಗಿ ವರ್ತಿಸುವುದನ್ನು ನೋಡಿದಾಗ ರೈತರ, ಬೆಳೆಗಾರರ ಬಗ್ಗೆ ಯೋಚಿಸಿದ್ದೇನೆ.  ಕರಾವಳಿಯ ಗದ್ದೆ, ಕಾಡುಗಳು ಮಾಯವಾಗಿ ಕಾಂಕ್ರೀಟ್ ಕಾಡುಗಳಾಗುತ್ತಿದ್ದಂತೆ ಬೇಸಿಗೆಯಲ್ಲಿ ಕಾಲು ಹೊರಗಿಡಲಾರದಷ್ಟು ತಾಪಮಾನ ಏರಿದ್ದು ಅರಿವಾಗಿದೆ. 


ಟಿಕ್ ಟಾಕ್, ರೀಲ್ಸ್, ಗೇಮ್ಸ್,  ಯೂ ಟ್ಯೂಬುಗಳಲ್ಲಿ ಮುಳುಗೇಳುವ, ಬುದ್ಧಿ ಶಕ್ತಿಗಿಂತ ಬಾಹ್ಯ ರೂಪ, ಅದಕ್ಕಾಗಿ ಕಾಲ ವ್ಯಯಿಸುವ ಈಗಿನ ಯುವಕ / ಯುವತಿಯರಿಗೆ ಸುತ್ತಲಿನ ಪ್ರಪಂಚದ / ಆಗು ಹೋಗುಗಳ ಅರಿವಿದೆಯೇ? 


ಸುಮಾರು ಎರಡು ಘಂಟೆಗಳಿಷ್ಟಿರುವ ಡಾಕ್ಯುಮೆಂಟರಿ ನೋಡುತ್ತಿದ್ದಾಗ ಮುಂದಿನ ತಿಂಗಳು ಹದಿನಾಲ್ಕಕ್ಕೆ ಕಾಲಿಡುತ್ತಿರುವ ನನ್ನ ಮಗ ಮೂರು ನಾಲ್ಕು ಸಲ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ. ಬೆಂಕಿಪೊಟ್ಟಣದ ಥರ ಇರುವ ಅಪಾರ್ಟುಮೆಂಟುಗಳಲ್ಲಿ ಬದುಕುತ್ತಾ, ಬೆಳಗೆದ್ದರೆ ಹಾಲಿನ ಪ್ಲಾಸ್ಟಿಕ್ ಕತ್ತರಿಸುತ್ತಾ, ಪಕ್ಕಕ್ಕೆ ಕಾರಿನ ಶೋರೂಮಿನ ಕಾರುವಾಶು, ಮನೆ ಮುಂದೆ ಹಾದುಹೋಗುವ ಮೆಟ್ರೋ ಮತ್ತು ಟನ್ನುಗಟ್ಟಲೆ ವಾಹನಗಳ ಶಬ್ದದ ಮಧ್ಯೆ

ಬದುಕುತ್ತಿರುವ ನನ್ನಂತಹ ತಾಯಂದಿರು ಮಕ್ಕಳಿಗೆ ಪರಿಸರದ ಸಂರಕ್ಷಣೆ ಬಗ್ಗೆ ಏನು ಹೇಳಿಕೊಡಬಹುದು ನಿಜಕ್ಕೂ ಗೊತ್ತಿಲ್ಲ. 


ನಮ್ಮ ತೇಜಸ್ವಿ, ಕೃಪಾಕರ-ಸೇನಾನಿ,  ಜಿಮ್ ಕಾರ್ಬೆಟ್, ಕೆನೆತ್ ಆಂಡರ್ ಸನ್, ಸರ್ ಅಟೆನ್ ಬರ್ಗ್ ಹೀಗೆ ವನ್ಯಜೀವಿ ಸಂರಕ್ಷಣೆ, ಪರಿಸರ ಪ್ರೀತಿ ಹುಟ್ಟಿಸುವ ಸಂತರೆಲ್ಲರ ಪರಿಚಯ ಮಾಡಿಕೊಟ್ಟಿದ್ದೇನೆ. ಸಂಬಂಧಿಸಿದ ಸಾಕ್ಷ್ಯ ಚಿತ್ರಗಳನ್ನು ಹಾಕಿ ತೋರಿಸುತ್ತೇನೆ. ನೀರು, ಲೈಟು ಬಳಸದಿದ್ದಾಗ ಅವನಾಗೇ ಆಫ್ ಮಾಡುವಂತೆ, ಅನಾವಶ್ಯಕವಾಗಿ  ಹಾಳೆಗಳನ್ನು ಹಾಳು ಮಾಡದಂತೆ, ಹಸಿ ಮತ್ತು ಒಣ ಕಸದ ಬಗ್ಗೆ ಪದೇ ಪದೇ ಹೇಳುತ್ತಲೇ ಇರುತ್ತೇನೆ. ಮನೆ ತುಂಬ ತುಂಬಿಟ್ಟ ಗಿಡಗಳನ್ನು, ಪ್ರತಿಯೊಂದರ ತಳಿಗಳ ಬಗ್ಗೆ, ಅವಕ್ಕೆ ಬರುವ ಚಿಟ್ಟೆ, ಹುಳಗಳ ಬಗ್ಗೆ ಗಮನ ಸೆಳೆಯುತ್ತೇನೆ. ಸುತ್ತಾಡಲು ಹೊರಹೋದಾಗ ಕಾಣುವ ಮರ, ಗಿಡ, ಪ್ರಾಣಿಗಳ ಬಗ್ಗೆ ಹೇಳುವುದು ಇವಿಷ್ಟೂ ನಾನು ಮಾಡಬಹುದಾಗಿದ್ದು ಅಷ್ಟೇ. 


ತಂದೆ-ತಾಯಂದಿರೇ, ದಯವಿಟ್ಟು ನಿಮ್ಮ ಮಕ್ಕಳಿಗೆ ಇಂತಹ ವಿಡಿಯೋಗಳನ್ನು ತೋರಿಸಿ. ಶಾಲೆಯ ಆಡಳಿತ ಮಂಡಳಿಗಳೇ, ಇಂತಹ ಚಿತ್ರಗಳನ್ನು ಪಾಠದೊಂದಿಗೆ ಸೇರಿಸಿ. ನಮ್ಮ ಮಕ್ಕಳೂ ತೇಜಸ್ವಿ, ಅಟೆನ್ ಬರ್ಗ್ ಅವರಂತೆ ಪರಿಸರ ಪ್ರೇಮಿಗಳಾಗಲಿ. ಇತ್ತೀಚೆಗೆ ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಅರಣ್ಯ ಇಲಾಖೆ ಸೇರುತ್ತೇನೆಂದು ಹೇಳಿದ ಅನುಷ್ ಥರಹ ನಮ್ಮ ಮಕ್ಕಳೂ ಆಗಲಿ ಎಂಬುದು ನನ್ನಾಸೆ. 


ಈ ಸಾಕ್ಷ್ಯಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ. 


Dancing with birds ಮತ್ತು our planet ಕೂಡಾ ನೋಡಲೇ ಬೇಕಾದ ಇತರ ವಿಡಿಯೋಗಳು.


Wednesday, April 22, 2020

ಊರಿನಲ್ಲಿ ನಾವೋ ನಮ್ಮಲ್ಲಿ ಊರೋ



ಒಂದು ಊರು ಇಷ್ಟವಾದರೆ ಅದರಲ್ಲಿರುವ ಎಲ್ಲವೂ ಚೆಂದ ಕಂಡೀತು. ಊರು ಅಂದರೆ ಏನು? ಅದರಲ್ಲಿ  ನಾಲ್ಕೇ ನಾಲ್ಕು ಮರಗಳಿರುವ ಪುಟ್ಟ ಪಾರ್ಕು, ಮೀನಿನ ವಾಸನೆ ಹೊತ್ತು ತರುವ ಹೊಳೆ  ಅಥವಾ ಸಮುದ್ರದ ಮೇಲಿನ ಗಾಳಿ, ತರಕಾರಿ ಅಥವಾ ಮೀನು ಬುಟ್ಟಿ ಹೊತ್ತು ತರುವ ಹೆಂಗಸು, ಹೆಸರಿಗೆ ನಾಲ್ಕು ಅಂಗಡಿಗಳಿರುವ ಕೆಳ ಪೇಟೆ ಅಲ್ಲಿರಬಹುದು. ಅಷ್ಟೇ ಅಲ್ಲ,  ಓಬಿರಾಯನ ಕಾಲದ ಅಂಗಿಗಳಿರುವ ಮಾಸಿದ ಬೋರ್ಡ್ ಹೊತ್ತು ನಗುವ ಬಟ್ಟೆ ಅಂಗಡಿ, ಒಂದಿಷ್ಟು ಟಯರ್ರುಗಳು ಮತ್ತು ಬಗೆ ಬಗೆಯ ಗಾಡಿಗಳಿಗೆ ಹಾಕುವ ಎಣ್ಣೆಯ ಡಬ್ಬಗಳು, ಸ್ಪಾನರ್ರು, ನಟ್ ಬೋಲ್ಟ್ ತುಂಬಿಕೊಂಡು ತಾನೇನು ಎಂದು ತಾನೇ ಬೆರಗಾಗಿ ಕೂತ ಹೆಸರು ಏನೆಂದೇ  ಓದಲಾಗದಷ್ಟು ಮಸಿಯಾಗಿರುವ ಬೋರ್ಡಿನ ಅಂಗಡಿ, ಬಳೆ, ಕ್ಲಿಪ್ಪು, ಹೇರ್ ಬ್ಯಾಂಡ್, ಹಣೆಬೊಟ್ಟು, ಮದರಂಗಿ ಪುಡಿಯ ಪೊಟ್ಟಣ ಅದರೊಂದಿಗೆ ಬಸ್ಸು, ಕಾರು, ವಿಮಾನ ಎಂದೆಲ್ಲಾ ಮಕ್ಕಳಾಟಿಕೆ ಸಾಮಾನುಗಳಿಂದ ತುಂಬಿ ತುಳುಕುತ್ತಿರುವ, ಇವಾಗಷ್ಟೇ ಗಡದ್ದಾಗಿ ಊಟ ಮುಗಿಸಿದವನಂತೆ ಕಾಣುವ ಫ್ಯಾನ್ಸಿ ಸ್ಟೋರು, ಊರು ಅಂದ ಮೇಲೆ ನಾನಿಲ್ಲದರಾದೀತೇ ಅನ್ನುವ ಜ್ಯೂಸ್ ಮತ್ತು ಐಸುಕ್ರೀಮೂ ಸಿಗುವ ಒಂದು ಪುಟ್ಟ ಹೋಟೆಲ್ಲು ಎಲ್ಲಾ ಸೇರಿ ಆಗಿರುವ ಮೇಲು ಪೇಟೆಯೂ ಇರಬಹುದು. ಇಡೀ ಊರಿಗೆ ಘಂಟೆ ಹೊಡೆದೋ, ಅಜಾನ್ ಹೇಳಿಯೋ ಎಚ್ಚರಿಸುವ ಒಂದು ದೇವಸ್ಥಾನ, ಚರ್ಚು ಮತ್ತೊಂದು ಮಸೀದಿ. ಒಂದು ಸರಕಾರಿ ಶಾಲೆ, ಅದರ ಪಕ್ಕದಲ್ಲೇ ಶಾಲೆಯ ಮಕ್ಕಳ ಕಣ್ಣಲ್ಲಿ ಆಸೆ ಹುಟ್ಟಿಸುವ ಥರವಾರಿ ಪೆನ್ನು, ಪೆನ್ಸಿಲ್ಲು, ಸುಗಂಧಭರಿತ ರಬ್ಬರ್ರುಗಳಿರುವ ರೀಗಲ್ ಸ್ಟೋರ್ಸ್! ಹೆದ್ದಾರಿಗೆ ಅಂಟಿರುವ ಕಡೆ ನಿಂತ ಒಂದಾನೊಂದು ಕಾಲದಲ್ಲಿ ಹಳದಿಯಾಗಿದ್ದ, ಕನ್ನಡ ಇಂಗ್ಲೀಷು ಎರಡರಲ್ಲೂ ಊರಿನ ಹೆಸರಿರುವ ನಾಮಫಲಕ.
ಇಂತಹ ಊರುಗಳಲ್ಲೇ ಜೀವನವಿಡೀ ಕಳೆದು ಬಿಡಬಹುದೇ? ಶಾಲೆಯಲ್ಲಿ ಮಾಸ್ತರರಾಗಿಯೋ, ಪುಟ್ಟ ಕಿರಾಣಿ ಅಥವಾ ತರಕಾರಿ ಅಂಗಡಿಯನ್ನಿಟ್ಟುಕೊಂಡೋ ಬದುಕಿಬಿಡಬಹುದೇನೋ. ದೇವಸ್ಥಾನದ ತೇರು, ಸ್ನೇಹಿತರೊಂದಿಗೆ ಪುಟ್ಟ ತಿರುಗಾಟಗಳು, ರಾಜಕೀಯದ, ಯಕ್ಷಗಾನದ ಕುರಿತಾದ ಚರ್ಚೆಗಳೆಲ್ಲವೂ ಸುಂದರವಾಗಿರುತ್ತವೆ. ರಜೆಯಲ್ಲಿ ಬರುವ ನೆಂಟರಿಗೆ ಕಮಟು ಎಣ್ಣೆ ವಾಸನೆಯ ಗೋಳಿಬಜೆ ತಿನ್ನಿಸುತ್ತಾ ಇದೇ ಇಡೀ ಪ್ರಪಂಚದಲ್ಲಿ ಸಿಗುವ ಅಂಥೆಂಟಿಕ್ ಗೋಳಿಬಜೆಯೆಂದು ಒಂದು ಚೂರು ಸಂದೇಹವಿಲ್ಲದಂತೆ ಘಂಟಾಘೋಷವಾಗಿ ಸಾರಿ ನಾವು ಅದನ್ನೇ ನಂಬುತ್ತಾ ಬದುಕಿಬಿಡುತ್ತೇವೆ. ನಾವು ಬೇರೆ ಊರಿಗೆ ಹೋದರೂ ನಮ್ಮೂರಲ್ಲಿ ಹೀಗಾಗುತ್ತೆ ಗೊತ್ತಾ ಎಂದು ನಾವಿದ್ದ ಊರಿನ ರೆಪ್ರೆಸೆಂಟಿವ್ ಗಳಾಗುತ್ತೇವೆ.  ಅಲ್ಲಿನ ದೇವರು ಎಷ್ಟು ಕಾರಣೀಕವೆಂದರೆ ನಮಸ್ಕಾರ ಹಾಕದ ಹೊರತು ಗಾಡಿ ಮುಂದೆ ಹೋಗಲೂ ಬಿಡುವುದಿಲ್ಲ, ಪ್ರತೀ ತೇರಿಗೂ ಮಳೆ ಬಂದೇ ಬರುತ್ತದೆ ಇತ್ಯಾದಿ ನಂಬಿಕೆಗಳ ಅಟ್ಟದಲ್ಲಿ ಭದ್ರವಾಗಿ ಕುಳಿತಿರುತ್ತೇವೆ. ಪ್ರತೀ ಊರಿಗೆ ಅಂಟಿರುವ ಕಾಡಿನಲ್ಲೂ ಪುರಾಣದ ನಂಟಿರುತ್ತದೆ, ಹನುಮನ ಹೆಜ್ಜೆ, ಭೀಮನ ಕಲ್ಲಿರುತ್ತವೆ.  ಬೇರೆ ಯಾವ ಊರ ಕೇಪುಳವೂ ಈ ಊರಿನ ಬೇಲಿ ಬದಿಯ ಕೇಪುಳದಷ್ಟು  ಕೆಂಪಿರುವುದಿಲ್ಲ ಎಂಬುದು ಬರೀ ನಂಬಿಕೆಯಲ್ಲ, ಸತ್ಯವೂ ಆಗಿಬಿಟ್ಟಿರುತ್ತದೆ. ಅಷ್ಟರವರೆಗೆ ಊರು ನಮ್ಮನ್ನು ವ್ಯಾಪಿಸಿಕೊಂಡು ರಕ್ತದಲ್ಲಿ ಬೆರೆತಿರುತ್ತದೆ.
ಯಾವಾಗ ಜೀವನ ಯಾವುದೇ ಅಪಮಾನ, ತಿರಸ್ಕಾರ, ತಾತ್ಸಾರಗಳನ್ನು , ವಿಷದಷ್ಟು ಕಹಿಯನ್ನು ಉಗುಳುವುದಿಲ್ಲವೋ ಅಲ್ಲಿಯವರೆಗೂ ಊರು ನಮ್ಮದಾಗುತ್ತದೆ, ಅಲ್ಲಿಯ ಎಲ್ಲರೂ, ಹೊಳೆ, ಕೆರೆ, ಅಂಗಡಿ, ಸಮುದ್ರ ಎಲ್ಲವೂ ನಮ್ಮದಾಗುತ್ತದೆ. ಉಣ್ಣಲು ಕೊರತೆಯಿಲ್ಲದೇ ಸ್ಥಾನಮಾನಗಳು, ಜಾತಿ ಧರ್ಮಗಳು ಎಲ್ಲಿಯವರೆಗೂ ಗೌರವಿಸಲ್ಪಡುತ್ತವೆಯೋ ಅಲ್ಲಿಯವರೆಗೂ ಆ ಊರು ಚೆನ್ನ.  ಎಲ್ಲೋ ಒಂದು ಸೋಲು, ಒಂದು ಅವಮಾನ ಬಂದು ಚಿವುಟಲಿ ಇಡೀ ಊರು ಇದ್ದಕ್ಕಿದ್ದ ಹಾಗೆ ನಮಗೆ ಬೆಂಕಿಯ ಕುಲುಮೆಯಾಗಿಬಿಡುತ್ತದೆ. ಇರುವ ಎರಡು ಪೇಟೆಗಳಲ್ಲಿ ತಲೆಯೆತ್ತಿ ತಿರುಗುವುದು ಬೇಡವೆನಿಸುತ್ತದೆ. ಮನುಷ್ಯರು ಇರುವ ಯಾವ ಸ್ಥಳವೂ ಇಷ್ಟವಾಗುವುದಿಲ್ಲ, ಸಮುದ್ರ ತೀರವೂ, ಹೊಳೆ ಬದಿಯೂ, ಕೊನೆಗೆ ದೇವಸ್ಥಾನದ ಪ್ರಾಕಾರವೂ ನೆಮ್ಮದಿ ಕೊಡುವುದಿಲ್ಲ. ಪ್ರತಿಯೊಬ್ಬನೂ ಪ್ರತಿಯೊಂದೂ ಇನ್ನಷ್ಟು ನೋಯಿಸಲೆಂದೇ ಹೊಂಚು ಹಾಕುತ್ತಿದ್ದರೆಂದು ಅನಿಸಿಬಿಡುತ್ತದೆ. ಛೇ! ನನ್ನ ಅರ್ಹತೆಗೆ ನಾನೆಲ್ಲೋ ಇರಬೇಕಿತ್ತು, ಈ ಊರಿನ ಮಂಗಗಳಿಗೆ ಏನು ಗೊತ್ತು ಅನ್ನಲೂಬಹುದು, ಬದುಕನ್ನೇ ಸರ್ವನಾಶ ಮಾಡಿತು ಈ ಊರು ಅನಿಸಲೂಬಹುದು. ಹತ್ತಿರದವರ ಅಕಾಲಿಕ ಸಾವಂತೂ ಕೆಲವೊಮ್ಮೆ ಮನುಷ್ಯರನ್ನು ಮನೆ, ಊರು ಜಿಲ್ಲೆ ಯಾಕೆ ದೇಶವನ್ನೇ ಬಿಟ್ಟೋಡಿಸಬಹುದು. ಇಲ್ಲಿಂದ ದೂರ ಓಡಬೇಕು ಎಂಬ ಅನಿಸಿಕೆ ಒಂದು ಸಾರಿ ಹುಟ್ಟುವುದೇ ತಡ, ತಡವಿಲ್ಲದೆಯೇ ಮನಸ್ಸು ಅದನ್ನೊಪ್ಪಿಸಲು ಎಲ್ಲಾ ಕಾರ್ಯತಂತ್ರಗಳನ್ನು ಹೂಡುತ್ತದೆ. ಬೀಜ ಮಣ್ಣಿಗೆ ಬಿದ್ದು ಮೊಳಕೆಯೊಡೆದು ಗಿಡವಾಗುವುದು ಅದೆಷ್ಟರ ಹೊತ್ತು?

ಇದಕ್ಕೇ ಕಾಯುತ್ತಿದ್ದ ಅಜ್ಞಾತ ವಾಸದ ಆಸೆ ಹುಟ್ಟಿಸುವ  ನಗರ, ಮಹಾನಗರಗಳು ಕೈ ಬೀಸಿ ಕರೆಯತೊಡಗುತ್ತವೆ. ಸೌಲಭ್ಯಗಳಿಗಿಂತ ಮನುಷ್ಯನನ್ನು ಹೆಚ್ಚು ಸೆಳೆಯುವುದೇ ಈ ವಿಚಿತ್ರ ಅಪರಿಚಿತತೆಯಿರಬೇಕು. ಕುವೆಂಪು ಅವರ ಮಾತಿನ ಮೊದಲಾರ್ಧವಷ್ಟೇ ಇಲ್ಲಿ ನಿಜ, ಇಲ್ಲಿ ಯಾರೂ ಮುಖ್ಯರಲ್ಲ.... ಕಟ್ಟಡಗಳು, ಸಿಮೆಂಟಿನ ಕಂಬಗಳು, ಫ್ಲೈ ಓವರುಗಳು, ಮಾಲುಗಳು, ಕತ್ತಲೆಯೆಂದರೆ ಗೊತ್ತಿರದ ಕಪ್ಪು ಡಾಂಬರು ಹೊದ್ದ ರಸ್ತೆಗಳು ಎಲ್ಲದರಲ್ಲೂ ಒಂದು ನಿಗೂಢತೆ. ಯಾವುದು ನಮ್ಮದಲ್ಲ, ನಮ್ಮದಾಗಲಾರದೂ ಕೂಡಾ.

ಕಾಡಲ್ಲಿ, ಊರಲ್ಲಿ ಬೆಳೆದ ಗಿಡವನ್ನು ಎತ್ತಿಕೊಂಡು ಬಂದು ಮಣ್ಣಿನ ಕುಂಡದಲ್ಲಿ ಬೆಳೆಸಿದರೆ ಅದು ಚೆನ್ನಾಗಿ ಬೆಳೆದೀತೆ? ಬೆಳೆದರೂ ಮೊದಲಿನ ಹಾಗೆ ಹಣ್ಣು ಹೂವು ಕೊನೆಗೆ ಮೊದಲಿದ್ದ ಬಣ್ಣ, ಗಾತ್ರದ ಎಲೆಯನ್ನಾದರೂ ಹುಟ್ಟಿಸಿತೇ? ಕುಂಡದ ಮಣ್ಣಿನಲ್ಲಿ ಊರುವ ಮೊದಲು ಅದನ್ನು ತಂದ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ ತಂದ ಮಣ್ಣನ್ನು ಬೇರಿನ ಸುತ್ತ ಹಾಗೆಯೇ ಬಿಡುತ್ತೇವಲ್ಲ ? ಆ ಮಣ್ಣಿನ ಸ್ಪರ್ಶ, ವಾಸನೆಯಷ್ಟೇ ಅದಕ್ಕೆ ಸಿಗುವ ಮೃಷ್ಟಾನ್ನ. ಹೊಸ ಬಾಲ್ಕನಿಯ ಬಾಕಿ ಶೋಕಿ ಗಿಡಗಳ  ಎದುರು ಅದೂ ನಾಟಕ ಮಾಡಲು ಕಲಿತೀತು ಒಂದು ದಿನ.

ಮನಸ್ಸು ವಯಸ್ಸು ಮಾಗಿದಂತೆಲ್ಲಾ ದಕ್ಕುವ ಅಲ್ಪ ಸಲ್ಪ ನಿದ್ದೆಯಲ್ಲಿ ಬೀಳುವ ಕನಸಲ್ಲಿ ಊರಿನ ಮಸೀದಿಯ ಅಜಾನ್,  ದೇವಸ್ಥಾನದ ಘಂಟೆ ಸದ್ದೂ ಕೇಳತೊಡಗುತ್ತದೆ. ಗೋಳಿಬಜೆಯ ಎಣ್ಣೆಯ ವಾಸನೆಯಲ್ಲದೇ ರುಚಿಯೂ ನೆತ್ತಿಗೆ ಹತ್ತತೊಡಗುತ್ತದೆ. ಮನೆಯ ಇಂಟೀರೀಯರ್ ಡಿಸೈನಿಗೆಂದು ಸಿರಾಮಿಕ್ ಕುಂಡಗಳಲ್ಲಿ ತಂದಿಟ್ಟ ರಬ್ಬರ್ ಪ್ಲಾಂಟ್, ಫಿಗ್ ಪ್ಲಾಂಟುಗಳ ಅಗಲ ಎಲೆಗಳ ಮಧ್ಯದಲ್ಲಿ ಕೇಪುಳ, ನಂದಬಟ್ಟಲು, ಗೌರಿ ಹೂ, ಶಂಖಪುಷ್ಪ, ಮಿಠಾಯಿ ಹೂ, ಕರವೀರ, ರತ್ನಗಂಧಿ,  ನಾಗಸಂಪಿಗೆಗಳು ನಕ್ಕು ನಮ್ಮ ನೆನಪಿದೆಯೇ ಎಂದು ಕೇಳುತ್ತವೆ. ಬಾಲ್ಯದ  ಖಾರಕಡ್ಡಿ, ಬಾಂಬೆ ಮಿಠಾಯಿ, ಅಲ್ಕೋಹಾಲು ಎಂದು ಕರೆಯುತ್ತಿದ್ದ ಹಾಲು ಖೋವಾ, ಹಳದಿ ಬಣ್ಣದ ಬೋಟಿ ಕೊನೆಗೆ ಒಲೆಯಲ್ಲಿ ಸುಟ್ಟ ಹುಣಿಸೇ ಬೀಜಗಳ ನೆನಪೂ ಬಾಯಿಯಲ್ಲಿ ನೀರು ತರಿಸುತ್ತದೆ, ಸಾವಿರಾರು ರೂಪಾಯಿ ಕೊಟ್ಟ ಪಿಜಾವೂ ಸಪ್ಪೆ! ಘಂಟೆಗಿಷ್ಟರಂತೆ ಹಣ ಕೊಟ್ಟು ಆಡುವ ಬೌಲಿಂಗ್, ಸ್ನೂಕರ್ ಗಳು ತೆಂಗಿನ ಸೋಗೆಯ ಮೇಲೆ ಕೂತು ಅಂಗಳವಿಡೀ ಸರ್ಕಿಟು ಹೊಡೆದಾಗ ಕೊಡುತ್ತಿದ್ದ ಒಂದಂಶ ಖುಷಿಯೂ ಕೊಡುವುದಿಲ್ಲ.

ಮತ್ತೆ ಊರು ನೋಡುವ ಆಸೆಯಾಗಿ ಅಲ್ಲಿಗೊಂದು ಭೇಟಿ ಕೊಡುವ ಮನಸ್ಸಾಗುತ್ತದೆ, ಅಲ್ಲಿ ಹೋದರೆ ಸಿಗುವುದು ಅಸಾಧ್ಯ ನಿರಾಶೆಯಲ್ಲದೇ ಮತ್ತೇನಿಲ್ಲ! ಆಗಿದ್ದ ದೈತ್ಯಾಕಾರದ ಮರಗಳಿರದೆ ಊರು ಬಂದದ್ದೇ ಗೊತ್ತಾಗುವುದಿಲ್ಲ. ಅಂತೂ ಇಂತೂ ಒಳಹೊಕ್ಕರೆ ಹಳೆ ಊರಿನ ಅಸ್ಥಿಪಂಜರದ ಮೇಲೆ ಹೊಸ ಊರು ಬಂದು ಕೂತಿದೆ. ಆ ಹೊಸ ಊರಿನಲ್ಲಿ ನಮ್ಮ ಗುರುತುಗಳಿಲ್ಲ, ಮನುಷ್ಯರಿಗೂ ನಮ್ಮ ಗುರುತಿಲ್ಲ! ತಿಂಡಿಗಳೂ ಅಷ್ಟು ರುಚಿಯಿಲ್ಲ, ಮಲ್ಲಿಗೆಗೂ ಮೊದಲಿನ ಘಮವಿಲ್ಲ....

ನಮ್ಮ ನೆನಪಿನಲ್ಲಿರುವ ಊರು ಬೇರೆ, ಇದೇ ಬೇರೆ ಅನಿಸುತ್ತದೆ.

ಹಾಗೆಂದು ನಾವಲ್ಲೇ ಬದುಕಿದಿದ್ದರೆ ಸಂತೋಷವಾಗಿರುತ್ತಿದ್ದೆವೋ, ಇಲ್ಲಿಗೆ ಬಂದು ನಿಂತು ಹಿಂದೆ ನೋಡಿದ ಹಾದಿ ಸುಂದರವೆನಿಸುತ್ತದೆಯೋ ಗೊತ್ತಿಲ್ಲ! ಅಲ್ಲೇ ಇದ್ದಿದ್ದರೆ ಎಲ್ಲದಕ್ಕೂ ಈ ಬೆಲೆ ದಕ್ಕುತ್ತಿತ್ತೋ? ನಗರವಾಗಲಿ, ಬದಲಿಸಿದ ಊರಾಗಲೀ ಆ ಹೊತ್ತಿನ ನೋವ ನುಂಗಿ ಬದುಕ ನಡೆಸಲು, ಕಳೆದುಕೊಂಡ ಆತ್ಮವಿಶ್ವಾಸವ ಮರಳಿ ಕೊಟ್ಟಿತೋ? ಹೊಸ ಊರಿನೊಂದಿಗೆ ಹೊಸ ಬದುಕು ಶುರುವಾಯಿತೋ? ಮತ್ತೆ ಯಾವತ್ತೂ ಸಿಗದ ಹಾಗೆ ಕಳೆದೇ ಹೋದ ಸ್ನೇಹ, ಸಂಬಂಧ, ಪ್ರೀತಿ ನಮ್ಮನ್ನು ಸಂವೇದನೆಗಳಿಗೆ ಜಡಗೊಳಿಸಿತೇ ಅಥವಾ ಸಿಕ್ಕಿದ್ದನ್ನು ಕಾಪಿಟ್ಟುಕೊಳ್ಳುವ ಗುಣ ಹುಟ್ಟಿಸಿತೇ?  ಈ ಅಸಂಖ್ಯ ಪ್ರಶ್ನೆಗಳ ವ್ಯೂಹದಲ್ಲಿ ಸಿಲುಕಿ ಅರ್ಧ ಕನಸು ಅರ್ಧ ಎಚ್ಚರದಲ್ಲಿ ಆಯುಷ್ಯ ಕಳೆಯುತ್ತೇವೆ.

ಇವತ್ತು ಬೆಳಿಗ್ಗೆ ಬೆಳಿಗ್ಗೆ ಹೀಗೆಲ್ಲಾ ಅನಿಸಿತು. ಬರೆದೆ. ಅಮ್ಮ, ಅಣ್ಣನ ಟ್ರಾನ್ಸಫರ್ ಆಗುತ್ತಲೇ ಇದ್ದದ್ದರಿಂದ ರಾಶಿ ಊರು ತಿರುಗಿ ಕೊನೆಗೆ ನನ್ನೂರು ಯಾವುದು ಎಂದು ತಿಳಿಯದವಳು ನಾನು. ನಾನಿದ್ದ ಎಲ್ಲಾ ಊರುಗಳ ಹೂಗಳು, ತಿಂಡಿಗಳು, ದಾರಿಗಳು, ಸ್ನೇಹಿತರು, ಸಹಪಾಠಿಗಳು, ಟೀಚರ್ಸ್ ಕೊನೆಗೆ ಆ ಪ್ರದೇಶದ ಮರ ಗಿಡಗಳ ವೈವಿಧ್ಯತೆ ಮತ್ತು ಊರುಗಳ ವಾಸನೆ ಎಲ್ಲವೂ ನನ್ನಲ್ಲೇ ಉಳಿದುಕೊಂಡಿವೆ.  ಅಲ್ಲಿರುವುದು ಊರಾ, ನನ್ನೊಳಗಿರುವುದು ಊರಾ ನನಗೇ ಗೊತ್ತಿಲ್ಲ!

Saturday, January 18, 2020

ವೈಲ್ಡ್ ಕರ್ನಾಟಕ

ಸರ್ ಡೇವಿಡ್ ಅಟೆನ್ ಬರ್ಗ್  ನಿರೂಪಣೆಯನ್ನು ಅಸ್ವಾದಿಸುತ್ತಾ, ಪ್ರತೀ ಸೀನ್ ಅನ್ನು ಕಣ್ಣು ತುಂಬಿಕೊಳ್ಳುತ್ತಾ, ಕಿವಿಗಿಂಪಾದ ರಿಕಿ ಕೇಜ್ ಸಂಗೀತವನ್ನು ಸವಿಯುತ್ತಾ ಚಿತ್ರವನ್ನು ನೋಡುವುದೇ ಒಂದು ಸುಂದರ ಅನುಭೂತಿ.  ಶುಕ್ರವಾರ ಪಿವಿ ಆರ್ ಗಳಲ್ಲಿ ಬಿಡುಗಡೆಯಾದ
ವೈಲ್ಡ್ ಕರ್ನಾಟಕ ಒಂದು ಅದ್ಭುತ ಚಿತ್ರ. ವನ್ಯಜೀವಿ ಪ್ರೇಮಿಗಳಿಗೆ ಒಂದು ಖುಷಿಯ ವಿಚಾರ!

ಟ್ರೈಲರ್ ನೋಡಿದಾಗಿಂದ ತುದಿಗಾಲಲ್ಲಿ ನಿಂತಿದ್ದ ನಾನು, ಇಲ್ಲಿಯವರೆಗೂ ಯಾವ ಹೀರೋ ಚಿತ್ರಕ್ಕೂ ಫಸ್ಟ್ ಡೇ ಫಸ್ಟ್ ಶೋ ಹೋಗದವಳು ಈ ಚಿತ್ರವನ್ನು ಮೊದಲನೇ ದಿನ ಮೊದಲ ಶೋ ನೋಡಿದ್ದಾಯ್ತು. ಚಿತ್ರದ ಪ್ರತೀ ದೃಶ್ಯವನ್ನೂ ಪ್ರಿಂಟ್ ತೆಗೆದು ಫ್ರೇಮ್ ಹಾಕಿ ಗೋಡೆಯಲ್ಲಿ ತೂಗುಹಾಕಬಹುದು. ಹಂಪಿ, ಶಿವನಸಮುದ್ರ, ಪಶ್ಚಿಮ ಘಟ್ಟಗಳ ಕಾಡು ಹಾಗೂ ಇದುವರೆಗೂ ಹೆಚ್ಚು ಗೊತ್ತಿರದ ನೇತ್ರಾಣಿಯ ನೀರಿನೊಳಗಿನ ದೃಶ್ಯಗಳನ್ನು ಅದ್ಭುತವಾಗಿ, ಸುಂದರವಾಗಿ ಸೆರೆ ಹಿಡಿದಿದ್ದಾರೆ. ಪೂರ್ತಿ ತುಂಬಿದ್ದ ಥಿಯೇಟರ್ ನಲ್ಲಿ , ತೆರೆಯ ಮೇಲೆ ಪ್ರತಿ ಜೀವಿ ಪ್ರತ್ಯಕ್ಷವಾದಾಗೆಲ್ಲಾ ಸಂತಸದ ಉದ್ಗಾರದ ಅಲೆಗಳು ಏಳುತ್ತಿದ್ದವು. ಅಮೋಘವರ್ಷ, ಕಲ್ಯಾಣ್ ವರ್ಮ ಹಾಗೂ ಅದೆಷ್ಟು ವನ್ಯಜೀವಿ ಛಾಯಾಗ್ರಾಹಕರು ಇದಕ್ಕಾಗಿ ಶ್ರಮಿಸಿದ್ದಾರೋ ಅವರೆಲ್ಲರಿಗೂ ಒಂದು ಸಲಾಮ್! ಭಾರತದ ಅದರಲ್ಲೂ ಕನ್ನಡದ ಹೆಮ್ಮೆಯಿದು.  ವಾಕಿಂಗ್ ವಿಥ್ ದ ವೂಲ್ಫ್ಸ್ ಮತ್ತು ವೈಲ್ಡ್ ಡಾಗ್ ಡೈರಿಸ್ ನೋಡಿದಾಗ ಆದ ಖುಷಿ ಇನ್ನೊಮ್ಮೆ ಮರುಕಳಿಸಿತು. ನಾಲ್ಕು ವರ್ಷಗಳ ಅವರೆಲ್ಲರ ಪರಿಶ್ರಮದ ಈ ಚಿತ್ರದಲ್ಲಿ ತೋರಿಸಲಾದ ಪುಟ್ಟ ಪುಟ್ಟ ಘಟನೆಗಳು, ಕಥೆಗಳು ಪ್ರಾಣಿ ಪ್ರಪಂಚದ ಎಂದೂ ಮುಗಿಯದ ದಿನ ನಿತ್ಯದ ಹೋರಾಟದ ಬದುಕನ್ನೂ, ನಾವುಗಳು ಕಾಡನ್ನು ಉಳಿಸಲೇಬೇಕಾದ ಅನಿವಾರ್ಯತೆಯನ್ನೂ ಮತ್ತೊಮ್ಮೆ ತಿಳಿಸುತ್ತದೆ.

ಕೇವಲ ೫೪ ನಿಮಿಷಗಳ ಈ ಚಿತ್ರ ಪ್ರಾಣಿಪ್ರಿಯರಿಗೆ ಸ್ವರ್ಗದ ಬಾಗಿಲು ಒಂದು ಘಳಿಗೆ ತೆಗೆದು ತೋರಿಸಿ ಮತ್ತೆ ಮುಚ್ಚಿದ ಅನುಭವ ಕೊಡುತ್ತದೆ. ನಾಲ್ಕು ನೂರು ಘಂಟೆಗಳಿಂದ ಕನಿಷ್ಠ ನಾಲ್ಕು ಹೋಗಲಿ ಮೂರು ಕೊನೆಪಕ್ಷ ಎರಡು ಘಂಟೆಗಳಿಗಾದರೂ ಚಿತ್ರವನ್ನಿಳಿಸಬಹುದಿತ್ತು ಎಂದು ಬಲವಾಗಿ ಅನಿಸಿತು. ತಾಯಿ ಹುಲಿ ಮತ್ತದರ ಮರಿಗಳ ಪಯಣ, ಢೋಲ್ ಪ್ಯಾಕಿನ ಆಹಾರದ ಹುಡುಕಾಟ, ರಿವರ್ ಟರ್ನ್ ಮರಿಗಳ ಮೊದಲ ಹಾರಾಟ ಎಲ್ಲವೂ ಕವರ್ ಆಗಿದ್ದರೆ ಚೆನ್ನಾಗಿತ್ತೇನೋ! ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಪ್ರಾಣಿಗಳಲ್ಲದೇ ಕಾಡಿನ ಇನ್ನೂ ಒಂದಿಷ್ಟು ಜೀವ ವೈವಿಧ್ಯತೆ ಬಗ್ಗೆ ಹೇಳಬೇಕಿತ್ತು ಅನಿಸಿತು. ತಂದೆ ತಾಯಂದಿರು ಮಕ್ಕಳಿಗೆ ಇಂಥಹ ಚಿತ್ರಗಳನ್ನು ತೋರಿಸಿದರೆ ಅವರೆಲ್ಲರೂ ಹುಲಿ ಸಂರಕ್ಷಣೆ ಬಗ್ಗೆ ಆಸಕ್ತಿ ವಹಿಸದಿದ್ದರೂ ದಾರಿಯಲ್ಲಿ ಹೋಗುವ ನಾಯಿಗಳಿಗೆ ಕಲ್ಲು ಬಿಸಾಡುವುದೋ, ನೆಲದಲ್ಲಿ ತೆವಳುವ ಇರುವೆಗಳನ್ನು ಹೊಸಕಿ ಸಾಯಿಸುವುದೋ ಅಥವಾ ಪ್ರಪಂಚದ ಎಲ್ಲಾ ಸಹಜೀವಿಗಳನ್ನು ಸಮಾನಭಾವದಿಂದ ನೋಡುವ ಮನಸ್ಥಿತಿ ಬೆಳೆಸಿಕೊಳ್ಳಬಹುದೇನೋ! ನಮ್ಮ ಬಾಲ್ಯದಲ್ಲಿ ಈ ಥರಹದ ಚಿತ್ರಗಳು ಬಂದಾಗ ಶಾಲೆಯಿಂದ ಕರೆದುಕೊಂಡು ಹೋಗುವುದೋ ಅಥವಾ ಶಾಲೆಯಲ್ಲೇ ಪ್ರದರ್ಶನವನ್ನು ಏರ್ಪಡಿಸುವುದೋ ಮಾಡುತ್ತಿದ್ದರು. ಪಾಪ! ಈಗಿನ ಮಕ್ಕಳಿಗೆ ಆ ಭಾಗ್ಯವಿಲ್ಲ.

ಕೊನೆಯದಾಗಿ ಅಷ್ಟೂ ಕಾಡು, ಜೀವಗಳನ್ನು ಕಾಪಾಡಲು ಹೆಣಗುವ ಕರ್ನಾಟಕ ಅರಣ್ಯ ಇಲಾಖೆಗೆ ಧನ್ಯವಾದಗಳು.

ನಾನು ಪ್ರಾಣಿ ದ್ವೇಷಿ ಎಂದು ಎದೆ ತಟ್ಟಿ ಹೇಳುವವರ ಸಂಖ್ಯೆ ಕಡಿಮೆಯಾಗಲಿ ಎನ್ನುತ್ತಾ ಇಂಥಹ ಕಾಡುಗಳು, ಪ್ರಾಣಿಗಳು, ಜೀವ ವೈವಿಧ್ಯತೆ ಸಾವಿರ ಕೋಟಿಯಾಗಲಿ, ಅದರ ರಕ್ಷಣೆಗೆ ನಿಲ್ಲುವವರು ಹೆಚ್ಚಾಗಲಿ  ಮತ್ತು ಇನ್ನೆಂದೂ ಅಸ್ಟ್ರೇಲಿಯಾದಂಥ ದುರಂತ ಮರುಕಳಿಸದೇ ಇರಲಿ ಎಂದು ಆಶಿಸುತ್ತೇನೆ.
ಇನ್ನೂ ನೋಡಿರದಿದ್ದರೆ ಹೋಗಿ ನೋಡಿ!