Tuesday, October 28, 2014

ಭೀತ

ಭೇಟಿಯಾಗಿ ಗಂಟೆಯೂ ಕಳೆದಿಲ್ಲ
ತಿಂಗಳ ಖರ್ಚಿಗೆಂದು ನೀ ಕೊಟ್ಟ ಖುಷಿಯ ಗಂಟು 
ದಾರಿಯಲ್ಲೇ ಖಾಲಿಯಾಗಿ ಬಿಟ್ಟಿದೆಯಲ್ಲೇ ಹುಡುಗಿ!
ಈ ದಾರಿ ಹೊರಳಿ ಮನೆ ಕಡೆ ತಿರುಗುವಷ್ಟರಲ್ಲಿ
ನಾ ತಿರುಗೋಡಿ ಬರಲೇ ನೀನಿರುವಲ್ಲಿ.
ಅಲ್ಲಿ ಮನೆಯಲ್ಲಿ ಕುಳಿತಿಹುದು 
ಹಸಿದ ಸೀಳು ನಾಯಿಯಂತಹ ಏಕಾಂತ 
ನಿನ್ನೆ ತಿಂದ ಬಿಟ್ಟಿದ್ದ ನನ್ನ ಮಾಂಸದ ತುಣುಕುಗಳು 
ಅದಾಗಲೇ ಮುಗಿಸಿಬಿಟ್ಟಿರಬೇಕು.
ಇಂದು ಇನ್ನಷ್ಟು ದಾಹಿಯಾಗಿರಬೇಕು 
ಹಸಿದಿರಬೇಕು ನನ್ನ ರಕ್ತ ಚಪ್ಪರಿಸಲು. 
ಮೂಲೆಯಲ್ಲಿ ಕುಳಿತ ಭಯಭೀತ ದೇವನೂ
ಬಾರದಿರಲಿ ಮನೆಗೆ ಇವನೆಂದು 
ಅರೆಗಣ್ಣು ಮುಚ್ಚಿ ಪ್ರಾರ್ಥಿಸಿರಬೇಕು. 
ದೇವನನ್ನೂ ಕ್ರೂರಾತಿಕ್ರೂರ ನೋಟದಿಂದ 
ದಿಟ್ಟಿಸಿ ನಕ್ಕ ನಗು ಇಲ್ಲಿಯವರೆಗೂ ಅಪ್ಪಳಿಸಿತಲ್ಲೆ 
ನೀ ತೊಟ್ಟ ದಿರಿಸೂ, ಹಣೆಗಿಟ್ಟ ಚುಕ್ಕಿ 
ಯಾವುದರ ರಂಗೂ ನೆನಪಾಗದೇ ಹುಡುಗಿ
ಸೀಳು ನಾಯಿಯ ಬಾಯಲ್ಲಿ ಉಳಿವ 
ನನ್ನ ಜಿಡ್ಡು ರಕ್ತದ ಬಣ್ಣವಷ್ಟೇ ನೆನಹು.
ಹೇಳೇ, ನೀ ಬರುವೆಯೇನು ನನ್ನ ಜತೆ
ದೇವನಿಗೆ ಧೈರ್ಯ ತುಂಬಿ ಕಣ್ಣ ಬಿಡಿಸಲು
ಸೀಳು ನಾಯಿಯ ಬಡಿದೋಡಿಸಲು ??

Illustrations done for poems, published in Vijaya Karnataka Deepavali Visheshanka







Monday, October 27, 2014

ಕಾಲ



ಕಾಲನೆ, ಯಾಕಿಷ್ಟು ಕ್ರೂರಿ ನೀ
ಅಮ್ಮ ಇಲ್ಲದೆ ಹುಟ್ಟಿದಿಯೇನು ನೀ
ಎದೆ ಹಾಲ ಕುಡಿಯದೆ ಬೆಳೆದೆಯೇನು
ನಿನಗೂ ಬರಲಿ ಒಂದು ಕಾಲ
ಜನರೇ ಇರದಿರಲಿ ಈ  ಲೋಕದಲಿ 
ಸಿಗದಿರಲಿ ನರಪಿಳ್ಳೆಯೂ ನಿನ್ನಾಟಕೆ 

Wednesday, October 22, 2014

ಪುಟ್ಟನ ದೀಪಾವಳಿ

ಬೆಳ್ಳಂಬೆಳಗ್ಗೆ ಎದ್ದು ಎಣ್ಣೆ ಸ್ನಾನ ಮಾಡಿ
ಜಾಣನ ಹಾಗೆ ಕುಳಿತ ಪುಟ್ಟ ಕಾಯುತ್ತಿದ್ದಾನೆ
ಕತ್ತಲಾಗಲು.
ಅಜ್ಜಿ ಕಳಿಸಿದ ಚಕ್ಕುಲಿ, ಚಿವಡ ತಿಂದಾಯ್ತು
ಮೊಸರಿನೊಂದಿಗೆ.
ಹಾಂ, ಮತ್ತಿಷ್ಟು ಕರ್ಜಿಕಾಯಿ, ಬೇಸನ್ ಲಡ್ಡು ಕೂಡಾ ಸ್ವಾಹ
ಅಪ್ಪನೊಂದಿಗೆ ಸೇರಿ.
ಅಯ್ಯೋ! ಇನ್ನೆಷ್ಟು ನಿಮಿಷ ಕತ್ತಲಾಗಲು
ಅಮ್ಮನನ್ನು ಪೀಡಿಸಿ ಪೀಡಿಸಿ ಇಟ್ಟ.
ಪುಟ್ಟನಿಷ್ಟದ ಶ್ಯಾವಿಗೆ ಪಾಯಸ, ಕೋಸಂಬರಿಯ
ತಯಾರಿಯಲ್ಲಿದ್ದ ಅಮ್ಮನಿಗೆ ನಗುವೋ ನಗು.
ಅಂತೂ ಇಂತೂ ಅವನಿಷ್ಟದ ಊಟವನ್ನೇನೋ ಮುಗಿಸಿದ
ಅದರೂ ಕತ್ತಲಾಗಲೇ ಇಲ್ಲ. ಪಾಪ!
ಸಿಟ್ಟಲ್ಲಿ ಸೂರ್ಯನನ್ನೇ ದುರು ದುರು ನೋಡಿದ
ಸಧ್ಯ! ಸೂರ್ಯ ಸುಟ್ಟು ಬೂದಿಯಾಗಲಿಲ್ಲ.
ಮತ್ತೆ ಅಮ್ಮನ ಬಳಿ ಓಡಿದ, ಮತ್ತಿಷ್ಟು ಕಾಡಿದ
ಅಜ್ಜ ಕೊಟ್ಟ ತನ್ನ ಪುಟ್ಟ ಗಡಿಯಾರವನ್ನು ತಿರುಗಿಸಿಟ್ಟ
ಅದು ಮುಂದೆಯೋ ಹಿಂದೆಯೋ ಅವನಿಗೂ ಗೊತ್ತಿಲ್ಲ.
ಅಮ್ಮ ಕಾಫಿ ಕುಡಿಯೋ ಹೊತ್ತು
ಅದು ಸಂಜೆಯೆಂದು ಪುಟ್ಟನಿಗೂ ಗೊತ್ತು
ಕತ್ತಲಾಗಲು ಇನ್ನು ಇದೆ ಸ್ವಲ್ಪವೇ ಹೊತ್ತು!
ಶುರುವಾಯಿತು ಹಣತೆಗೆ ಎಣ್ಣೆ ಹಾಕೋ ಸಡಗರ
ತನ್ನ ಪುಟ್ಟ ಪುಟ್ಟ ಕೈಗಳಲ್ಲಿ ಜೋಡಿಸಿಟ್ಟ ದೀಪಗಳ.
ಚಾಮಿ, ಬೇಗ ಕತ್ತಲಾಗಲಿಯಪ್ಪ ಇವತ್ತು
ನಿಂಗೆ ಅಮ್ಮ ಮಾಡಿಟ್ಟ ಪಾಯಸ ಕೊಡ್ತೀನಿ
ಅಂದವನು ಕಣ್ಣು ಬಿಟ್ಟರೆ ದೀಪಗಳು ಹೊಳೆಯುತ್ತಿವೆ.
ಪುಟ್ಟನಿಗೆ ಹೆದರಿ ಓಡಿಬಿಟ್ಟಿದ್ದಾನೆ ಸೂರ್ಯ
ಅವರಮ್ಮನ ಬಳಿ ದೂರು ಕೊಡಲು.
ಕತ್ತಲಲ್ಲಿ ಕಣ್ಣು ಮಿಟುಕಿಸಿತು ಹಣತೆಯೊಂದು
ಚೆಂದಕ್ಕೆ ತಯಾರಾದ ಪುಟ್ಟ ಪೋರನ ಕಂಡು.
ಕುಣಿದು ಕುಪ್ಪಳಿಸಿದ ಕಂದನ ಕಣ್ಣಲ್ಲಿ ಕಂಡಳು ಅಮ್ಮ
ಪಟಾಕಿ, ಮತಾಪು, ಹೂವಿನ ಕುಂಡದ ಅಬ್ಬರ.
ದೀಪಾವಳಿ ಇದಕ್ಕಿಂತ ಸುಂದರವಾಗಲು ಸಾಧ್ಯವೇ?

Monday, August 25, 2014

ನೆನಪು



ನೆನಪುಗಳ ದಾರಿಯೇ ಮರೆತು ಹೋದ ಮೇಲೆ

ಇನ್ಯಾವ ಓಣಿ ನೆನಪಾದೀತು?

ನೆನಪಿನ ದೋಣಿ ತಳಕ್ಕಪ್ಪಳಿಸಿ ಚೂರಾದ ಮೇಲೆ

ಯಾವ ಭಾವ ತಾನೇ ತೇಲೀತು?

ನೆನಪುಗಳೇ, ನೀವಿಲ್ಲದೆ ನಾವಿಲ್ಲ....

ನಾವಿಲ್ಲದಿದ್ದರೂ ನೀವಿರುತ್ತೀರಿ, ನಿಮಗೆ ಸಾವಿಲ್ಲವೇ ಇಲ್ಲ

ಯಾರ ಋಣ, ಹಂಗಿರದ ಅರಸರು ನೀವು!

Wednesday, August 20, 2014

ಗೋಕುಲಾಷ್ಟಮಿ



 ಎಲ್ಲಾ ಅಮ್ಮಂದಿರಂತೆ ನಾನೂ ನನ್ನ ಪುಟ್ಟನಿಗೆ ಕೃಷ್ಣನ ವೇಷ ಹಾಕಿಸಿ ಹಿಂಸೆ ಕೊಟ್ಟಿದ್ದೀನಿ. ನನ್ನ ಪುಟ್ಟ ಕೊಳಲು ಹಿಡಿದು ಅಪ್ಪನನ್ನು ಓಡಿಸಿಕೊಂಡೇ ಹೊರಟಿದ್ದ ಉಪದ್ರ ಕೊಟ್ಟಿದ್ದಕ್ಕೆ!!!!! ಈ ಕೃಷ್ಣಾಷ್ಟಮಿಗೆ ಅಮ್ಮಂದಿರ ಸಂತಸ, ಸಂಭ್ರಮ ನೋಡಿ ಈ ಸಾಲುಗಳು ಹೊಳೆದವು. ಚರ್ವಿತ ಚರ್ವಣವೆನಿಸಿದರೆ ಕ್ಷಮಿಸಿ.

ಇಂದು ಗೋಕುಲಾಷ್ಟಮಿಯಂತೆ, ಊರಿನ ಬೀದಿ ಬೀದಿಗಳಲ್ಲಿ
ಚಿಲ್ಟಾರಿ
ಕೃಷ್ಣ - ರಾಧೆಯರ ಮೆರೆದಾಟ

ಕಚ್ಚೆಯೊಳಗಿಂದ ಇಣುಕುವ ಜೀನ್ಸ್ ಚಡ್ಡಿ ಕೃಷ್ಣನದ್ದಾದರೆ
ಬಿಗಿದಿದೆ ಮಿರ ಮಿರ ಮಿಂಚುವ ಬೆಲ್ಟು ರಾಧೆಯ ಲಂಗಕ್ಕೆ
ಟವಲ್ಲು, ತಿಂಡಿ, ನೀರು ತುಂಬಿದ ಟೊಣಪ ಬ್ಯಾಗು ಅಮ್ಮನ ಹೆಗಲಿಗೆ.

ಕಣ್ಣಿನವರೆಗೆ ಜಾರಿದ ಕಿರೀ, ಸೊಂಟದಲ್ಲಿ ಸಿಕ್ಕಿಸಿದ ಕೊಳಲು
ಕಣ್ಣು, ಮೂಗು, ಬಾಯಿಂ ಜಾರಿದ ನೀರ ಮೇಲೆ ಬಳಿದ ಪೌಡರ್ ಗುರುತು
ಮುಕ್ಕಾಲಂಶ ಕಂದಮ್ಮಗಳೆಲ್ಲಾ ಓರೆ ನಾಮದ ವಿಠಲರೆ!

ಬೇರೆ ದಿನ ಸಿಗದ ಅಮ್ಮನ ಕೆಂಪು ಲಿಪ್ಸ್ಟಿಕ್ ತುಟಿಗಲ್ಲದೆ ಕೆನ್ನೆಗೂ ಬಳಿದ ರಾಧೆ
ಕಿವಿಯ ದೊಡ್ಡ ಲೋಲಾಕು ಕುಣಿಸುತ್ತಾ, ತನಗೂ ಉದ್ದನೆಯ ಜಡೆ ಎಂಬ ಸಂತಸದಲಿ
ಅದಕೆ ಸುತ್ತಿದ್ದ ಮಲ್ಲಿಗೆ ಹಾರವ ಕೀಳಲೆತ್ನಿಸುವಾಕೆ .

ಅದೋ ಅಲ್ಲೊಬ್ಬಳು ರಾಧೆಯ ಗಲಾಟೆ, ಕೃಷ್ಣನಾಗಬೇಕಂತೆ ಅವಳಿಗೆ
ಯಾಕಮ್ಮ ಅಂದರೆ ಬೇಡವಂತೆ ಕೈಯಲ್ಲಿನ ಕೊಡಪಾನ
ಬೇಕೆ
ಬೇಕಂತೆ ಕೊಳಲು ಮತ್ತು ಜುಟ್ಟಿಗೊಂದು ನವಿಲು ಗರಿ!


ದಾರಿಗಳಲ್ಲಿ, ಸ್ಕೂಲುಗಳಲ್ಲಿ , ದೇವಸ್ಥಾನಗಳಲ್ಲಿ
ಕೊನೆಗೆ ಫೋಟೋ ಸ್ಟುಡಿಯೋಗಳಲ್ಲೂ
ಕಣ್ಣಲ್ಲಿ ನಿದ್ದೆ, ಕೈಯಲ್ಲಿ ಬಿಸ್ಕತ್ತು  ಹಿಡಿದ  ಕೃಷ್ಣ - ರಾಧೆಯರ  ದಂಡು.

ಮುಖದಲ್ಲಿ ನಗುವರಳಿಸಲು ಲಂಚ ಕೊಡುವ ಅಮ್ಮಂದಿ ಹೆಣಗಾಟ
ಸುರಿಯುವ ಬೆವರೊರೆಸಿಕೊಳ್ಳಲು ಫೋಟೋಗ್ರಾಫರನ ಪೇಚಾಟ
ಎಲ್ಲದರ ನಡುವೆ, ಹಿಂಸೆ ಕೊಡುವ ಬಟ್ಟೆಯೊಡನೆ ಪುಟಾಣಿಗಳ ಗುದ್ದಾಟ.

ಕೃಷ್ಣ ಹುಟ್ಟಿದ್ದಕ್ಕೆ, ನಡೆವುದಂತೆ ಗೋಕುಲಾಷ್ಟಮಿ ಪೂಜೆ.
ರಾಧೆಯೊಬ್ಬಳು ಕೇಳಿದಳು ಅಮ್ಮನಿಗೆ,
ರಾಧಾಷ್ಟಮಿ ಯಾವಾಗಮ್ಮ ? ರಾಧೆಯ ಬರ್ಥ್ ಡೇ ಯಾವಾಗ ?

ಸಾವಿರ ಸಾವಿರ ಗೋಪಿಯರ ಮಧ್ಯೆ ನಿಂತಿದ್ದನಂತೆ ಕೃಷ್ಣನಲ್ಲಿ
ಇಂದು ಹತ್ತಾರು ಕೃಷ್ಣರ ನಡುವೆ ನಿಂತಿದ್ದಾಳೆ ಒಬ್ಬಳು ರಾಧೆಯಿಲ್ಲಿ!